ಪಾಲೆಮಾರ್ ಆರೋಪದಲ್ಲಿ ಹುರುಳಿಲ್ಲ: ಮೊಯ್ದಿನ್ ಬಾವ

ಮಂಗಳೂರು, ಮಾ.30: ಸುರತ್ಕಲ್ ಮಾರುಕಟ್ಟೆಯ ಬಗ್ಗೆ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವಾ ಹೇಳಿದ್ದಾರೆ.
ಗುರುವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲೆಮಾರ್ ತಾನು ಶಾಸಕ, ಸಚಿವನಾಗಿದ್ದಾಗ ಸುರತ್ಕಲ್ ಮಾರುಕಟ್ಟೆಯ ಅಭಿವೃದ್ಧಿಗೆ 8 ಕೋ.ರೂ. ಮತ್ತು ರಸ್ತೆಗೆ 3 ಕೋ.ರೂ. ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅಂತಹ ಯಾವುದೇ ಅಭಿವೃದ್ಧಿ ಕಾರ್ಯಗಳು ಅಲ್ಲಿ ನಡೆದಿಲ್ಲ. ಈ ಬಗ್ಗೆ ಪಾಲೆಮಾರ್ ದಾಖಲೆ ಬಿಡುಗಡೆ ಮಾಡಬೇಕು ಎಂದರು.
ಸುರತ್ಕಲ್ನ ಗೋಮಾಳ ಜಾಗದಲ್ಲಿ ನಿರ್ಮಿಸುತ್ತಿರುವ ತಾತ್ಕಾಲಿಕ ಮಾರುಕಟ್ಟೆಯನ್ನು ಚುನಾವಣಾ ಗಿಮಿಕ್ ಎಂದು ಪಾಲೆಮಾರ್ ಆರೋಪಿಸುತ್ತಾರೆ. ಇದರಲ್ಲಿ ಯಾವುದೇ ಗಿಮಿಕ್ ಇಲ್ಲ. ಚುನಾವಣೆ ಸಂದರ್ಭ ನೀಡಿದ ಆಶ್ವಾಸನೆಯನ್ನು ಈಡೇರಿಸುತ್ತಿದ್ದೇನೆ. ಮಾರುಕಟ್ಟೆ ಅಭಿವೃದ್ಧಿಗೆ ಬಳಸಿದ 8 ಕೋ.ರೂ. ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಒತ್ತಾಯಿಸಿದ ಅವರು, ಸುರತ್ಕಲ್ ರಸ್ತೆಯ ಬದಲು ಮಂಗಳೂರಿನಲ್ಲಿರುವ ಅವರ ಅಪಾರ್ಟ್ಮೆಂಟ್ನ ರಸ್ತೆಗಳಿಗೆ ಹಣ ವಿನಿಯೋಗಿಸಿರಬೇಕು ಎಂದು ವ್ಯಂಗ್ಯವಾಡಿದರು.
ಗೋಮಾಳ ಜಾಗದಲ್ಲಿ ಕಂದಾಯ ನಿರೀಕ್ಷಕರ ಕಚೇರಿ ಮೊದಲಾದ ಶಾಶ್ವತ ಕಟ್ಟಡಗಳಿವೆ. ಅದನ್ನು ಕಟ್ಟುವಾಗ ಅವರಿಗೆ ಗೋಮಾಳ ಜಾಗ ಎಂದು ಗೊತ್ತಿರಲಿಲ್ಲವೇ? ಇದೀಗ ತಾನು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ದಿ ಕಾಮಗಾರಿಗಳನ್ನು ನೋಡಿ ಸಹಿಸಲಾಗದೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದರು.
ಸುರತ್ಕಲ್ನಲ್ಲಿ ಸುಸಜ್ಜಿತ ಮಾರುಕಟ್ಟೆ ಇಲ್ಲದೆ ವ್ಯಾಪಾರಿಗಳು ಪರದಾಡುವಂತಾಗಿದೆ. ಇಲ್ಲಿ ಮೈದಾನ, ಮುಡಾ ವಾಣಿಜ್ಯ ಸಂಕೀರ್ಣ, ಮನಪಾ ಮಾರುಕಟ್ಟೆ, ರಸ್ತೆ ನಿರ್ಮಾಣಕ್ಕಾಗಿ 120 ಕೋ.ರೂ. ವೆಚ್ಚದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕಾರ್ಯಗತ ಮಾಡಲು ಸಿದ್ಧರಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್ ಬಶೀರ್ ಅಹ್ಮದ್, ಮಾಜಿ ಕಾರ್ಪೊರೇಟರ್ ಹರೀಶ್, ಮಾಜಿ ಜಿಪಂ ಸದಸ್ಯ ಕೃಷ್ಣ ಅಮೀನ್, ಕುಪ್ಪೆಪದವು ಗ್ರಾಪಂ ಸದಸ್ಯ ಹಿರಣಾಕ್ಷ ಕೋಟ್ಯಾನ್ ಉಪಸ್ಥಿತರಿದ್ದರು.
ಧಾರ್ಮಿಕ ಸಂಸ್ಥೆಗಳಿಗೆ 20 ಲಕ್ಷ ರೂ.
ಮಾರ್ಚ್ ತಿಂಗಳಿನಲ್ಲಿ ಮುಕ್ಕ ಸತ್ಯಧರ್ಮದೇವಿ ದೇವಸ್ಥಾನ, ಪಂಜಿಮೊಗರು, ವಿದ್ಯಾನಗರ ಕೃಷ್ಣ ಮಂದಿರ, ಕಾಟಿಪಳ್ಳ, ಕೈಕಂಬ ನಿತ್ಯಾನಂದ ಭಜನಾ ಮಂದಿರ, ಕಾಟಿಪಳ್ಳ ರಾಮಂಜನೇಯ ಭಜನಾ ಮಂದಿರ, ಇಡ್ಯಾ ಗುಡ್ಡಕೊಪ್ಪಳ ರಾಮ ಮಂದಿರಕ್ಕೆ ತಲಾ 4 ಲಕ್ಷ ರೂ. ನಂತೆ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾವ ತಿಳಿಸಿದರು.







