ಮಂಗಳೂರು: ‘ಡೆಲ್ಟಾ’ ಕಣ್ಣಿನ ಆಸ್ಪತ್ರೆ ಉದ್ಘಾಟನೆ

ಮಂಗಳೂರು, ಮಾ.19: ನಗರದ ಬೆಂದೂರ್ವೆಲ್ ಮುಖ್ಯ ರಸ್ತೆಯಲ್ಲಿರುವ, ಹಳೆಯ ವಾಸನ್ ಕಣ್ಣಿನ ಆಸ್ಪತ್ರೆ ಕಟ್ಟಡದಲ್ಲಿ ನೂತನವಾಗಿ ಕಾರ್ಯಾರಂಭಿಸಲಿರುವ ‘ಡೆಲ್ಟಾ’ ಕಣ್ಣಿನ ಆಸ್ಪತ್ರೆಯು ರವಿವಾರ ಉದ್ಘಾಟನೆಗೊಂಡಿತು.
ಸಚಿವ ಯು.ಟಿ. ಖಾದರ್ ಆಸ್ಪತ್ರೆ, ಶಾಸಕ ಜೆ.ಆರ್.ಲೋಬೊ ಆಸ್ಪತ್ರೆ ಸಂಕೀರ್ಣದಲ್ಲಿರುವ ಡೆಲ್ಟಾ ಒಪ್ಟಿಕಲ್ಸ್, ಖ್ಯಾತ ವೈದ್ಯ ಡಾ.ಎಂ.ಶಾಂತಾರಾಮ ಶೆಟ್ಟಿ ಶಸ್ತ್ರಚಿಕಿತ್ಸಾ ವಿಭಾಗ, ಮನಪಾ ಕಾರ್ಪೊರೇಟರ್ ನವೀನ್ ಆರ್. ಡಿಸೋಜ ಡೆಲ್ಟಾ ಮೆಡಿಕಲ್ಸ್ ಅನ್ನು ಉದ್ಘಾಟಿಸಿದರು.
ಬಳಿಕ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್ ವೈದ್ಯಕೀಯ ಕ್ಷೇತ್ರದ ಸೇವೆಯಲ್ಲಿ ಸಾಮಾಜಿಕ ಬದ್ಧತೆ ಮುಖ್ಯ. ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಮಾನವೀಯತೆಯೊಂದಿಗೆ ಬೆರೆತು ಕಡಿಮೆ ದರದಲ್ಲಿ ಅತ್ಯುತ್ತಮ ಸೇವೆ ನೀಡುವ ಮೂಲಕ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದರಲ್ಲದೆ, ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ದಿನಂಪ್ರತಿ ನೂರಾರು ಹೆರಿಗೆಗಳಾಗುತ್ತಿವೆ. ‘ಡೆಲ್ಟಾ’ ಸಂಸ್ಥೆಯು ಅಲ್ಲಿನ ನವಜಾತ ಶಿಶುಗಳ ಕಣ್ಣಿನ ತಪಾಸಣೆಯನ್ನು ಉಚಿತವಾಗಿ ನೀಡಲು ಮುಂದೆ ಬರಬೇಕು ಎಂದು ನುಡಿದರು.
‘ಡೆಲ್ಟಾ’ ಸಂಸ್ಥೆಯು ಒಪ್ಟಿಕಲ್ಸ್ ಡಿಪ್ಲೊಮಾ ಕಾಲೇಜು ಸ್ಥಾಪಿಸಲು ಇಚ್ಛಿಸುವುದಾದರೆ ಎಲ್ಲ ರೀತಿಯ ನೆರವು ನೀಡಲು ಬದ್ಧನಾಗಿರುವುದಾಗಿ ಸಚಿವ ಖಾದರ್ ಭರವಸೆ ನೀಡಿದರು.
ಶಾಸಕ ಜೆ.ಆರ್.ಲೋಬೊ, ಖ್ಯಾತ ವೈದ್ಯ ಡಾ. ಎಂ. ಶಾಂತಾರಾಮ ಶೆಟ್ಟಿ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಶುಭ ಹಾರೈಸಿದರು.
ಡೆಲ್ಟಾ ಹೆಲ್ತ್ ಫೌಂಡೇಶನ್ನ ಅಧ್ಯಕ್ಷ ಡಾ.ಭರತ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ಹಮೀದ್, ಕೆ.ಎಂ.ಸಜ್ಜಾದ್, ಶನವಾಝ್ ಮುರಾದ್, ಮುಹಮ್ಮದ್ ಅಯಾಝ್, ಆಸ್ಪತ್ರೆಯ ವೈದ್ಯರಾದ ಡಾ.ವಸಂತ್ ಪೈ, ಡಾ.ಅನುಪಮಾ ಕಾರಂತ್, ಡಾ.ಪ್ರಜಕ್ತಾ ಕುಲಕರ್ಣಿ, ಡಾ. ಸುಧೀಂದ್ರ ಎ.ಎನ್., ಡಾ. ನಮೀತ್ ಡಿಸೋಜ, ಡಾ. ರಾಧಾಕೃಷ್ಣ ಎ.ಎನ್. ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿ ಬಿ.ಎ.ಮುಹಮ್ಮದ್ ಅಲಿ ಸ್ವಾಗತಿಸಿದರು. ಉಮರ್ ಯು.ಎಚ್. ವಂದಿಸಿದರು.
*ಕೈಗೆಟಕುವ ದರದಲ್ಲಿ ವಿಶ್ವ ದರ್ಜೆಯ ಕಣ್ಣಿನ ಚಿಕಿತ್ಸೆ ನೀಡುವುದು ಸಂಸ್ಥೆಯ ಧ್ಯೇಯವಾಗಿದ್ದು, ನುರಿತ ವೈದ್ಯರ ತಂಡ, ವಿನೂತನ ಪ್ರಯೋಗಾಲಯ, ಸುಸಜ್ಜಿತ ತಪಾಸಣಾ ಕೇಂದ್ರ, ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ವಿಭಾಗ, ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಭಾಗ, ಅತ್ಯುತ್ತಮ ಸಿಬ್ಬಂದಿ ಸೇವೆ ‘ಡೆಲ್ಟಾ’ದ ವಿಶೇಷತೆಯಾಗಿವೆ. ದೇಶ-ವಿದೇಶಗಳ ಅನೇಕ ಬ್ರಾಂಡ್ಗಳ ಫ್ರೇಮ್, ಲೆನ್ಸ್, ಕಾಂಟಾಕ್ಟ್ ಲೆನ್ಸ್ಗಳು ಡೆಲ್ಟಾ ಒಪ್ಟಿಕಲ್ಸ್ ನಲ್ಲಿ ಲಭ್ಯವಿದ್ದು, ತ್ವರಿತ ಸೇವೆ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
*ಉದ್ಘಾಟನೆಯ ಕೊಡುಗೆಯಾಗಿ ಸಚಿವ ಯು.ಟಿ.ಖಾದರ್ ಮತ್ತು ಶಾಸಕ ಜೆ.ಆರ್.ಲೋಬೊರ ಶಿಫಾರಸು ಪತ್ರ ತಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೋಗಿಗಳಿಗೆ ಮಾ.19ರಿಂದ ಎ.19ರವರೆಗೆ ಉಚಿತ ನೇತ್ರ ತಪಾಸಣೆ, ಉಚಿತ ಕನ್ನಡಕ ಮತ್ತು ಶೇ.10 ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಬಿ.ಎ.ಮುಹಮ್ಮದ್ ಅಲಿ ಪ್ರಕಟಿಸಿದರು.







