ಅಂಬೇಡ್ಕರ್ ಚಿಂತನೆಯಿಂದ ಬದಲಾವಣೆ ಸಾಧ್ಯ: ಜಿಲ್ಲಾಧಿಕಾರಿ ಪ್ರಿಯಾಂಕ

ಉಡುಪಿ, ಮಾ.18: ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಚಿಂತನೆಗಳಿಂದ ಸಮಗ್ರ ಬದ ಲಾವಣೆ ಸಾಧ್ಯ. ಆದುದರಿಂದ ಪ್ರಸ್ತುತ ನಾವು ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ರ 125ನೆ ಜಯಂತಿ ವರ್ಷಾಚರಣೆ ಪ್ರಯುಕ್ತ 'ಅಂಬೇಡ್ಕರ್ ಜ್ಞಾನ ದರ್ಶನ ಅಭಿಯಾನ' ಅಂತಾರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರಿಗೆ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾದ ಎರಡು ದಿನಗಳ ವಿಭಾಗೀಯ ಮಟ್ಟದ ಕಾರ್ಯಾಗಾರವನ್ನು ಶನಿವಾರ ಡೋಲು ಬಾರಿಸುವು ದರ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಂಬೇಡ್ಕರ್ ಅವರ ಸಾಧನೆಯ ಕುರಿತು ಮಾಹಿತಿಯ ಕೊರತೆಯಿಂದ ಅವರ ಚಿಂತನೆಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲ ರಾಗಿದ್ದೇವೆ, ಅಂಬೇಡ್ಕರ್ ಕಲ್ಪನೆಯ ಸಾಮಾಜಿಕ ಬದಲಾವಣೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಬೇಕಾಗಿದೆ. ಅವರ ಕೃತಿಗಳ ಕುರಿತು ಸಮಾಜದ ಎಲ್ಲಾ ವರ್ಗಗಳ ಜನತೆ, ಶೋಷಿತ ಸಮುದಾಯ, ಮಾಧ್ಯಮಗಳು ಸೇರಿ ದಂತೆ ಎಲ್ಲರ ಜೊತೆ ವಿವರವಾದ ಚರ್ಚೆ, ಸಂವಾದ ನಡೆಯಬೇಕು. ಅಂಬೇಡ್ಕರ್ ತಿಳಿಸಿದಂತೆ ನಮ್ಮ ಚಿಂತನೆಗಳು ಮತ್ತು ಬರವಣಿಗೆ ದೃಢವಾಗಿ ದ್ದರೆ ರಾಷ್ಟ್ರ ಸದೃಢವಾಗಿರುತ್ತದೆ ಎಂದರು.
ಹಿರಿಯ ಚಿಂತಕ ಜಿ.ರಾಜಶೇಖರ್ ದಿಕ್ಸೂಚಿ ಭಾಷಣ ಮಾಡಿ, ಅಂಬೇಡ್ಕರ್ರನ್ನು ನಾವು ಏಳು ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ. ಮೊದಲನೆಯದಾಗಿ ಅಸ್ಪಶ್ಯ ಹಾಗೂ ಅವಮಾನೀತ ಅಂಬೇಡ್ಕರ್, ನಂತರ ಸುಶಿಕ್ಷಿತ, ಪತ್ರಕರ್ತರ, ಹೋರಾಟಗಾರ, ವಿಮೋಚನಾವಾದಿ, ಸಂವಿಧಾನ ರಚನೆಕಾರ ಎಂಬ ನೆಲೆಯಲ್ಲಿ ಕಾಣಬೇಕಾಗಿದೆ ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದರು ಮತ್ತು ಹಿಂದುತ್ವವಾದಿಯಾಗಿದ್ದರೆಂಬುದು ಕಟ್ಟು ಕತೆಯಾಗಿದೆ. ಈ ಸಂದರ್ಭದಲ್ಲಿ ಅವರ ಜೀವನದ ಮುಖ್ಯಘಟ್ಟವಾಗಿರುವ ಹಿಂದು ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿರುವುದನ್ನು ನೆನಪು ಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಅಂಬೇಡ್ಕರ್ ದಲಿತರು ಅಸಮಾನತೆಯಿಂದ ಹೊರಬರುವುದರ ಪ್ರಯತ್ನದ ಜೊತೆಗೆ ಜಾತಿ ಮತ್ತು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿ ದ್ದರು. ದೇಶದ ಇತಿಹಾಸದಲ್ಲಿ ದಲಿತರು ಎಂದಿಗೂ ಅರಾಜಗತೆ ಹಾಗೂ ಹಿಂಸೆಗೆ ಇಳಿಯದಿರಲು ಅಂಬೇಡ್ಕರ್ ಮಾರ್ಗದರ್ಶನ ಹಾಗೂ ಆದರ್ಶವೇ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಭಾರತವು ಅಸಮಾನತೆ ಹಾಗೂ ಜಾತಿ ಪದ್ಧತಿಯಿಂದ ಮುಕ್ತವಾಗುವ ವರೆಗೆ ನಿಜವಾದ ಸ್ವಾತಂತ್ರ ದೊರೆಯುವುದಿಲ್ಲ ಎಂದು ಅಂಬೇಡ್ಕರ್ ವಾದಿಸಿದ್ದರು. ಆದರೆ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿರುವ ಜಾತಿ ಪದ್ಧತಿ ಮತ್ತು ಹಿಂದೂ ಧರ್ಮವನ್ನು ಪ್ರತ್ಯೇಕಿಸಲು ಸಾಧ್ಯವೇ ಇಲ್ಲ ಎಂಬುದಾಗಿಯೂ ಅವರು ನಂಬಿದ್ದರು ಎಂದರು. ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ವಲಯ ಸಂಚಾಲಕ ಸುಂದರ ಮಾಸ್ತರ್ ವಹಿಸಿದ್ದರು. ಉಡುಪಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಎನ್.ರಮೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ಅಂಬೇಡ್ಕರ್ 125ನೆ ಜನ್ಮ ದಿನಾಚರಣೆ ಕೇಂದ್ರ ಸಮಿತಿಯ ಸಲಹೆಗಾರ ಫಣಿರಾಜ್ ಉಪಸ್ಥಿತರಿದ್ದರು.
ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬೇಡ್ಕರ್ ಜ್ಞಾನ ದರ್ಶನ ಅಭಿಯಾನದ ಪದ್ಮ ವೇಣೂರು ಸ್ವಾಗತಿಸಿದರು. ಬಳಿಕ ವಿವಿಧ ಗೋಷ್ಠಿಗಳು ಜರಗಿದವು.
ಬಾಕ್ಸ್ ಮಾಡಿ...
ಪ್ರಭುತ್ವ- ನಾಗರಿಕ ಹಿಂಸೆಗಳು ಒಗ್ಗೂಡಿವೆ: ಜಿ.ರಾಜಶೇಖರ್
ಇಂದಿನ ಆಳುವ ಪಕ್ಷವು ನಾಗರಿಕ ಹಿಂಸೆ ಹಾಗೂ ಪ್ರಭುತ್ವ ಹಿಂಸೆಯನ್ನು ಮಾಡುತ್ತಿದೆ. ಈ ಎರಡೂ ರೀತಿಯ ಹಿಂಸೆಗಳು ಒಗ್ಗೂಡಿವೆ. ಇದನ್ನು ನಾವು ಆಳವಾಗಿ ಚಿಂತಿಸಬೇಕಾಗಿದೆ. ಆದರೆ ಅಂಬೇಡ್ಕರ್ ಕಾಲದಲ್ಲಿ ಈ ರೀತಿ ಚಿಂತಿಸುವ ಪ್ರಮೇಯವೇ ಇರಲಿಲ್ಲ. ಹಾಗಾಗಿ ಅವರು ನಾಗರಿಕ ಹಿಂಸೆ ಯಷ್ಟು ಪ್ರಭುತ್ವದ ಹಿಂಸೆಯ ಬಗ್ಗೆ ತಿಳಿದಿರಲಿಲ್ಲ ಎಂದು ಜಿ.ರಾಜಶೇಖರ್ ತಿಳಿಸಿದರು. ಪ್ರಭುತ್ವ ಮತ್ತು ನಾಗರಿಕ ಸಮಾಜ ಹಿಂಸೆಗೆ ಇಳಿದರೆ ಪ್ರಜೆಗೆ ರಕ್ಷಣೆ ಸಿಗಲು ಸಾಧ್ಯವೇ ಇಲ್ಲ. ಈ ಹಿಂಸೆಯಲ್ಲಿ ಈಗ ಮಾಧ್ಯಮ ಹಾಗೂ ಮಠಗಳು ಕೂಡ ಕೈಜೋಡಿಸಿಕೊಂಡಿವೆ. ಈ ಎರಡು ರೀತಿಯ ಹಿಂಸೆಯನ್ನು ಹೇಗೆ ಎದುರಿಸುವುದು ಎಂಬುದು ಇಂದು ನಮ್ಮ ಮುಂದೆ ಇರುವ ಬಹಳ ದೊಡ್ಡ ಸವಾಲು ಆಗಿದೆ ಎಂದು ಅವರು ಹೇಳಿದರು.







