ಮರಕ್ಕೆ ಕಾರು ಢಿಕ್ಕಿ: ರೇಸರ್ ಅಶ್ವಿನ್ ಸುಂದರ್, ಅವರ ಪತ್ನಿ ಸಜೀವ ದಹನ
ಚೆನ್ನೈ, ಮಾ.18: ವೃತ್ತಿಪರ ಕಾರು ರೇಸರ್ ಅಶ್ವಿನ್ ಸುಂದರ್ ಹಾಗೂ ಅವರ ಪತ್ನಿ ನಿವೇದಿತಾ ಪ್ರಯಾಣಿಸುತ್ತಿದ್ದ ಬಿಎಂಡಬ್ಲು ಕಾರು ಶನಿವಾರ ಬೆಳಗ್ಗಿನ ಜಾವ ರಸ್ತೆ ಬದಿಯ ಮರವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ತಗಲಿ ದಂಪತಿ ಸಜೀವ ದಹನಗೊಂಡ ದಾರುಣ ಘಟನೆ ನಡೆದಿದೆ.
ಸುಂದರ್ ಹಾಗೂ ಅವರ ಪತ್ನಿ ಕಾರಿನೊಳಗೆ ಸಿಲುಕಿಹಾಕಿಕೊಂಡಿದ್ದು ಅವರಿಗೆ ಕಾರಿನ ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಚಲಿಸುತ್ತಿದ್ದ ಕಾರು ಮರಕ್ಕೆ ಢಿಕ್ಕಿಯಾಗಿದ್ದು, ಮರ ಹಾಗೂ ರಸ್ತೆ ಬದಿಯ ಗೋಡೆಯ ಮಧ್ಯೆ ಕಾರು ಸಿಲುಕಿಹಾಕಿಕೊಂಡಿತ್ತು. ಘಟನೆ ನಡೆದ ತಕ್ಷಣವೇ ಕಾರಿಗೆ ಬೆಂಕಿಹೊತ್ತಿಕೊಂಡಿದ್ದು, ದಂಪತಿ ಸಜೀವ ದಹನವಾಗಿದ್ದಾರೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.
ಕಾರಿಗೆ ಬೆಂಕಿಹತ್ತಿಕೊಂಡಿರುವುದನ್ನು ನೋಡಿದ ದಾರಿಹೋಕರು ಚೆನ್ನೈ ನಗರ ಪೊಲೀಸ್ ಕಂಟ್ರೋಲ್ ರೂಮ್ಗೆ ಮಾಹಿತಿ ನೀಡಿದ್ದಾರೆ. ಅಡ್ಯಾರ್ ಟ್ರಾಫಿಕ್ ತನಿಖಾ ತಂಡದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ಅಡ್ಯಾರ್ ಟ್ರಾಫಿಕ್ ತನಿಖಾ ತಂಡದ ಪೊಲೀಸ್ ಇನ್ಸ್ಪೆಕ್ಟರ್ ವನಿತಾ ಹಾಗೂ ಅವರ ತಂಡ ಕಾರಿನ ಬಾಗಿಲನ್ನು ಒಡೆದು ದಂಪತಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ. ಮೃತದೇಹವನ್ನು ಪೋಸ್ಟ್ಮಾರ್ಟಂಗಾಗಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಆರಂಭದಲ್ಲಿ ಪೊಲೀಸರಿಗೆ ಮೃತ ದಂಪತಿಯ ಗುರುತು ಪತ್ತೆಯಾಗಿರಲಿಲ್ಲ. ಕಾರಿನ ನೋಂದಣಿ ಸಂಖ್ಯೆಯ ಸಹಾಯದಿಂದ ಇಬ್ಬರ ಗುರುತು ಪತ್ತೆ ಹಚ್ಚಿದ್ದಾರೆ. ದಂಪತಿ ಪೋರುರ್ನ ಅಲಪಕ್ಕಮ್ನಲ್ಲಿ ನೆಲೆಸಿದ್ದು, ರಾಜಾ ಅಣ್ಣಮಲೈಪುರಂನಲ್ಲಿರುವ ಸ್ನೇಹಿತರ ಮನೆಗೆ ಭೇಟಿ ನೀಡಿ ತಮ್ಮ ಮನೆಗೆ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.