ಮುಖ್ಯಮಂತ್ರಿ ಹುದ್ದೆಗೇರಿದ ಬಿಎಸ್ಸೆಫ್ ಯೋಧ
ಇಂಫಾಲ್, ಮಾ.17: ಮಣಿಪುರದ ಹೊಸ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರಿಗೆ ಫುಟ್ಬಾಲ್ ಎಂದರೆ ಪಂಚಪ್ರಾಣ. ಮುಖ್ಯಮಂತ್ರಿ ಹುದ್ದೆಗೇರಿದ ಪ್ರಪ್ರಥಮ ಬಿಎಸ್ಸೆಫ್ ಯೋಧ ಅವರಾಗಿದ್ದಾರೆ. ಅವರ ಫುಟ್ಬಾಲ್ ಪ್ರೀತಿಯೇ ಹಲವು ವರ್ಷಗಳ ಹಿಂದೆ ಅವರನ್ನು ಬಿಎಸ್ಸೆಫ್ ಸೇರುವಂತೆ ಮಾಡಿತ್ತು. ಗಡಿ ಭದ್ರತಾ ಪಡೆಯ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಅವರು ಪತ್ರಿಕೋದ್ಯಮದಲ್ಲಿ ಕೆಲಸಮಾಡಿ ಈಗ ರಾಜಕೀಯ ವನ್ನು ನೆಚ್ಚಿದ್ದಾರೆ.
ಇಂಫಾಲ್ನಿಂದ 15 ಕಿ.ಮೀ. ದೂರದಲ್ಲಿರುವ ಹೀಂಗಾಂಗ್ನಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದ ಸಿಂಗ್ , ಒಬ್ಬ ಪ್ರತಿಭಾವಂತ ಫುಟ್ಬಾಲ್ ಆಟಗಾರನಾಗಿ ಎಲ್ಲರ ಗಮನ ಸೆಳೆದಿದ್ದರು. ಇದರಿಂದಾಗಿಯೇ ಅವರಿಗೆ ಬಿಎಸ್ಸೆಫ್ ಸೇರುವ ಅವಕಾಶ ಲಭಿಸಿತು.
ನಂತರ ಬಿಎಸ್ಸೆಫ್ ತ್ಯಜಿಸಿ ಅವರು ಸ್ಥಳೀಯ ಭಾಷಾ ಪತ್ರಿಕೆ ನಹರೊಲ್ ಗಿ ತೌಡಂಗ್ ಆರಂಭಿಸಿದ್ದರು. ಪತ್ರಿಕೋದ್ಯಮದಲ್ಲಿ ಯಾವುದೇ ಅನುಭವವಿಲ್ಲದಿದ್ದರೂ ಅವರ ಈ ಪ್ರಯತ್ನ ಯಶಸ್ಸು ಕಂಡಿತ್ತು.
2000ರಲ್ಲಿ ಅವರ ಮುದ್ರಣಾಲಯದ ಮೇಲೆ ದಾಳಿ ನಡೆಸಿದ ಪೊಲೀಸರು ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿದ್ದರು. ಅವರ ಪತ್ರಿಕೆಯಲ್ಲಿ ಉಗ್ರರಿಗೆ ಬೆಂಬಲವಾಗಿ ಸುದ್ದಿಗಳು ಬರುತ್ತಿವೆಯೆಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು.
ಈ ಘಟನೆ ಅವರ ಮನಸ್ಸು ಬದಲಾಯಿಸುವಂತೆ ಮಾಡಿತ್ತು. ಅವರು ತಾವು ಅತಿಯಾಗಿ ಪ್ರೀತಿಸುತ್ತಿದ್ದ ಪತ್ರಿಕೋದ್ಯಮ ವೃತ್ತಿಯನ್ನು ತ್ಯಜಿಸಿ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಈ ವಿಚಾರವನ್ನು ಬುಧವಾರ ಮುಖ್ಯಮಂತ್ರಿಯಾಗಿ ಅಧಿಕಾರಗ್ರಹಣ ಮಾಡಿದ ಸಂದರ್ಭದಲ್ಲೂ ಬಿರೇನ್ ಸಿಂಗ್ ನೆನಪಿಸಿಕೊಂಡಿದ್ದರು.
2002ರಲ್ಲಿ ವಿಧಾನಸಭಾ ಚುನಾವಣೆಯನ್ನು ಡೆಮಾಕ್ರೆಟಿಕ್ ರಿವೊಲ್ಯುಶನರಿ ಪೀಪಲ್ಸ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಅವರು ಸುಲಭದಲ್ಲಿ ಜಯ ಸಾಧಿಸಿದ್ದರು. ಮೇ 2003ರಲ್ಲಿ ಕಾಂಗ್ರೆಸ್ ಸೇರಿದ ಅವರು ಸಚಿವರೂ ಆದರು. ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸಿದ ಅವರು ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡಿದ್ದರು.
ವಿವಿಧ ಖಾತೆಗಳನ್ನು ಹೊಂದಿದ್ದ ಅವರು ಮಣಿಪುರ ಸರಕಾರದ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದರಲ್ಲದೆ ಹಿಂದಿನ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ಅವರ ಸಮೀಪವರ್ತಿಯಾಗಿದ್ದರು.
ಆದರೆ ಬಹಳ ಬೇಗನೆ ಇಬೊಬಿ ಸಿಂಗ್ ವಿರುದ್ಧ ತಿರುಗಿ ಬಿದ್ದ ಅವರನ್ನು ಸಿಂಗ್ ಕಳೆದ ವರ್ಷ ಪಕ್ಷದಿಂದ ಹೊರ ಹಾಕಿದ್ದರು. ಆ ನಂತರ ತನ್ನ ಶಾಸಕ ಸ್ಥಾನವನ್ನೂ ತ್ಯಜಿಸಿದ ಬಿರೇನ್ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ಸೇರಿದ್ದರು.