ಈಶಾನ್ಯದ ರಾಜ್ಯಗಳಲ್ಲಿ ಬೀಫ್ ನಿಷೇಧವಿಲ್ಲ: ಬಿಜೆಪಿ ಸ್ಪಷ್ಟನೆ

ಹೊಸದಿಲ್ಲಿ,ಮಾ.27: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರವು ಗೋಹತ್ಯೆಗೆ ನಿಷೇಧಕ್ಕೆ ಮುಂದಾಗಿದೆಯಾದರೂ, ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ತೆರಳಲಿರುವ ಈಶಾನ್ಯ ಭಾರತದ ಮೂರು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸುವ ಕಾನೂನನ್ನು ಜಾರಿಗೊಳಿಸುವ ಇಚ್ಛೆಯನ್ನು ತಾನು ಹೊಂದಿಲ್ಲವೆಂದು ಬಿಜೆಪಿ ಸ್ಪಷ್ಟಪಡಿಸಿದೆ. ಕ್ರೈಸ್ತರು ಬಹುಸಂಖ್ಯಾತರಾಗಿರುವ ರಾಜ್ಯಗಳಾದ ಮೇಘಾಲಯ, ಮಿರೆರಾಮ್ ಹಾಗೂ ನಾಗಾಲ್ಯಾಂಡ್ನಲ್ಲಿ ಗೋಮಾಂಸವನ್ನು ವ್ಯಾಪಕವಾಗಿ ಸೇವಿಸಲಾಗುತ್ತಿದೆ. ಈ ಮೂರು ರಾಜ್ಯಗಳಲ್ಲಿಯೂ ಬೀಫ್ ನಿಷೇಧಿಸುವ ಇಚ್ಛೆಯನ್ನು ಕೇಂದ್ರ ಸರಕಾರ ಹೊಂದಿದೆಯೆಂಬ ಊಹಾಪೋಹಗಳನ್ನು ಬಿಜೆಪಿಯ ಮೇಘಾಲಯ ಘಟಕದ ಪ್ರಧಾನ ಕಾರ್ಯದರ್ಶಿ ಡೇವಿಡ್ ಖಾರ್ಸಟಿ ಅಲ್ಲಗಳೆದಿದ್ದು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಇಂತಹ ವದಂತಿಗಳನ್ನು ಹರಡುತ್ತಿರುವುದಾಗಿ ಆಪಾದಿಸಿದರು.
ನಾಗಾಲ್ಯಾಂಡ್ನಲ್ಲಿಯೂ ಗೋಹತ್ಯೆ ನಿಷೇಧಿಸುವ ಉದ್ದೇಶ ತನಗಿಲ್ಲವೆಂದು ಬಿಜೆಪಿ ಸ್ಪಷ್ಚಪಡಿಸಿದೆ. ‘‘ಮುಂದಿನ ವರ್ಷದ ವಿಧಾನಸಭಾ ಚುನಾವಣೆಯ ಬಳಿಕ ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಉತ್ತರಪ್ರದೇಶದಲ್ಲಿ ಆದಂತೆ ನಾಗಾಲ್ಯಾಂಡ್ನಲ್ಲಿಯೂ ಗೋಹತ್ಯೆಯನ್ನು ನಿಷೇಧಿಸಲಾಗುವುದಿಲ್ಲ. ಈ ರಾಜ್ಯದ ವಾಸ್ತವಿಕ ಪರಿಸ್ಥಿತಿ ವಿಭಿನ್ನವಾಗಿದ್ದು, ಅದನ್ನು ನಮ್ಮ ಕೇಂದ್ರ ನಾಯಕರು ಅರಿತಿದ್ದಾರೆ’’ ಎಂದು ನಾಗಾಲ್ಯಾಂಡ್ನ ಬಿಜೆಪಿ ಅಧ್ಯಕ್ಷ ವಿಸಾಲೊಲಿ ಲ್ಹೊಂಗು ತಿಳಿಸಿದ್ದಾರೆ.
2011ರ ಜನಗಣತಿಯ ಪ್ರಕಾರ ನಾಗಾಲ್ಯಾಂಡ್ 20 ಲಕ್ಷ ಜನಸಂಖ್ಯೆಯಲ್ಲಿ ಶೇ. 88ರಷ್ಟು ಮಂದಿ ಕ್ರೈಸ್ತರು. ಹಾಗೆಯೇ ಮಿರೆರಾಂ ಹಾಗೂ ಮೇಘಾಲಯಗಳಲ್ಲಿಯೂ ಕ್ರೈಸ್ತರು, ಕ್ರಮವಾಗಿ ಒಟ್ಟು ಜನಸಂಖ್ಯೆಯ ಶೇ.87 ಹಾಗೂ ಶೇ.75ರಷ್ಟಿದ್ದಾರೆ. ಮೇಘಾಲಯ ಹಾಗೂ ಮಿರೆರಾಂಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ನಾಗಾಲ್ಯಾಂಡ್ನಲ್ಲಿ ನಾಗಾಪೀಪಲ್ಸ್ ಫ್ರಂಟ್ ನೇತೃತ್ವದ ಸರಕಾರದಲ್ಲಿ ಬಿಜೆಪಿ ಪಾಲುದಾರ ಪಕ್ಷವಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ತನ್ನ ಸರಕಾರವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಈ ಯಶಸ್ಸನ್ನು ಈಶಾನ್ಯದ ಇತರ ಮೂರು ರಾಜ್ಯಗಳಲ್ಲಿ ಪುನರಾವರ್ತಿಸಲು ಅದು ಬಯಸಿದೆ.
60 ಸದಸ್ಯ ಬಲದ ಮೇಘಾಲಯ ವಿಧಾನಸಭೆಗೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು ಒಂದೇ ಒಂದು ಸ್ಥಾನ ಕೂಡಾ ಗೆಲ್ಲಲು ವಿಫಲವಾಗಿತ್ತು. ಐದು ವರ್ಷಗಳ ಹಿಂದೆ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಎರಡು ಸ್ಥಾನಗಳನ್ನು ಗೆದ್ದಿತ್ತು.







