ಕೇಂದ್ರ ಸರಕಾರದಿಂದ ದಂತ ಆರೋಗ್ಯ ನೀತಿ ಜಾರಿ: ಪುರಾಣಿಕ್
ಉಡುಪಿ, ಮಾ.26: ಕೇಂದ್ರ ಸರಕಾರ ರಾಷ್ಟ್ರೀಯ ದಂತ ಆರೋಗ್ಯ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲು ಉದ್ದೇಶಿಸಿದೆ. ಇದಕ್ಕೆ ಬೇಕಾದ ಸಲಹೆಗಳನ್ನು ಅಖಿಲ ಭಾರತ ದಂತ ವೈದ್ಯರ ಒಕ್ಕೂಟದಿಂದ ನೀಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಡಾ.ವಿಶ್ವಾಸ್ ಪುರಾಣಿಕ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತಿನ ಒಟ್ಟು ಕ್ಯಾನ್ಸರ್ ಪೀಡಿತರಲ್ಲಿ ಶೇ.40ರಷ್ಟು ಬಾಯಿಯ ಕ್ಯಾನ್ಸರ್ಗೆ ತುತ್ತಾದವರಿದ್ದಾರೆ. ಭಾರತವು ಬಾಯಿ ಕ್ಯಾನ್ಸರ್ನಲ್ಲಿ ಇಡೀ ಜಗತ್ತಿನಲ್ಲಿ ಮೊದಲನೆ ಸ್ಥಾನದಲ್ಲಿದೆ. ಇದಕ್ಕೆ ಕಾರಣವಾಗಿರುವ ತಂಬಾಕನ್ನು ದೇಶದಲ್ಲೇ ನಿಷೇಧಿಸಬೇಕೆಂಬ ಬೇಡಿಕೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ದೇಶದಲ್ಲಿ ಒಂದು ಲಕ್ಷ ದಂತ ತಜ್ಞರಿದ್ದು, 29 ರಾಜ್ಯಗಳಲ್ಲಿ ಒಕ್ಕೂಟದ ಘಟಕಗಳಿವೆ. ಉಡುಪಿ, ದ.ಕ. ಜಿಲ್ಲೆ ಸೇರಿದಂತೆ ದೇಶದಲ್ಲಿ ಒಟ್ಟು 490 ಸ್ಥಳೀಯ ಘಟಕಗಳಿವೆ. ಜನರಲ್ಲಿ ದಂತ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಕ್ಕೂಟದಿಂದ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿಜಯೇಂದ್ರ ರಾವ್ ಮಾತನಾಡಿ, ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡದಲ್ಲಿ ದಂತ ವೈದ್ಯರನ್ನು ಕೂಡ ನೇಮಕ ಮಾಡಿಕೊಳ್ಳುವಂತೆ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ.ನಂದಲಾಲ್, ಜಿಲ್ಲಾ ಕಾರ್ಯದರ್ಶಿ ಡಾ.ಮನೋಜ್ ಡಿಮೆಲ್ಲೋ ಉಪಸ್ಥಿತರಿದ್ದರು.







