ಉಡುಪಿ: 'ಅನ್ವೇಷಣೆ' ಚಿತ್ರಕಲಾ ಪ್ರದರ್ಶನ ಉದ್ಘಾಟನೆ

ಉಡುಪಿ, ಮಾ.16: ಉಡುಪಿ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ ಮಂಗಳೂರಿನ ಮಹಾಲಸಾ ಚಿತ್ರಕಲಾ ಕಾಲೇಜಿನ ವಿದ್ಯಾರ್ಥಿಗಳ ಸೃಜನಶೀಲ ಚಿತ್ರಕಲಾ ಕೃತಿಗಳ ಪ್ರದರ್ಶನ ಱಅನ್ವೇಷಣೆೞಯನ್ನು ಹಿರಿಯ ಕಲಾವಿದ, ಮಣಿಪಾಲ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ಉನ್ನೀಕೃಷ್ಣನ್ ಕೆ. ಗುರುವಾರ ಉದ್ಘಾಟಿಸಿದರು.
ಪ್ರದರ್ಶನದಲ್ಲಿ ಕಲಾಕೃತಿಗಳು ಅತ್ಯುತ್ತಮವಾಗಿ ಅಭಿವ್ಯಕ್ತಗೊಂಡಿದ್ದು, ದೇಶೀಯ ಸಂಸ್ಕೃತಿಯ ವಿವಿಧ ಮುಖಗಳು ಸೃಜನಾತ್ಮಕವಾಗಿ ಮೂಡಿ ಬಂದಿದೆ. ವಿದ್ಯಾರ್ಥಿಗಳ ಪ್ರಜ್ಞಾಪೂರ್ವಕ ವಿಚಾರ, ಚಿಂತನೆ, ಪ್ರಯೋಗ ಶೀಲತೆ ಸಮಾಜಮುಖಿಯಾಗಿ ತೆರೆದುಕೊಂಡಿವೆ. ಕಲಾಕೃತಿಗಳು ಸಾಮಾಜಿಕ ಸಂದೇಶವನ್ನು ಸಾರುತ್ತಿವೆ ಎಂದು ಡಾ.ಉನ್ನಿಕೃಷ್ಣನ್ ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಡುಪಿ ಚಿತ್ರಕಲಾ ಮಂದಿರದ ಕಾರ್ಯದರ್ಶಿ ಡಾ.ಯು.ಸಿ.ನಿರಂಜನ್ ಮಾತನಾಡಿ, ಕಲಾಪ್ರಕ್ರಿಯೆ ಎಂಬುದು ಕೊಡು ಕೊಳ್ಳುವಿಕೆಯಿಂದ ಶ್ರೇಷ್ಠ ಹಂತವನ್ನು ತಲುಪಲು ಸಾಧ್ಯವಿದೆ. ಮಣ್ಣಿನ ಗುಣಗಳುಳ್ಳ ಈ ಕಲಾಕೃತಿಗಳು ವೃತ್ತಿಪರ ಗುಣಗಳನ್ನು ಹೊಂದಿವೆ. ವಿದ್ಯಾರ್ಥಿ ಗಳು ಸಮಕಾಲಿನ ಸಮಾಜದಲ್ಲಿ ತಮ್ಮನ್ನು ತೆರೆದು ನೋಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಲಸಾ ಕಾಲೇಜಿನ ಪ್ರಾಂಶುಪಾಲ ಪುರು ಷೋತ್ತಮ ನಾಯಕ್ ಮಾತನಾಡಿ, ಚಿತ್ರಕಲೆಯ ಅಧ್ಯಯನದಲ್ಲಿ ಅನ್ವೇಷಣೆ ಇದ್ದಾಗ ಮಾತ್ರ ಹೊಸತನ್ನು ಕೊಡಲು ಸಾಧ್ಯವಿದೆ ಎಂದು ಹೇಳಿದರು.
ಚಿತ್ರಕಲೆ ವಿಭಾಗದ ಮುಖ್ಯಸ್ಥ ಎನ್.ಎಸ್.ಪತ್ತಾರ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಉಡುಪಿ ಚಿತ್ರಕಲಾಮಂದಿರದ ಪ್ರಾಚಾರ್ಯ ರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು.
19 ಕಲಾ ವಿದ್ಯಾರ್ಥಿಗಳು ಜಲವರ್ಣ, ಅಕ್ರಾಲಿಕ್, ತೈಲವರ್ಣ ಮಾಧ್ಯಮದಲ್ಲಿ ರಚಿಸಿದ 32 ಸೃಜನಶೀಲ ವರ್ಣ ಚಿತ್ರಗಳನ್ನು ಪ್ರದರ್ಶಿಸ ಲಾಗಿತ್ತು. ರೈತರ ಸಂಕಷ್ಟ, ಸಿಂಧೂ ನಾಗರಿಕತೆಯ ಚಿತ್ರಣಗಳನ್ನು ವಿದ್ಯಾರ್ಥಿ ಗಳು ಕಲೆಯ ಮೂಲಕ ಅದ್ಭುತವಾಗಿ ಚಿತ್ರಿಸಿದ್ದಾರೆ.







