31ರಂದು ಕಲ್ಕೂರ ಪ್ರತಿಷ್ಠಾನದಿಂದ ಚೆನ್ನೈ ಯಕ್ಷಗಾನ ಸಂಭ್ರಮ
ಮಂಗಳೂರು, ಮಾ.29: ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮಾ.31ರಂದು ಸಂಜೆ 4 ಕ್ಕೆ ಚೆನ್ನೈ ಯಕ್ಷಗಾನ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕದ್ರಿ ಕಂಬಳ ರಸ್ತೆ, ಮಲ್ಲಿಕಾ ಬಡಾವಣೆಯ ‘ಮಂಜು ಪ್ರಾಸಾದ’ದಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ ಕಲ್ಕೂರ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಸದಸ್ಯ ಪಿ. ಕಿಶನ್ ಹೆಗ್ಡೆ ಮತ್ತು ಸಮತಾ ಬಳಗದ ಅಧ್ಯಕ್ಷೆ ರಾಜಶ್ರೀ ಅಚಾರ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕನ್ನಡ ಸಂಘ ಚೆನ್ನೈ ಇದರ ಅಧ್ಯಕ್ಷ ಪಿ.ನಾರಾಯಣ ಭಟ್ ಅವರಿಗೆ ‘ಕಲ್ಕೂರ ಕನ್ನಡ ಸಿರಿ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲ ವಿಜ್ಞಾನಿ ದೃತಿ ಮುಂಡೋಡಿ ಅವರಿಗೆ ‘ಕಲ್ಕೂರ ಯುವ ಸಿರಿ’ ಪ್ರಶಸ್ತಿ ಮತ್ತು ಬಹುಮುಖ ಪ್ರತಿಭಾನ್ವಿತೆ ಶ್ರೇಯಾ ಎಸ್. ಜೈನ್ ಅವರಿಗೆ ‘ಕಲ್ಕೂರ ಬಾಲಸಿರಿ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ. ಚೆನ್ನೈಯ ಹವ್ಯಾಸಿ ಮಹಿಳಾ ತಂಡದಿಂದ ಯಕ್ಷಗಾನ ತಾಳಮದ್ದಳೆ ಬಿಲ್ಲ ಹಬ್ಬ ನಡೆಯಲಿದೆ. ಬಿ.ಎಂ ರವೀಂದ್ರರಾವ್, ಅಪೂರ್ವ ಆರ್. ಸುರತ್ಕಲ್, ಶಿವಪ್ರಸಾದ್ ಪುನರೂರು ಹಿಮ್ಮೇಳದಲ್ಲಿ ಸಹಕರಿಸಲಿದ್ದಾರೆ. ಮಧುಮತಿರಾವ್, ಉಷಾ ನಾಯಕ್, ಉಮಾರಾಜ, ತುಳಸಿ, ಶಶಿಕಲಾ ರಾವ್, ಕರುಣಾ ತಾಳಮದ್ದಳೆ ಕೂಟದಲ್ಲಿ ಭಾಗವಹಿಸಲಿದ್ದಾರೆ. ವಾಸುದೇವರಾವ್ ಸುರತ್ಕಲ್ ನಿರ್ದೇಶನದಲ್ಲಿ ತಾಳಮದ್ದಳೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.