ಶಿವಸೇನಾ ಸಂಸದ ಗಾಯಕ್ವಾಡ್ ಪ್ರಯಾಣಕ್ಕೆ ಐದು ವಿಮಾನ ಸಂಸ್ಥೆಗಳಿಂದ ನಿಷೇಧ

ಹೊಸದಿಲ್ಲಿ, ಮಾ.24:ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಧಳಿಸಿದ ಮಹಾರಾಷ್ಟ್ರದ ಒಸ್ಮಾನಾಬಾದ್ ನ ಶಿವಸೇನೆ ಪಕ್ಷದ ಸಂಸದ ರವೀಂದ್ರ ಗಾಯಕ್ವಾಡ್ ಅವರಿಗೆವಿಮಾನದಲ್ಲಿ ಪ್ರಯಾಣ ಮಾಡದಂತೆ ಏರ್ ಇಂಡಿಯಾ ಸೇರಿದಂತೆ ಐದು ವಿಮಾನ ಸಂಸ್ಥೆಗಳು ನಿಷೇಧ ಹೇರಿದೆ. ಗಾಯಕ್ವಾಡ್ ವಿರುದ್ಧ ಪ್ರತಿಭಟನೆಗೆ ಇಳಿದಿರುವ ವಿಮಾನಯಾನ ಸಂಸ್ಥೆಗಳು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ದಿಲ್ಲಿಯಿಂದ ಪುಣೆಗೆ ವಾಪಸಾಗಲು ಗಾಯಕ್ವಾಡ್ ಕಾಯ್ದಿರಿಸಿದ್ದ ರಿಟರ್ನ್ ಟಿಕೆಟ್ ನ್ನು ಏರ್ ಇಂಡಿಯಾ ರದ್ದುಪಡಿಸಿದೆ. ಏರ್ ಇಂಡಿಯಾ, ಇಂಡಿಗೋ, ಸ್ಪೈಸ್ ಜೆಟ್, ಜೆಟ್ ಏರ್ ವೇಸ್ ಮತ್ತು ಗೋ ಏರ್ ವಿಮಾನಯಾನ ಸಂಸ್ಥೆಗಳು ಸಂಸದ ರವೀಂದ್ರ ಗಾಯಕ್ವಾಡ್ ಅವರಿಗೆ ಪ್ರಯಾಣಕ್ಕೆ ನಿಷೇಧ ಹೇರಿದೆ.
ದೇಶದ ವಿಮಾನಯಾನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಂಸದರೊಬ್ಬರಿಗೆ ವಿಮಾನ ಪ್ರಯಾಣ ಮಾಡದಂತೆ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದೆ. ಗುರುವಾರ ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಂಸದ ರವೀಂದ್ರ ಗಾಯಕ್ವಾಡ್ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.





