ಕಸಾಯಿಖಾನೆಗಳನ್ನು ಮುಚ್ಚಿಸಲು ಆದಿತ್ಯನಾಥ ಆದೇಶ

ಲಕ್ನೋ,ಮಾ.22: ರಾಜ್ಯಾದ್ಯಂತ ಕಸಾಯಿಖಾನೆಗಳನ್ನು ಮುಚ್ಚಿಸಲು ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಬುಧವಾರ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ದನಗಳ ಕಳ್ಳ ಸಾಗಾಣಿಕೆಯ ಮೇಲೆ ಸಂಪೂರ್ಣ ನಿಷೇಧಕ್ಕೂ ಆದೇಶಿಸಿದ ಅವರು, ಉಲ್ಲಂಘನೆಯನ್ನು ಎಳ್ಳಷ್ಟೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯಾವ ವರ್ಗದ ಕಸಾಯಿಖಾನೆಗಳನ್ನು ಮುಚ್ಚಿಸಲಾಗುತ್ತದೆ ಎನ್ನುವುದನ್ನು ಅಧಿಕೃತ ಮೂಲಗಳು ನಿರ್ದಿಷ್ಟವಾಗಿ ತಿಳಿಸಲಿಲ್ಲ.
ಆದರೆ ರಾಜ್ಯದಲ್ಲಿಯ ಎಲ್ಲ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲಾಗುವುದು ಮತ್ತು ಯಾಂತ್ರೀಕೃತ ಕಸಾಯಿಖಾನೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು.
ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆಯೂ ಆದಿತ್ಯನಾಥ ತನ್ನ ಇಂದಿನ ಆದೇಶದಲ್ಲಿ ಪೊಲೀಸರಿಗೆ ಸೂಚಿಸಿದ್ದಾರೆ.
ತಮಗೆ ಒದಗಿಸಲಾಗಿರುವ ಪೊಲೀಸ್ ಭದ್ರತೆಯನ್ನು ‘ಅಂತಸ್ತಿನ ದ್ಯೋತಕ ’ಎಂದು ಪರಿಗಣಿಸುವವರು ಪರಿಶೀಲನೆಗೆ ಒಳಪಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ ಅವರು, ಅಂತಹವರಿಗಿರುವ ಬೆದರಿಕೆಯನ್ನು ಪುನರ್ ಪರಿಶೀಲಿಸಿದ ನಂತರ ಅವರ ಭದ್ರತೆಯು ಬದಲಾಗಬಹುದು ಎಂದರು.





