ದೇಶದಲ್ಲೇ ಪ್ರಥಮ ಪ್ರಯೋಗಕ್ಕೆ ರಾಜ್ಯ ಸರಕಾರ ಚಾಲನೆ
ರೈತರ ಬ್ಯಾಂಕ್ ಖಾತೆಗೆ ಬೆಳೆನಷ್ಟ ಪರಿಹಾರ ಧನ

ಕಂದಾಯ ಸಚಿವರ ತವರಿಗೆ 26.12 ಕೋ.ರೂ. ಪರಿಹಾರ ಬಿಡುಗಡೆ
ಶಿವಮೊಗ್ಗದ 37, 542 ಫಲಾನುಭವಿಗಳು
ಶಿವಮೊಗ್ಗ, ಮಾ. 14: ರಾಜ್ಯದಲ್ಲಿ ಅನಾವೃಷ್ಟಿಯಿಂದ ಬೆಳೆ ಹಾನಿಗೀಡಾದ ರೈತರಿಗೆ ರಾಜ್ಯ ಸರಕಾರ ಪರಿಹಾರ ಮೊತ್ತ ಬಿಡುಗಡೆ ಮಾಡಿದ್ದು, ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರ ಖಾತೆಗೆ ನೇರವಾಗಿ ಪರಿಹಾರ ಮೊತ್ತ ಸಂದಾಯ ಮಾಡುವ ಮೂಲಕ ಪರಿಹಾರ ವಿತರಣೆಯ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಪ್ರಸ್ತುತ ರಾಜ್ಯ ಸರಕಾರ ಪ್ರಥಮ ಹಂತವಾಗಿ 10 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಮೊತ್ತ ಜಮಾ ಮಾಡುತ್ತಿದ್ದು, ಶಿವಮೊಗ್ಗ ಜಿಲ್ಲೆಯ 37, 542 ರೈತರಿಗೆ 26.12 ಕೋಟಿ ರೂ. ಪರಿ ಹಾರ ಮೊತ್ತ ಮಂಜೂರಾಗಿದೆ.
ಈಗಾಗಲೇ ಜಿಲ್ಲಾಡಳಿತವು ಜಿಲ್ಲೆಯ ಏಳು ತಾಲೂಕುಗಳ ತಹಶೀಲ್ದಾರರಿಗೆ ಆಯಾ ತಾಲೂಕು ವ್ಯಾಪ್ತಿಯಲ್ಲಿ ಪರಿಹಾರ ಮಂಜೂರಾಗಿರುವ ರೈತರ ಪಟ್ಟಿಯನ್ನು ರವಾನಿಸಿದೆ. ಫಲಾನುಭವಿ ರೈತರ ಪಟ್ಟಿ ಪರಿಶೀಲಿಸಿ ಏನಾದರೂ ಲೋಪದೋಷಗಳಿದ್ದರೆ ತಕ್ಷಣವೇ ಮಾಹಿತಿ ರವಾನಿಸಬೇಕು. ಜೊತೆಗೆ ರೈತರ ಬ್ಯಾಂಕ್ ಖಾತೆಗಳಿಗೆ ಜೋಡಣೆ ಮಾಡಲಾಗಿರುವ ಆಧಾರ್ ಸಂಖ್ಯೆ ಸಮರ್ಪಕವಾಗಿದೆಯೇ ಎಂಬುವುದರ ಮಾಹಿತಿ ಕಲೆ ಹಾಕುವಂತೆ ಜಿಲ್ಲಾಡಳಿತವು ತಹಶೀಲ್ದಾರ್ರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತ್ಮುನ್ನು ಸಂಪರ್ಕಿಸಿದ್ದ ಸುದ್ದಿಗಾರ ರೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ‘ಪರಿಹಾರ ಮೊತ್ತ ಜಮಾ ಮಾಡುವಲ್ಲಿ ಯಾವುದೇ ಕಾರಣಕ್ಕೂ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಎಚ್ಚರವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ. ಈ ವಿಷಯದಲ್ಲಿ ಏನಾದರೂಪ್ರಮಾದ ವಾದರೆ ಸಂಬಂಧಿಸಿದ ತಾಲೂಕು ಆಡಳಿತಗಳನ್ನೇ ನೇರ ಹೊಣೆಯಾ ಸಲಾ ಗುವುದು ಎಂದು ತಹಶೀಲ್ದಾ ರ್ಗಳಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಅರ್ಜಿಗಳ ವಿವರ: ಕಳೆದ ಕೆಲ ತಿಂಗಳ ಹಿಂದೆ ಮುಂಗಾರು ಮಳೆ ಕೊರತೆಯಿಂದ ಬೆಳೆ ನಷ್ಟಕ್ಕೀಡಾದ ರೈತರಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅರ್ಜಿ ಪಡೆಯಲಾಗಿತ್ತು. ಈ ಅರ್ಜಿಗಳ ಆಧಾರದ ಮೇಲೆ ಸಂಬಂಧಿಸಿದ ಅಧಿಕಾರಿಗಳು ಕೃಷಿ ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು ಎಂದು ಕೆ. ಚೆನ್ನಬಸಪ್ಪ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಏಳು ತಾಲೂಕುಗಳಿಂದ ಒಟ್ಟಾರೆ 1 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಪ್ರಥಮ ಹಂತದಲ್ಲಿ ಇದೀಗ ಸರಕಾರವು 37, 542 ರೈತರಿಗೆ ಪರಿಹಾರ ಮೊತ್ತ ಬಿಡುಗಡೆ ಮಾಡಿದೆ. ಉಳಿದ ರೈತರಿಗೆ ಕಾಲಮಿತಿಯಲ್ಲಿ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಣ ಹಾಗೂ ನೀರಾವರಿ ಭೂಮಿಗೆ ಪ್ರತ್ಯೇಕ ಬೆಳೆ ನಷ್ಟದ ಪರಿಹಾರ ಮೊತ್ತವನ್ನು ಸರಕಾರ ನಿಗದಿ ಮಾಡಿದೆ. ಅದರಂತೆ ತಲಾ ಒಂದು ಹೆಕ್ಟೇರ್ ಒಣ ಭೂಮಿಗೆ 6,800 ರೂ. ಹಾಗೂ ನೀರಾವರಿ ಭೂಮಿಗೆ 13,600 ರೂ. ಪರಿಹಾರ ಮೊತ್ತ ನಿಗದಿ ಪಡಿಸಿದೆ ಎಂದು ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೇರ ಜಮಾ: ಪ್ರಪ್ರಥಮ ಪ್ರಯೋಗ
ಆಧಾರ್ ಸಂಪರ್ಕಿತ ಸಂರಕ್ಷಣೆ ತಂತ್ರಾಂಶದೊಂದಿಗೆ ಬೆಳೆನಷ್ಟ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ಜಮೆ ಮಾಡುವ ವ್ಯವಸ್ಥೆಗೆ ರಾಜ್ಯ ಸರಕಾರ ಚಾಲನೆ ನೀಡಿದೆ. ಇದು ಇಡೀ ದೇಶದಲ್ಲಿಯೇ ಪ್ರಪ್ರಥಮ ಪ್ರಯೋಗವಾಗಿದೆ. ಈ ವ್ಯವಸ್ಥೆಯಿಂದ ರೈತರಿಗೆ ಅತ್ಯಂತ ಸುಲಭವಾಗಿ ಪರಿಹಾರ ಮೊತ್ತ ಲಭ್ಯವಾಗಲಿದೆ. ಪರಿಹಾರ ಮೊತ್ತಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಿದಂತಾಗುತ್ತದೆ ಎಂದು ರೈತರು ಸಂತಸ ವ್ಯಕ್ತ ಪಡಿಸಿದ್ದಾರೆ.
ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲು ಅಪಾರ ಡಿಸಿ ಕರೆ
ರಾಜ್ಯ ಸರಕಾರವು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ಪರಿಹಾರ ಮೊತ್ತ ಜಮಾ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡದ ರೈತರು ತಕ್ಷಣವೇ ಸಂಬಂಧಿಸಿದ ಬ್ಯಾಂಕ್ ತೆರಳಿ ತಮ್ಮ ಖಾತೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮನವಿ ಮಾಡಿದ್ದಾರೆ.







