ಹಿರಿಯಡ್ಕ: ಚಿನ್ನಾಭರಣ ವ್ಯಾಪಾರಿಯ ಅಪಹರಿಸಿ 42ಲಕ್ಷ ರೂ. ಮೌಲ್ಯದ ನಗನಗದು ದರೋಡೆ

ಹಿರಿಯಡ್ಕ, ಮಾ.18: ಕೇರಳದ ಚಿನ್ನಾಭರಣ ವ್ಯಾಪಾರಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ ಅವರಲ್ಲಿದ್ದ ಸುಮಾರು 42ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಹಾಗೂ ನಗದು ದರೋಡೆ ಮಾಡಿರುವ ಘಟನೆ ಮಾ.17ರಂದು ರಾತ್ರಿ ವೇಳೆ ನಡೆದಿದೆ.
ಚಿನ್ನಾಭರಣಗಳನ್ನು ಕೇರಳ ತ್ರಿಶೂರ್ನಿಂದ ತಂದು ಉಡುಪಿ ಮಂಗಳೂರು ಜ್ಯುವೆಲ್ಲರ್ಸ್ ಶಾಪ್ಗಳಿಗೆ ಮಾರಾಟ ಮಾಡುತ್ತಿದ್ದ ತ್ರಿಶೂರು ಜಿಲ್ಲೆಯ ನರ್ತರ ನಿವಾಸಿ ದೀಲಿಪ್ ಟಿ.ಡಿ.(53) ಎಂಬವರು ವ್ಯಾಪಾರದ ಹಿನ್ನೆಲೆಯಲ್ಲಿ 2 ಕೆ.ಜಿ. ತೂಕದ ಚಿನ್ನದ ಆಭರಣಗಳನ್ನು ತನ್ನ ಒಳ ಅಂಗಿಯ ಜಾಕೆಟ್ನೊಳಗೆ ತುಂಬಿಸಿ ಮಾ.16ರಂದು ರಾತ್ರಿ ಬಸ್ನಲ್ಲಿ ಹೊರಟು ಮಾ.17ರಂದು ಮಂಗಳೂರು ತಲುಪಿದ್ದರು.
ಮಂಗಳೂರಿನ ಕೆಲವು ಜ್ಯುವೆಲ್ಲರ್ಸ್ ಶಾಪ್ಗಳಿಗೆ 450 ಗ್ರಾಂ ತೂಕದ ಚಿನ್ನಾಭರಣಗಳನ್ನು ಮಾರಾಟ ಮಾಡಿದ ಅವರು, ಬಳಿಕ ಮೂಡಬಿದ್ರೆಯಲ್ಲಿ 67 ಗ್ರಾಂ ತೂಕದಷ್ಟು ಚಿನ್ನಾಭರಣಗಳನ್ನು ಮಾರಾಟ ಮಾಡಿದರು. ಅಲ್ಲಿಂದ ಬಸ್ಸಿನಲ್ಲಿ ಪೆರ್ಡೂರಿಗೆ ಬಂದು ಅಲ್ಲಿನ ಗಾಯತ್ರಿ ಜ್ಯುವೆಲ್ಲರ್ಸ್ಗೆ ಹೋಗಿ ನಂತರ ಹಿರಿಯಡ್ಕದ ನಮೃತ ಜ್ಯುವೆಲ್ಲರ್ಸ್ ಶಾಪ್ಗೆ 35 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮಾರಾಟ ಮಾಡಿದರು.
ನಮೃತ ಜ್ಯುವೆಲ್ಲರ್ಸ್ನಿಂದ ಬರಬೇಕಾಗಿದ್ದ ಹಿಂದಿನ ಬಾಕಿ ಹಣ ಮತ್ತು ಚಿನ್ನಾಭರಣಗಳನ್ನು ಮಾರಾಟ ಮಾಡಿದ ಹಣ ಒಟ್ಟು 2,57,200ರೂ. ಹಾಗೂ ಮಾರಾಟ ಮಾಡಿ ಉಳಿದ ಸುಮಾರು 1.5ಕೆ.ಜಿ. ತೂಕದ ಚಿನ್ನಾಭರಣಗಳನ್ನು ಜಾಕೆಟ್ನೊಳಗೆ ಹಾಕಿ ಅದೇ ದಿನ ಸಂಜೆ 7:30ರ ಸುಮಾರಿಗೆ ಉಡುಪಿ ಕಡೆಗೆ ಹೋಗಲು ಹಿರಿಯಡ್ಕ ಪೇಟೆಯಲ್ಲಿ ಕಾರ್ಕಳ ಕಡೆಯಿಂದ ಬರುವ ಎಚ್ಎಂಟಿ ಬಸ್ಸನ್ನು ಹತ್ತಿದರು.
ದಿಲೀಪ್ ಬಸ್ಸಿನ ಮಧ್ಯ ಭಾಗದ ಸೀಟಿನಲ್ಲಿ ಕುಳಿತ್ತಿದ್ದು, ಹಿರಿಯಡ್ಕ ಮಣಿಪಾಲ ಮಧ್ಯೆ ದಿಲೀಪ್ ಕುಳಿತಿದ್ದ ಸೀಟಿನಲ್ಲಿ ಓರ್ವ ವ್ಯಕ್ತಿ ಬಂದು ಕುಳಿತು ತಾನು ಪೊಲೀಸ್, ನಿನ್ನಲ್ಲಿದ್ದ ಸೊತ್ತುಗಳನ್ನು ತೆಗೆ ಎಂದು ಜೋರು ಮಾಡಿದನು. ಆಗ ದಿಲೀಪ್ ಬೊಬ್ಬೆ ಹಾಕಿದಾಗ ಬಸ್ಸಿನಲ್ಲಿದ್ದ ಇತರ ಇಬ್ಬರು ಅಲ್ಲಿಗೆ ಬಂದರು. ನಂತರ ರಾತ್ರಿ 7:50ರ ಸುಮಾರಿಗೆ ಮೂವರು ಒಟ್ಟು ಸೇರಿ ದಿಲೀಪ್ನನ್ನು ಬಲವಂತದಿಂದ ಬಸ್ಸಿನಿಂದ ಕೆಳಗಿಳಿಸಿ ಅಲ್ಲಿಂದ ರಿಡ್ಝ್ ಕಾರಿನ ಒಳಗೆ ಕುಳ್ಳಿರಿಸಿ ಅಪಹರಿಸಿಕೊಂಡು ಹೋದರು.
ಕಾರಿನಲ್ಲಿ ಮತ್ತೆ ಮೂವರು ಮಂದಿ ಇದ್ದರು. ಇವರೆಲ್ಲ ಸೇರಿ ದಿಲೀಪ್ಗೆ ಪಿಸ್ತೂಲ್ ತೋರಿಸಿ ಬೆದರಿಸಿ ಅವರ ಜಾಕೆಟ್ನಲ್ಲಿದ್ದ 40ಲಕ್ಷ ಮೌಲ್ಯದ 1.5ಕೆ.ಜಿ. ತೂಕದ ಚಿನ್ನದ ಸರ, ನೆಕ್ಲೆಸ್, ಬಳೆ, ಲಾಕೆಟ್, ಕಿವಿಯೊಲೆ, ಉಂಗುರಗಳು ಹಾಗೂ ನಗದು ಹಣ 2,57,200ರೂ.ವನ್ನು ದೋಚಿ, ಬಳಿಕ ಪಡುಬಿದ್ರೆಯಲ್ಲಿ ದಿಲೀಪ್ರನ್ನು ಕಾರಿನಿಂದ ಇಳಿಸಿ ಪರಾರಿಯಾದರು. ದರೋಡೆ ಮಾಡಿದ ಸೊತ್ತುಗಳ ಒಟ್ಟು ಮೌಲ್ಯ 42,57,200ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಠಾಣಾ ವ್ಯಾಪ್ತಿಯ ಗೊಂದಲ!
ಹಿರಿಯಡ್ಕದಿಂದ ಬರುತ್ತಿದ್ದ ದಿಲೀಪ್ನನ್ನು ದುಷ್ಕರ್ಮಿಗಳು ಆತ್ರಾಡಿ ಸಮೀಪ ಬಸ್ಸಿನಿಂದ ಕೆಳಗೆ ಇಳಿಸಿದರು ಎಂಬುದು ದಿಲೀಪ್ ಹೇಳಿರುವ ಹಿನ್ನೆಲೆಯಲ್ಲಿ ಇದೀಗ ಪ್ರಕರಣ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ಬಸ್ಸಿನ ನಿರ್ವಾಹಕರು ಹೇಳುವ ಪ್ರಕಾರ ದಿಲೀಪ್ನ್ನು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರ ನಗರದಲ್ಲಿ ದುಷ್ಕರ್ಮಿಗಳು ಬಲವಂತದಿಂದ ಕೆಳಗೆ ಇಳಿಸಿದರು. ಆದುದರಿಂದ ಈ ಪ್ರಕರಣ ಮಣಿಪಾಲ ಠಾಣೆಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.
ದಿಲೀಪ್ನನ್ನು ದುಷ್ಕರ್ಮಿಗಳು ಹಿಡಿದು ಬಸ್ಸಿನಿಂದ ಬಲವಂತವಾಗಿ ಕೆಳಗೆ ಇಳಿಸುವಾಗ ಆತ ಪ್ರಯಾಣಿಕರಲ್ಲಿ ಅಥವಾ ನಿರ್ವಾಹಕರಲ್ಲಿ ತನ್ನಲ್ಲಿರುವ ಚಿನ್ನಾಭರಣ ಹಾಗೂ ನಗದಿನ ಮಾಹಿತಿ ನೀಡದ ಕಾರಣ ಅವರೆಲ್ಲ ಇದನ್ನು ಅಷ್ಟೋಂದು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿದುಬಂದಿದೆ.
ಮೂರು ತಂಡ ರಚನೆ: ಎಸ್ಪಿ
ದರೋಡೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಲಾಗಿದ್ದು, ಅದಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಡಿಸಿಐಬಿ, ಹಿರಿಯಡ್ಕ ಹಾಗೂ ಉಡುಪಿ ವೃತ್ತ ನಿರೀಕ್ಷಕರ ನೇತೃತ್ವದ ತಂಡಗಳು ಇದರ ಹಿಂದೆ ಕೆಲಸ ಮಾಡುತ್ತಿದ್ದು, ಈವರೆಗೆ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಪತ್ರಿಕೆಗೆ ತಿಳಿಸಿದ್ದಾರೆ.







