ಉಡುಪಿ: ಪಣಿಯಾಡಿ ಪ್ರಶಸ್ತಿಗೆ ತುಳು ಕಾದಂಬರಿ ಹಸ್ತಪ್ರತಿ ಆಹ್ವಾನ

ಉಡುಪಿ, ಮಾ.16: ತುಳುಕೂಟ ಉಡುಪಿ ಇದರ ಆಶ್ರಯದಲ್ಲಿ ಪ್ರತಿ ವರ್ಷ ನೀಡುವ ಎಸ್.ಯು.ಪಣಿಯಾಡಿ ಕಾದಂಬರಿ ಪ್ರಶಸ್ತಿಗಾಗಿ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದಲ್ಲಿ ತುಳು ಚಳುವಳಿಯ ಪ್ರವರ್ತಕ ದಿ.ಎಸ್.ಯು. ಪಣಿಯಾಡಿ ನೆನಪಿನಲ್ಲಿ ನೀಡುವ ಈ ಪ್ರಶಸ್ತಿ ಕೆಲ ನಿಬಂಧನೆಗಳಿಗೊಳಪಟ್ಟು ಕಾದಂಬರಿ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದು ಎಂದು ತುಳುಕೂಟ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಸ್ತಿಗೆ ಕಳುಹಿಸುವ ಹಸ್ತಪ್ರತಿಗಳು ತುಳುಕಾದಂಬರಿಯದ್ದಾಗಿರಬೇಕು. ಅದು ಈವರೆಗೆ ಎಲ್ಲೂ ಬಹುಮಾನಕ್ಕೆ ಆಯ್ಕೆಯಾಗಿರಬಾರದು. ಹಸ್ತಪ್ರತಿ ಸುಂದರವಾದ ಕೈಬರಹ, ಬೆರಳಚ್ಚು ಅಥವಾ ಕಂಪ್ಯೂಟರ್ ಮುದ್ರಿತ (ಡಿಟಿಪಿ) ರೂಪದಲ್ಲಿರಬೇಕು.
ಕಾದಂಬರಿಯು ತುಳುನಾಡಿನ ಭೌಗೋಳಿಕ ಚಿತ್ರಣ, ತುಳು ಸಂಸ್ಕೃತಿಯನ್ನು ಬಿಂಬಿಸುವ ಅಂಶಗಳಿಂದ ಕೂಡಿದ್ದು, ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತುವನ್ನು ಆಧರಿಸಿರಬಹುದು. ಕಾದಂಬರಿ ಮುದ್ರಿತವಾದಗ 120 ಪುಟಗಳನ್ನು ಮೀರುವಂತಿರಬೇಕು.
ಪ್ರಶಸ್ತಿಯು 8000 ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಹಸ್ತ ಪ್ರತಿಯನ್ನು ಮಾ.31ರ ಒಳಗೆ ಪ್ರಕಾಶ್ ಸುವರ್ಣ ಕಟಪಾಡಿ ಸಂಚಾಲಕರು, ಪಣಿಯಾಡಿ ಕಾದಂಬರಿ ಪ್ರಶಸ್ತಿ, ಯಶಸ್ ಕೋಟೆ ಬೀಡಿನ ಬಳಿ, ಕೋಟೆ ಕಟಪಾಡಿ ಅಂಚೆ ಉಡುಪಿ ಜಿಲ್ಲೆ- 574105 ಈ ವಿಳಾಸಕ್ಕೆ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 9964019229, 9880059298ನ್ನು ಸಂಪರ್ಕಿಸಬಹುದು ಎಂದು ತುಳುಕೂಟದ ಪ್ರಕಟನೆಯಲ್ಲಿ ತಿಳಿಸಲಾಗಿದೆ.







