ರಾಜಕೀಯ ಪಿತೂರಿಯಿಂದ ಕೋಮುಗಲಭೆೆ: ಶಾಫಿ ಸಅದಿ
ಸಮುದಾಯ ಭವನ ಕಟ್ಟಡದ ಶಿಲಾನ್ಯಾಸ

ಪಡುಬಿದ್ರೆ, ಎ.2: ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ನಡೆಯುವ ಕೋಮು ಗಲಭೆಗಳಿಗೆ ರಾಜಕೀಯ ಪಿತೂರಿ ಕಾರಣ. ರಾಜಕೀಯವನ್ನು ಬಿಟ್ಟು ಒಂದಾದಾಗ ಮಾತ್ರ ಸೌಹಾರ್ದ ವಾತಾವರಣ ಕರಾವಳಿಯಲ್ಲಿ ನಿರ್ಮಾ ಣವಾಗಲು ಸಾಧ್ಯ ಎಂದು ರಾಜ್ಯ ವಕ್ಫ್ ಮಂಡಳಿಯ ನಿರ್ದೇಶಕ ವೌಲಾನಾ ಎನ್.ಕೆ.ಎಂ.ಶಾಫಿ ಸಅದಿ ಅಭಿಪ್ರಾಯಪಟ್ಟರು.
ಪಡುಬಿದ್ರೆಯ ಕಂಚಿನಡ್ಕದ ಮುಹಿಯುದ್ದೀನ್ ಜುಮಾ ಮಸೀದಿ ಇದರ ಅಧೀನದಲ್ಲಿರುವ ಕಂಚಿನಡ್ಕದ ನೂರುಲ್ ಹುದಾ ಮದ್ರಸ ಹಾಗೂ ನೂತನ ಸಮುದಾಯ ಭವನ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು. ಮನವಿ ಪತ್ರ ಬಿಡುಗಡೆ ಮಾಡಿದ ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಸಂಸ್ಕರಣೆಯ ವಿದ್ಯಾಭ್ಯಾಸ ಮದ್ರಸದಲ್ಲಿ ಸಿಗುತ್ತಿದೆ. ಇದರ ಅನಿವಾ ರ್ಯತೆಯೂ ಇಂದಿನ ದಿನಗಳಲ್ಲಿ ಅಗತ್ಯ ಇದೆ. ಇಸ್ಲಾಂನ ವೌಲ್ಯಯುತ ಜೀವನ ಕ್ರಮವನ್ನು ತಿಳಿಸುವ ಮೂಲಕ ಸೌಹಾರ್ದ ಜೀವನದ ಬಗ್ಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಇಂತಹ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನನ್ನ ಅನುದಾನದಿಂದ ಪ್ರಥಮ ಹಂತದಲ್ಲಿ ಐದು ಲಕ್ಷ ರೂ. ಹಾಗೂ ಇತರ ಇಲಾಖೆಗಳ ಮೂಲಕ ಅನುದಾನ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಯಾವುದೇ ಸಮುದಾಯದ ಬೆಳ ವಣಿಗೆಗೆ ಶಿಕ್ಷಣ ಅಗತ್ಯ ಇದೆ. ಈ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮದ್ರಸ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ತಮ್ಮ ಕಂಪೆನಿಯಿಂದ ಆದಷ್ಟು ಹೆಚ್ಚಿನ ಅನುದಾನ ದೊರಕಿಸಿಕೊಡುವುದಾಗಿ ಹೇಳಿದರು. ಅಲ್ಹಾಜ್ ಕೆ.ಎಸ್.ಸೈಯದ್ ಮುಖ್ತಾರ್ ತಂಙಳ್ ಕುಂಬೋಳ್ ಶಿಲಾನ್ಯಾಸ ನೆರವೇರಿಸಿದರು. ಪಡುಬಿದ್ರೆ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಎಸ್.ಎಂ.ಅಬ್ದುರ್ರಹ್ಮಾನ್ ಮದನಿ ದುಆ ನೆರವೇರಿಸಿದರು. ಜಮಾಅತ್ ಅಧ್ಯಕ್ಷ ಹಾಜಿ ಪಿ.ಎ.ಅಬ್ದುರ್ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಅಲ್ಹಾಜ್ ವೌಲಾನಾ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳ್ಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ, ಗ್ರಾಪಂ ಉಪಾಧ್ಯಕ್ಷ ವೈ. ಸುಕುಮಾರ್, ಅನಿವಾಸಿ ಭಾರತೀಯ ಉದ್ಯಮಿಗಳಾದ ಅಬೂಬಕರ್ ರೈಸ್ಕೋ, ಸರ್ಫ್ರಾಝ್ ಖಾದರ್ ರೈಸ್ಕೋ, ನಿಯಾಝ್ ಅಹ್ಮದ್ ಕೆ.ಐ ಸಮಕಾಂ, ಅಹ್ಮದ್ ಶಕೀರ್ ಕಣ್ಣೂರು, ಕೆ.ಎಸ್.ಸೈಯದ್ ಹಾಜಿ ಕರ್ನಿರೆ, ಉಡುಪಿ ಜಿಲ್ಲಾ ಗ್ರಾಪಂ ಒಕ್ಕೂಟಗಳ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಇನ್ನಾ ಜುಮಾ ಮಸೀದಿ ಅಧ್ಯಕ್ಷ ಎಂ.ಪಿ.ಮೊಯ್ದಿನಬ್ಬ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಜೆ. ಶೆಟ್ಟಿ, ವಕ್ಫ್ ಬೋರ್ಡ್ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಹ್ಯಾನಕ್ವಾ, ಹಿಮಾಯತುಲ್ ಇಸ್ಲಾಂ ಸಂಘದ ಸಂಚಾಲಕ ಶಬ್ಬೀರ್ ಹುಸೈನ್, ನೂರಾನಿಯಾ ಮದ್ರಸದ ಅಧ್ಯಕ್ಷ ಮೆಹಬೂಬ್ ಶರೀಫ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರೆ ಗ್ರಾಪಂ ಸದಸ್ಯರಾದ ಹಸನ್ ಬಾವ, ಬುಡಾನ್ ಸಾಹೇಬ್, ಎ.ಎಚ್.ಅಬ್ದುಲ್ ಖಾದರ್, ಮುಹಮ್ಮದ್ ರಫೀಕ್, ಅಶ್ರಫ್ ಸಅದಿ, ಹಾಜಿ ಮುಹಮ್ಮದ್ ಇಕ್ಬಾಲ್ ನೂರಿ, ಹಾಜಿ ಎಂ.ಎಚ್.ಹಮ್ಮಬ್ಬ, ಶಾಬು ಹಾಜಿ, ಪಿ.ಕೆ.ಸುಲೈಮಾನ್, ಪಿ.ಕೆ.ಮೊಯ್ದಿನ್ ಹಾಜಿ, ಕೆರಮ ಮೊಯ್ದಿನ್ ಹಾಜಿ, ಪಿ.ಎಂ.ಉಮರ್ ಹಾಜಿ, ಸೈಯದ್ ಅಮಾನುಲ್ಲಾ ಮಸ್ಕತ್, ಪಿ.ಎಸ್.ಅಕ್ಬರ್ ಸುಲೈಮಾನ್ ಮತ್ತಿತರರು ಹಾಜರಿದ್ದರು.
ಸಾಹಿತಿ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು. ಜಮಾಅತ್ ಸಮಿತಿಯ ಕಾರ್ಯದರ್ಶಿ ಶೇಖ್ ಇಸ್ಮಾಯೀಲ್, ಎಸ್.ಪಿ. ಉಮರ್ ಫಾರೂಕ್ ವಂದಿಸಿದರು.







