ಅರುಣಾಬ್ಜನ ಮಹಾಭಾರತೋ ಪಳಂತುಳು ಮಹಾಕಾವ್ಯ: ಮಾ.18ರಂದು ಕೃತಿ ವಿಮರ್ಷೆ ಮತ್ತು ವಿಚಾರ ಸಂಕಿರಣ
ಪುತ್ತೂರು,ಮಾ.14: ಶಿವಳ್ಳಿ ಸಂಪದ ಪುತ್ತೂರು ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಅರುಣಾಬ್ಜನ ಮಹಾಭಾರತೋ ಪಳಂತುಳು ಮಹಾಕಾವ್ಯ ಇದರ ‘ಕೃತಿ ವಿಮರ್ಷೆ ಮತ್ತು ವಿಚಾರ ಸಂಕಿರಣ’ ಮಾ.18ರಂದು ಪುತ್ತೂರಿನ ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ಬೋರ್ಡಿಂಗ್ನಲ್ಲಿ ನಡೆಯಲಿದೆ ಎಂದು ಶಿವಳ್ಳಿ ಸಂಪದದ ಅಧ್ಯಕ್ಷ ಟಿ. ರಂಗನಾಥ ಉಂಗ್ರುಪುಳಿತ್ತಾಯ ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮವನ್ನು ರಾಜ್ಯ ತುಳು ಸಾಹಿತ್ಯ ಅಕಾಡಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಉದ್ಘಾಟಿಸಲಿದ್ದಾರೆ. ಸಂಪನ್ಮೂ ವ್ಯಕ್ತಿಯಾಗಿ ಕಾಸರಗೋಡು ಸರ್ಕಾರಿ ಕಾಲೇಜ್ನ ಪ್ರಾಧ್ಯಾಪಕ ರಾಧಾಕೃಷ್ಣ ಬೆಳ್ಳೂರು ವಿಷಯ ಮಂಡಿಸಲಿದ್ದಾರೆ. ಶಿವಳ್ಳಿ ಸಂಪದದ ಅಧ್ಯಕ್ಷ ಟಿ. ರಂಗನಾಥ ಉಂಗ್ರುಪುಳಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ತುಳು ಅಕಾಡಮಿಯ ರಿಜಿಸ್ಟ್ರಾರ್ ಬಿ. ಚಂದ್ರಹಾಸ ರೈ, ಶಿವಳ್ಳಿ ಸಂಪದದ ಗೌರವ ಅಧ್ಯಕ್ಷ ಎನ್.ಸುಬ್ರಹ್ಮಣ್ಯಂ ಕೊಳತ್ತಾಯ ಮತ್ತು ಕವಿತಾ ಅಡೂರು ಭಾಗವಹಿಸಲಿದ್ದಾರೆ ಎಂದರು.
ವೆಂಕಟರಾಜ ಪುಣಿಚಿತ್ತಾಯರ ದೀರ್ಘ ಶ್ರಮದ ಸಂಶೋಧನೆಯಿಂದ ಪ್ರಕಾಶಗೊಂಡ ಈ ಪಳಂತುಳುವಿನ ಸಾಹಿತ್ಯ ಸಂಸ್ಕೃತಿ ಜನಸಾಮಾನ್ಯ ತುಳುವರಿಗೆ ಇನ್ನೂ ತಲುಪಿಲ್ಲ. ಈ ದಿಸೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದ ಅವರು ಈ ಕೃತಿಯ ವಿಚಾರ ಸಂಕಿರಣದಲ್ಲಿ ಪ್ರಾಚೀನ ಲಿಖಿತ ತುಳು ಸಾಹಿತ್ಯದಲ್ಲಿ ಉಲ್ಲೇಖಗೊಂಡ ತುಳುವಿನ ಭಾಷಾ ಸಾಮರ್ಥ್ಯ, ಛಂದಸ್ಸು, ಅಲಂಕಾರ ಶೈಲಿಗಳನ್ನು ಸಾಮಾನ್ಯರಿಗೆ ಪರಿಚಿಸುವುದು ಮತ್ತು ನಾಲ್ಕು ಶತಮಾನಗಳ ಹಿಂದಿನ ತುಳುವರ ಜನಜೀವನ, ಬಳಕೆ ವಸ್ತುಗಳು, ಸಂಪ್ರದಾಯಗಳ ಬಗ್ಗೆ ಅರಿಯುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ತುಳು ಭಾಷೆಯ ಪ್ರಬೇಧವಾಗಿರು ಪಳಂತುಳು ಭಾಷೆಯು ಬಹುಪಾಲು ಬ್ರಾಹ್ಮಣರ ತುಳುವಿನಲ್ಲಿ ಇಂದಿಗೂ ಜೀವಂತವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತುಳು ಸಂಪದದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಕೋಶಾಧಿಕಾರಿ ಶರತ್ಕುಮಾರ್ ಶಿಬರೂರು, ವಕ್ತಾರ ಭಾಸ್ಕರ ಬಾರ್ಯ ಮತ್ತು ಮಹಿಳಾ ಸಂಪದ ಅಧ್ಯಕ್ಷೆ ಪ್ರೇಮಲತಾ ರಾವ್ ಉಪಸ್ಥಿತರಿದ್ದರು.







