ಕಾಡ್ಗಿಚ್ಚಿನ ನಿಯಂತ್ರಣ, ಅರಣ್ಯ ಸಿಬ್ಬಂದಿಗಳಿಗೆ ಸೌಲಭ್ಯ ಕಲ್ಪಿಸಿ: ವಿಧಾನಪರಿಷತ್ನಲ್ಲಿ ಕೋಟ ಆಗ್ರಹ

ಉಡುಪಿ, ಮಾ.16:ರಾಜ್ಯದ ಅನೇಕ ಜಿಲ್ಲೆಗಳ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕಂಡು ಬಂದಿರುವ ಕಾಡ್ಗಿಚ್ಚಿನ ನಿಯಂತ್ರಣ ಹಾಗೂ ಇಂತಹ ಪ್ರಕರಣದಲ್ಲಿ ಅರಣ್ಯ ಸಿಬ್ಬಂದಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವಂತೆ ರಾಜ್ಯ ವಿಧಾನಪರಿಷತ್ನ ಶೂನ್ಯ ವೇಳೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸದನದ ಗಮನ ಸೆಳೆದರು.
ವಿಪರೀತ ಬರಗಾಲ ಮತ್ತು ಬಿಸಿಲಿನ ಝಳ ಸೇರಿದಂತೆ, ಕರ್ನಾಟಕದ ಬಹುತೇಕ ಕಡೆಗಳಲ್ಲಿ ಕಾಡ್ಗಿಚ್ಚಿನ ಅನಾಹುತ ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯದ ಬಂಡಿಪುರ, ಕಪ್ಪತಗುಡ್ಡ, ನಾಗರಹೊಳೆ, ಪಶ್ಚಿಮ ಘಟ್ಟದ ಕೆಲವು ಭಾಗಗಳು, ಸಕಲೇಶಪುರದ ಶುಂಠಿಕೊಪ್ಪ ಮುಂತಾದ ಪ್ರದೇಶದಲ್ಲಿಕಾಡ್ಗಿಚ್ಚಿನ ಹಾವಳಿಯಿಂದ ಇಡೀ ಅರಣ್ಯ ಪ್ರದೇಶವೇ ಬೆಂಕಿಗಾಹುತಿಯಾಗುತ್ತಿದೆ. ಬಂಡಿಪುರದಲ್ಲಿ 1200 ಹೆಕ್ಟೇರ್, ಸಕಲೇಶಪುರದ ಕೆಲವು ಭಾಗ ಮತ್ತು ಕಪ್ಪತಗುಡ್ಡದ ಕೆಲವು ಭಾಗದಲ್ಲಿ 400 ಹೆಕ್ಟೇರ್ಗೂ ಅಧಿಕ ಪ್ರದೇಶ, ಶುಂಟಿಕೊಪ್ಪದಲ್ಲಿ 700 ಹೆಕ್ಟೇರ್ಗೂ ಹೆಚ್ಚು ಪ್ರದೇಶ ಕಾಡ್ಗಿಚ್ಚಿನ ಹಾವಳಿಗೆ ತುತ್ತಾಗಿದೆ.ನಾಗರಹೊಳೆ ಪ್ರದೇಶದಲ್ಲಿ ಕಾಡ್ಗಿಚ್ಚಿಗೆ 500 ಹೆಕ್ಟೇರ್ಗೂ ಅಧಿಕ ಪ್ರದೇಶ ಬೆಂಕಿಗಾಹುತಿಯಾಗಿದೆ.
ಇಂತಹ ಕಾಡ್ಗಿಚ್ಚಿನಿಂದ ಅಮೂಲ್ಯ ಮರಮಟ್ಟುಗಳು, ಶತಮಾನದಿಂದ ಬೆಳೆದು ನಿಂತ ಕಾಡು ಪ್ರದೇಶದ ಬೆಲೆಬಾಳುವ ಮರಗಳು, ಅಮೂಲ್ಯಔಷಧಿ ಸಸ್ಯಗಳು ಮತ್ತು ಜೀವಸಂಕುಲಗಳು ನಾಶವಾಗುತ್ತಿದ್ದರೂ ಅರಣ್ಯ ಇಲಾಖೆ ಕೈಚೆಲ್ಲಿ ಕುಳಿತ ಸುದ್ದಿ ಪ್ರಕಟವಾಗುತ್ತಿದೆ. ತಜ್ಞರ ಅನುಭವದ ಪ್ರಕಾರ, ಈಗ ನಶಿಸಿಹೋದ ಕಾಡಿನ ಗಿಡಬಳ್ಳಿ ಮರ, ಬಳ್ಳಿಗಳು ಮತ್ತೆ ಹುಟ್ಟಿ ಬೆಳೆಯಲು ಇನ್ನು ನೂರಾರು ವರ್ಷಗಳ ಬೇಕಾಗುತ್ತದೆ ಎಂದವರು ಹೇಳಿದರು.
ಅರಣ್ಯ ಸಂರಕ್ಷಣೆಯ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬೇಕಾದ ಹಿರಿಯ ಅಧಿಕಾರಿಗಳು ರಾಜಧಾನಿಯ ಕಚೇರಿಯಲ್ಲಿ ಕುಳಿತು ಒಣ ಆದೇಶಗಳನ್ನು ನೀಡುತಿದ್ದಾರೆ. ಕನಿಷ್ಟ ಹೊತ್ತಿ ಉರಿದ ಕಾಡಿನ ಸಮೀಪಕ್ಕೂ ಸುಳಿದಿಲ್ಲ ಎಂದು ಪತ್ರಿಕೆಗಳು ವರದಿ ಮಾಡುತ್ತಿವೆ. ಕಾಡ್ಗಿಚ್ಚನ್ನು ನಿಯಂತ್ರಿಸಲು ಬೇಕಾದ ಸೌಲಭ್ಯ ಹಾಗೂ ಸಿಬಂದಿಗಳ ಕೊರತೆ, ವಾಹನಗಳ ಸಮಸ್ಯೆ,ಕಿರಿಯ ಅಧಿಕಾರಿಗಳನ್ನು ಸಂಕಷ್ಟಕ್ಕೆ ದೂಡಿದೆ ಎಂದವರು ದೂರಿದರು.
ರಾಜ್ಯಸರಕಾರ ಮಂಡಿಸಿದ ಬಜೆಟ್ನಲ್ಲಿ, ಕಾಡ್ಗಿಚ್ಚಿನ ನಿಯಂತ್ರಣಕ್ಕೆಯೋಜನೆ ರೂಪಿಸಿದ ಸುದ್ದಿಯಿಲ್ಲ. ಬಂಡಿಪುರ ಹುಲಿ ಯೋಜನೆ ವ್ಯಾಪ್ತಿಗೆ ಒಳಪಟ್ಟ ಚಾಮರಾಜನಗರ ಜಿಲ್ಲೆಯ ಕಲ್ಕೆರಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ನಂದಿಸುವ ಪ್ರಯತ್ನದಲ್ಲಿ, ಅರಣ್ಯರಕ್ಷಕ 26ರ ಹರೆಯದ ಮುರುಗೇಶ ತಮ್ಮ ಪ್ರಾಣವನ್ನೆ ತೆತ್ತಿದ್ದಾರೆ. ಆತನ ಕುಟುಂಬಕ್ಕೆ ಪರಿಹಾರದ ಜೊತೆಗೆ ಒಬ್ಬ ಸದಸ್ಯನಿಗೆ ಅನುಕಂಪದ ಆಧಾರದಲ್ಲಿ ಶೀಘ್ರವೇ ಉದ್ಯೋಗ ನೀಡಬೇಕೆಂದು ಕೋಟ ಒತ್ತಾಯಿಸಿದರು.
ಮುಂಬರುವ ದಿನಗಳಲ್ಲಿ ಹೆಚ್ಚಬಹುದಾದ ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಸರಕಾರ ವ್ಯಾಪಕವಾದ ಯೋಜನೆಗಳನ್ನು ರೂಪಿಸುವಂತೆ ವಿಧಾನ ಪರಿಷತ್ನಲ್ಲಿಕೋಟಾ ಶ್ರೀನಿವಾಸ ಪೂಜಾರಿ ಶೂನ್ಯ ವೇಳೆಯಲ್ಲಿ ಸದನದ ಗಮನ ಸೆಳೆದರು.







