ಇಂಡೋನೇಶಿಯಾ -ಭಾರತದ ನಡುವೆ ಆರ್ಥಿಕ ವ್ಯವಹಾರಕ್ಕೆ ವಿಪುಲ ಅವಕಾಶ: ಸವುತ್ ಸಿರಿಂಗೊರಿಂಗೊ

ಮಂಗಳೂರು.ಮಾ,24:ಇಂಡೋನೇಶಿಯಾ ಮತ್ತು ಭಾರತದ ನಡುವೆ ಆರ್ಥಿಕ ವ್ಯವಹಾರ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ ಎಂದು ಭಾರತದಲ್ಲಿರುವ ಇಂಡೋನೇಶಿಯಾದ ಕೌನ್ಸುಲ್ ಜನರಲ್ ಸವುತ್ಸಿರಿಂಗೊರಿಂಗೊ ತಿಳಿಸಿದ್ದಾರೆ.
ನಗರದ ಕೆಸಿಸಿಐ ವತಿಯಿಂದ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡ ಭಾರತ-ಇಂಡೋನೇಶಿಯಾ ನಡುವೆ ಆರ್ಥಿಕ ವ್ಯವಹಾರ ಹಾಗೂ ಹೂಡಿಕೆ,ಇಂಡೋನೇಶಿಯಾದ ಟ್ರೇಡ್ ಎಕ್ಸಪೋ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಭಾರತ ಮತ್ತು ಇಂಡೋನೇಶಿಯಾ ನಡುವೆ 2016ರಲ್ಲಿ 12.96ಬಿಲಿಯನ್ ಅಮೇರಿಕಾ ಡಾಲರ್ ವ್ಯಾಪಾರ ವಹಿವಾಟು ನಡೆದಿದೆ. ಭಾರತದಿಂದ ಇಂಡೋನೇಶಿಯಾಕ್ಕೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗಿದೆ. 2016ರಲ್ಲಿ ಭಾರತದಿಂದ 1.86 ಲಕ್ಷ ಪ್ರವಾಸಿಗರು ಇಂಡೋನೇ ಶಿಯಾಕ್ಕೆ ಭೇಟಿ ನೀಡಿದ್ದಾರೆ. ಭಾರತ ಸೇರಿದಂತೆ 169 ದೇಶಗಳ ಪ್ರವಾಸಿಗರು ಇಂಡೋನೇಶಿಯಾಕ್ಕೆ 30 ದಿನಗಳ ಉಚಿತ ವೀಸಾದಲ್ಲಿ ಪ್ರವಾಸ ತೆರಳಲು ಅವಕಾಶ ನೀಡಲಾಗಿದೆ. ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಬಾಕ್ಸೈಟ್, ನಿಕ್ಕೆಲ್, ತಾಮ್ರು, ಚಿನ್ನ, ಬೆಳ್ಳಿ ಮರಮಟ್ಟು ಸೇರಿದಂತೆ ವಿಪುಲವಾದ ನೈಸರ್ಗಿಕ ಸಂಪತ್ತನ್ನು ಹೊಂದಿದೆ ಇಂಡೋನೇಶಿಯಾದ ಪ್ರಪಂಚದ ಎರಡನೆ ಅತ್ಯಂತ ಸಮೃದ್ಧವಾದ ಜೀವ ವೈವಿಧ್ಯವನ್ನು ಹೊಂದಿರುವ ತಾಣವಾಗಿದೆ. ಭಾರತ ಮತ್ತು ಇಂಡೋನೇಶಿಯಾದ ರಾಮಾಯಣದ ಕಾಲದಿಂದಲೂ ನಡೆದು ಬಂದ ಚಾರಿತ್ರಿಕ ಹಾಗೂ ಪುರಾಣ ಕಾಲದ ಸಾಂಸ್ಕೃತಿಕ ಸಾಮ್ಯತೆಗಳಿವೆ. ಬಾಲಿಯಲ್ಲಿ ಹನುಮಂತ,ರಾಮ-ಸೀತೆ ,ಗಣಪತಿಯ ವಿಗ್ರಹಗಳು ಗುಡಿಗಳು ಸಾಕಷ್ಟು ಕಂಡು ಬರುತ್ತವೆ.
ಭಾರತದ ವೈವಿಧ್ಯಮಯ ಸಂಸ್ಕೃತಿ ,ಭಾಷೆಗಳು ಜನಜೀವನ ಕ್ರಮಗಳು ಹಾಗೂ ಇಂಡೋನೇಶಿಯಾದ ಸಂಸ್ಕೃತಿಗಳ ನಡುವೆ ಹಲವು ಸಾಮ್ಯತೆಗಳಿವೆ.ಇಂಡೋನೇಶಿಯಾದ ಅಭಿವೃದ್ಧಿಗೆ ಸದ್ಯದ ಆಡಳಿತ ವ್ಯವಸ್ಥೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಸಿಂಗಾಪುರ, ಜಪಾನ್,ಚೈನಾ,ಹಾಂಕಾಂಗ್,ನೆದರ್ಲ್ಯಾಂಡ್ ಪ್ರಮುಖ ದೇಶಗಳು ಗರಿಷ್ಠ ಪ್ರಮಾಣದ ಬಂಡವಾಳ ಹೂಡಿಕೆಯಲ್ಲಿ ತೊಡಗಿದೆ. ಈ ಪೈಕಿ ಜಾವ,ಜಕಾರ್ತದಲ್ಲಿ ಗರಿಷ್ಠ ಪ್ರಮಾಣದ ಹೂಡಿಕೆ ಮಾಡಲಾಗುತ್ತದೆ.ಭಾರತ ದೇಶಕ್ಕೂ ಇಂಡೊನೇಶಿಯಾದಲ್ಲಿ ಸಾಕಷ್ಟು ಅವಕಾಶವಿದೆ ಎಂದು ಕೌನ್ಸುಲ್ ಜನರಲ್ ಸವುತ್ಸಿರಿಂಗೊರಿಂಗೊ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇಂಡೋನೇಶಿಯಾದ ಟ್ರೇಡ್ ಎಕ್ಸಪೋ ಬಗ್ಗೆ ಮಾಹಿತಿ ನೀಡುತ್ತಾ ಎಪ್ರಿಲ್ 26-30ರವರೆಗೆ ಜಕಾರ್ತದಲ್ಲಿ ಅಂತಾರಾಷ್ಟ್ರೀಯ ಕರಕುಶಲ ಮೇಳ ನಡೆಯಲಿದೆ. ಅಕ್ಟೋಬರ್ 11-15ರವರೆಗ ಇಂಡೋನೇಶಿಯಾ ದ ಜಕಾರ್ತದಲ್ಲಿ ಟ್ರೇಡ್ ಎಕ್ಸಪೋ ಮೇಳ ನಡೆಯಲಿದೆ ಎಂದು ಇಂಡೋನೇಶಿಯಾದ ಕೌನ್ಸುಲ್ ಜನರಲ್ ಸವುತ್ಸಿರಿಂಗೊರಿಂಗೊ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೀವನ್ ಸಲ್ದಾನಾ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷೆ ವಾತಿಕಾ ಪೈ ಸ್ವಾಗತಿಸಿದರು. ಇಂಡೋನೇಶಿಯಾ ಕೌನ್ಸುಲೇಟ್ ಜನರಲ್ (ಆರ್ಥಿಕ)ಜೋಸೆಫ್ ಸೀತೆಪು ಮತ್ತು ಕೆಸಿಸಿಐನ ಪದಾಧಿಕಾರಿಗಳು ಉಪಸ್ಥಿತರಿದ್ದರು.







