ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ
ಮಾನ್ಯರೆ,
ಶಾಸಕರಿಗೆ ಗೌರವ ನೀಡುತ್ತಿಲ್ಲ ಮತ್ತು ಸದಾಕಾಲ ತಮ್ಮನ್ನು ನಿಂದಿಸುತ್ತವೆ ಎಂಬ ನೆಪದಿಂದ ಜನಪ್ರತಿನಿಧಿಗಳು ಮಾಧ್ಯಮಗಳ ಮೇಲೆ ಕಡಿವಾಣ ಹಾಕಲು ಹೊರಟಿರುವುದು ಶೋಚನೀಯ.
ಜನಪ್ರತಿನಿಧಿಗಳ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು, ಅವರ ಕಾರ್ಯಕ್ರಮಗಳ ಬಗ್ಗೆ ಪ್ರಚಾರಮಾಡಲು ಮಾಧ್ಯಮಗಳು ಬೇಕು. ಆದರೆ ಅವರು ಮಾಡುತ್ತಿರುವ ಕುಕೃತ್ಯಗಳನ್ನು ಬಯಲಿಗೆಳೆದರೆ ಮಾಧ್ಯಮಗಳಿಗೆ ಅಂಕುಶ ಹಾಕಲು ಹೊರಡುತ್ತಾರೆ.
ಪತ್ರಕರ್ತರ ಮೇಲೆ ದಿನೇ ದಿನೇ ಹಲ್ಲೆ ನಡೆಯುತ್ತಿದ್ದರೂ, ರಕ್ಷಣೆ ನೀಡುವ ಬಗ್ಗೆ ಯೋಚಿಸುವ ಬದಲು ಸರಕಾರ ಮಾಧ್ಯಮವನ್ನೇ ಹತ್ತಿಕ್ಕಿ, ಮಾಧ್ಯಮದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಹೊರಟಿರುವುದು ವಿಪರ್ಯಾಸವೇ ಸರಿ. ತಮ್ಮ ಗೌರವಕ್ಕೆ ಧಕ್ಕೆ ಬರುವಂತೆ ಮಾಧ್ಯಮಗಳು ಕಾರ್ಯ ನಿರ್ವಹಿಸುತ್ತವೆ ಎಂದು ಬಾಯಿ ಬಡಿದು ಕೊಳ್ಳುತ್ತಿರುವ ಜನಪ್ರತಿನಿಧಿಗಳಿಗೆ, ತಾವು ತಮ್ಮ ಅಧಿಕಾರದ ಪರಮಾವಧಿ ಮೀರಿ ವರ್ತಿಸುತ್ತಿದ್ದೇವೆಂದು ಅನ್ನಿಸುವುದಿಲ್ಲವೇ? ಸರಕಾರದ ಜನಪ್ರತಿನಿಧಿಗಳ ಹಿತಾಸಕ್ತಿಯ ಬಗ್ಗೆ ಆಲೋಚಿಸುವ ಬದಲು ಮಾಧ್ಯಮ ಕ್ಷೇತ್ರಕ್ಕೆ ರಕ್ಷಣೆ ನೀಡಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುವುದರ ಮೂಲಕ ಸಾಮಾಜಿಕ ಸ್ವಾಸ್ಥ ಕಾಪಾಡಲು ಪ್ರಯತ್ನಿಸಲಿ.





