ಬೆರಗು ಮೂಡಿಸಿದ ಬಾಹುಬಲಿ-2 ಟ್ರೈಲರ್
ಭಾರತದಾದ್ಯಂತ ಚಿತ್ರಪ್ರೇಮಿಗಳು ಕಾತರದಿಂದ ಕಾಯುತ್ತಿರುವ ‘‘ಬಾಹುಬಲಿ: ದಿ ಕನ್ಕ್ಲೂಷನ್’’ ಚಿತ್ರದ ಬಿಡುಗಡೆಗೆ ಈಗಾಗಲೇ ಕ್ಷಣಗಣನೆ ಆರಂಭಗೊಂಡಿದೆ. ಕೆಲವು ದಿನಗಳ ಹಿಂದೆ ಚಿತ್ರದ ಟ್ರೈಲರ್ ಹೊರಬಂದಿದೆ.
ಟ್ರೈಲರ್ನಲ್ಲಿ ಪ್ರದರ್ಶಿಸಲಾಗಿರುವ ಕೆಲವು ಅದ್ಭುತವಾಗಿ ಮೂಡಿಬಂದಿದ್ದು, ಈ ಅದ್ದೂರಿ ಚಿತ್ರದ ಬಗ್ಗೆ ಸಿನೆಮಾ ರಸಿಕರಲ್ಲಿ ಇರುವ ಕುತೂಹಲವನ್ನು ಇನ್ನಷ್ಟು ಕೆರಳಿಸಿದೆ. ಅಮರೇಂದ್ರ ಬಾಹುಬಲಿ ಎಂಬ ಕಥಾಪಾತ್ರದಲ್ಲಿ ನಾಯಕ ನಟ ಪ್ರಭಾಸ್ ಕಾಣಿಸಿಕೊಂಡಿದ್ದಾರೆ.
ಅನುಷ್ಕಾಶೆಟ್ಟಿ (ದೇವಸೇನಾ), ಸತ್ಯರಾಜ್ (ಕಟ್ಟಪ್ಪ), ರಾಣಾ ದಗ್ಗುಬಾಟಿ (ಬಲ್ಲಾಳದೇವ) ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಸ್ಯಾಂಡಲ್ವುಡ್ ಹೀರೋ ಕಿಚ್ಚ ಸುದೀಪ್ ಕೂಡಾ ಬಾಹುಬಲಿ-2ರಲ್ಲಿ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ತೆಲುಗು,ಹಿಂದಿ,ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿರುವ ‘ಬಾಹುಬಲಿ 2’ ಚಿತ್ರದ ವಿತರಣೆಯ ಹಕ್ಕುಗಳನ್ನು ಖರೀದಿಸಲು, ವಿತರಕರ ನಡುವೆ ಬಿರುಸಿನ ಸ್ಪರ್ಧೆ ನಡೆಯುತ್ತಿದೆ.
ಒಟ್ಟಿನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರವು, ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಎಪ್ರಿಲ್ 28ರಂದು ಬಿಡುಗಡೆಯಾಗಲಿದೆ. ಅಲ್ಲಿಗೆ, ಚಿತ್ರರಸಿಕರನ್ನು ಕಾಡುತ್ತಿರುವ ‘ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ? ಎಂಬ ಪ್ರಶ್ನೆಗೆ ಉತ್ತರ ಕೂಡಾ ದೊರೆಯಲಿದೆ!.