ನಿವೃತ್ತ ಪೊಲೀಸರಿಗೂ 'ಆರೋಗ್ಯ ಭಾಗ್ಯ' ವಿಸ್ತರಿಸಿ: ನಾಗೇಶ್ ಮೇಸ್ತ

ಉಡುಪಿ, ಎ.2: ಸಾಕಷ್ಟು ಒತ್ತಡದಿಂದ ಕೆಲಸ ಮಾಡುವ ಪೊಲೀಸರು ನಿವೃತ್ತರಾದ ಬಳಿಕ ಹಲವು ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದುದ ರಿಂದ ರಾಜ್ಯ ಸರಕಾರ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೂ ಆರೋಗ್ಯ ಭಾಗ್ಯ ಯೋಜನೆಯನ್ನು ವಿಸ್ತರಿಸಬೇಕು ಎಂದು ನಿವೃತ್ತ ಪೊಲೀಸ್ ಉಪನಿರೀಕ್ಷಕ ನಾಗೇಶ್ ಮೇಸ್ತ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ರವಿವಾರ ಉಡುಪಿ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸ್ ಧ್ವಜ ಅನಾವರಣ ಮತ್ತು ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು.
ನ್ಯಾಯಕ್ಕಾಗಿ ಠಾಣೆಗಳಿಗೆ ಆಗಮಿಸುವವರ ನೋವಿಗೆ ಪೊಲೀಸರು ಸ್ಪಂದಿ ಸುವ ಕೆಲಸ ಮಾಡಬೇಕೆ ಹೊರತು ಅವರನ್ನು ನೋಯಿಸಬಾರದು. ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ಗೌರವ ನೀಡಬೇಕು. ಕ್ಷುಲ್ಲಕ ಕಾರಣ ನೀಡಿ ಅವರನ್ನು ಠಾಣೆಯಲ್ಲಿ ಕಾಯಿಸಬಾರದು. ಇದರಿಂದ ಪೊಲೀಸ್ ಇಲಾಖೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿ ಜನಸ್ನೇಹಿ ಆಗಲು ಸಾಧ್ಯವಾಗುತ್ತದೆ ಎಂದರು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಮಾತನಾಡಿ, ಕಳೆದ ವರ್ಷ ಧ್ವಜ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಧ್ವಜ ವಿತರಿಸಿ, 3.09ಲಕ್ಷ ರೂ. ದೇಣಿಗೆಯನ್ನು ಸಂಗ್ರಹಿಸಲಾಗಿತ್ತು. ಅದರಲ್ಲಿ ಶೇ.50ರಷ್ಟು ನಿವೃತ್ತ ಸಿಬ್ಬಂದಿಗಳ ಕಲ್ಯಾಣನಿಧಿ ಘಟಕ ಜಮೆ ಆಗುತ್ತದೆ. ಶೇ.25ರಷ್ಟು ಜಿಲ್ಲೆಯ ಕಲ್ಯಾಣನಿಧಿ ಮತ್ತು ಶೇ.25ರಷ್ಟು ಕೇಂದ್ರ ಕಲ್ಯಾಣ ನಿಧಿಗೆ ಜಮೆ ಯಾಗುತ್ತದೆ. ಪ್ರಸ್ತುತ ಕಲ್ಯಾಣ ನಿಧಿಯ ಹಣದ ಕೊರತೆ ಇದ್ದು, ಈ ವರ್ಷ ಕನಿಷ್ಠ 3.25ಲಕ್ಷ ದೇಣಿಗೆ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಈಗ ಇರುವ ಪೊಲೀಸ್ ಕ್ಯಾಂಟಿನ್ನ್ನು ಪುನಶ್ಚೇತನಗೊಳಿಸಿ, ಅದರ ಸೌಲಭ್ಯ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮತ್ತು ಬಿಎಸ್ಎಫ್ ಸಿಬ್ಬಂದಿಗಳಿಗೂ ದೊರೆಯುವಂತೆ ಕ್ರಮ ತೆಗೆದುಕೊಳ್ಳಲಾಗುವುದು. ಹಳ್ಳಿಗೊಬ್ಬ ಪೊಲೀಸ್ ಯೋಜನೆಯನ್ನು ಜಿಲ್ಲೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ 70 ಮಂದಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಒಟ್ಟು 6,45,204ರೂ. ಮೊತ್ತದ ಕಲ್ಯಾಣನಿಧಿಯನ್ನು ವಿತರಿಸ ಲಾಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಉಪಸ್ಥಿತ ರಿದ್ದರು. ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ವಂದಿಸಿದರು. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ಪಿಎಸ್ಸೈ ಬಿ.ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು.







