ಲೋಕಅದಾಲತ್: 437 ಪ್ರಕರಣ ಇತ್ಯರ್ಥ, 1.77 ಕೋಟಿ ಪರಿಹಾರ

ಉಡುಪಿ, ಮಾ.13: ರಾಜ್ಯಾದ್ಯಂತ ಪ್ರತಿ ತಿಂಗಳ 2ನೇ ಶನಿವಾರ ಪ್ರತಿ ನ್ಯಾಯಾಲಯಗಳಲ್ಲೂ ಲೋಕ ಅದಾಲತ್ ನಡೆಸಿ ನಾನಾ ರೀತಿಯ ಪ್ರಕರಣ ಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗುತ್ತಿದೆ.
ಉಡುಪಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವಿಲೇವಾರಿಗೆ ಬಾಕಿ ಇರುವ ಮುಖ್ಯವಾಗಿ ಮೋಟಾರು ವಾಹನ ಅಪಘಾತ ಹಕ್ಕೊತ್ತಾಯ ಹಾಗೂ ಇತರ ಪ್ರಕರಣಗಳಲ್ಲಿ ಒಟ್ಟು 547 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಪಡೆದು 437 ಪ್ರಕರಣಗಳ ವಿಲೇವಾರಿ ಮೂಲಕ 1.77 ಕೋಟಿ ರೂ.ಗಳ ಪರಿಹಾರ ನೀಡಲು ಆದೇಶಿಸಲಾಗಿದೆ.
ಇತ್ಯರ್ಥಗೊಂಡ ಒಟ್ಟು 6 ಪ್ರಕರಣಗಳಲ್ಲಿ ಸ್ಥಳದಲ್ಲೇ ಫಲಾನುಭವಿಗಳಿಗೆ ಪರಿಹಾರದ ಹಣವನ್ನು ಚೆಕ್ ಮೂಲಕ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಶಿವರಾಂ ಕೆ. ವಿತರಿಸಿದರು.
ಲೋಕಅದಾಲತ್ನಲ್ಲಿ ಸ್ಥಳೀಯ ನ್ಯಾಯಾಧೀಶರು, ಸಂಬಂಧ ಪಟ್ಟ ನ್ಯಾಯವಾದಿಗಳು, ವಿಮಾ ಕಂಪೆನಿ ಅಧಿಕಾರಿಗಳು ಹಾಗೂ ಕಕ್ಷಿದಾರರು ಪಾಲ್ಗೊಂಡಿದ್ದು, ಸಾರ್ವಜನಿಕರು ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ರಾಜಿ ಸಂಧಾನ ಮಾಡಿ ಕೊಂಡು ಇತ್ಯರ್ಥಪಡಿಸಿಕೊಳ್ಳಬೇಕೆಂದು ಮನವಿ ಮಾಡಿದೆ.





