ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಯುವಕನ ಸಾವು

ಮಡಿಕೇರಿ, ಮಾ.19: ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಯುವಕನೋರ್ವ ಸಾವನ್ನ ಪ್ಪಿರುವ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.
ಮೂಲತಃ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಿವಾಸಿಯಾಗಿದ್ದು, ಪ್ರಸ್ತುತ ಮಡಿಕೇರಿಯ ಟಿ.ಜಾನ್ ಎಸ್ಟೇಟ್ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನವೀನ್(25) ಎಂಬಾತನೆ ಜಲಪಾತದಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಸಂಜೆ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ ಎಂದು ತಿಳಿದು ಬಂದಿದೆ.
ಅದೇ ಎಸ್ಟೇಟ್ನಲ್ಲಿ ಚಾಲಕನಾಗಿರುವ ವೆಂಕಟೇಶ್ ಮತ್ತು ನವೀನ್ ಬೈಕ್ನಲ್ಲಿ ಮಲ್ಲಳ್ಳಿ ಜಲಪಾತಕ್ಕೆ ತೆರಳಿ, ಮಧ್ಯಾಹ್ನದ ವೇಳೆ ಇಬ್ಬರೂ ನೀರಿಗೆ ಇಳಿದು ಆಟವಾಡುತ್ತಿದ್ದಾಗ ನವೀನ್ ಅಪಾಯಕಾರಿ ಸ್ಥಳಕ್ಕೆ ತೆರಳಿದ್ದು, ಕ್ಷಣಮಾತ್ರದಲ್ಲಿ ನೀರಿನಲ್ಲಿ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.
ನಂತರ ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗದ್ದು, ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರಾದ ವೆಂಕಟೇಶ್, ಉಲ್ಲಾಸ್, ಸೋಮವಾರಪೇಟೆಯ ಆಟೊ ಚಾಲಕ ಹಸನಬ್ಬ, ಪ್ರಕಾಶ್, ಮೂರ್ತಿ ಎಂಬವರ ಸಹಕಾರದಿಂದ ಮೃತದೇಹವನ್ನು ನೀರಿನಿಂದ ಹೊರತೆಗೆದು ಶವಾಗಾರಕ್ಕೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





