ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣ:ಮಾ.22ರಂದು ಶಿಕ್ಷೆ ಪ್ರಮಾಣ ಪ್ರಕಟ

ಭವೇಶ ಪಟೇಲ್ (ಫೈಲ್ ಚಿತ್ರ)
ಜೈಪುರ,ಮಾ.18: ಇಲ್ಲಿಯ ಎನ್ಐಎ ವಿಶೇಷ ನ್ಯಾಯಾಲಯವು ಶನಿವಾರ 2007ರ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ದೋಷಿಗಳಿಗೆ ಶಿಕ್ಷೆಯ ಪ್ರಮಾಣ ಕುರಿತಂತೆ ತನ್ನ ಆದೇಶವನ್ನು ಮಾ.22ಕ್ಕೆ ಕಾಯ್ದಿರಿಸಿದೆ. ಶಿಕ್ಷೆಯ ಪ್ರಮಾಣ ಕುರಿತಂತೆ ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳ ಪರ ವಕೀಲರು ಇಂದು ತಮ್ಮ ವಾದಗಳನ್ನು ಪೂರ್ಣಗೊಳಿಸಿದರು.
ಮಾ.8ರಂದು ಪ್ರಕರಣದ ತೀರ್ಪು ಪ್ರಕಟಿಸಿದ್ದ ನ್ಯಾಯಾಲಯವು ಭವೇಶ ಪಟೇಲ್, ದೇವೇಂದ್ರ ಗುಪ್ತಾ ಮತ್ತು ಸುನಿಲ್ ಜೋಶಿ ಅವರನ್ನು ದೋಷಿಗಳೆಂದು ಘೋಷಿಸಿತ್ತು ಮತ್ತು ಸ್ವಾಮಿ ಅಸೀಮಾನಂದ ಸೇರಿದಂತೆ ಇತರ ಏಳು ಜನರನ್ನು ಖುಲಾಸೆಗೊಳಿಸಿತ್ತು. ದೋಷಿಗಳ ಪೈಕಿ ಮಾಜಿ ಆರೆಸ್ಸೆಸ್ ಪ್ರಚಾರಕ ಜೋಶಿ 2007ರಲ್ಲಿ ಕೊಲೆಯಾಗಿದ್ದಾನೆ.
2007,ಅ.11ರಂದು ರಮಝಾನ್ ಸಂದರ್ಭದಲ್ಲಿ ಸೂಫಿ ಸಂತ ಖ್ವಾಝಾ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಮೂವರು ಮೃತಪಟ್ಟು, ಇತರ 17 ಜನರು ಗಾಯಗೊಂಡಿದ್ದರು. ಸಂಜೆಯ ಇಫ್ತಾರ್ ಸಮಯದಲ್ಲಿ ಸ್ಫೋಟ ಸಂಭವಿಸಿದಾಗ 5,000ಕ್ಕೂ ಅಧಿಕ ಜನರು ದರ್ಗಾದಲ್ಲಿದ್ದರು.
Next Story





