ನನ್ನ ಇನ್ನೊಂದು ಕೈಯನ್ನು ಎಲ್ಲಿ ಬಿಟ್ಟು ಬಂದಿದ್ದೇನೆ ಎಂದು ನನ್ನ ಮಗ ಕೇಳುತ್ತಾನೆ : ಮೊಹಮ್ಮದ್ ಕೌಸರ್ ಹುಸೇನ್
ನನ್ನ ಕತೆ
ಎರಡು ವರ್ಷಗಳ ನಂತರ ನಿನ್ನೆ ನನ್ನ ಮಗಳಿಗೆ ಒಂದು ಹೊಸ ಅಂಗಿಯನ್ನು ಖರೀದಿಸಲು ನನಗೆ ಸಾಧ್ಯವಾಯಿತು. ನಾನು ಐದು ಟಕಾ ಮೌಲ್ಯದ 60 ನೊಟುಗಳನ್ನು ಅಂಗಡಿಯಾತನಿಗೆ ನೀಡದಾಗ ನೀನು ಭಿಕ್ಷುಕನೇನು ಎಂದು ಅಂಗಡಿಯಾತ ನನ್ನನ್ನುದ್ದೇಶಿಸಿ ದೊಡ್ಡದಾಗಿ ಕೇಳಿದ. ನನ್ನ ಪುತ್ರಿ ನನ್ನ ಕೈಹಿಡಿದೆಳೆದು ತನಗೆ ಯಾವುದೇ ಅಂಗಿ ಬೇಕಿಲ್ಲವೆಂದು ಹೇಳಿ ಅಂಗಡಿಯಿಮದ ಹೊರನಡೆಯುವ ಎಂದು ಅಳುತ್ತಾ ಹೇಳಿದಳು.
ಒಂದು ಕೈಯ್ಯಿಂದ ಆಕೆಯ ಕಣ್ಣೀರನ್ನು ನಾನು ಒರೆಸಿದೆ. ಹೌದು, ನಾನೊಬ್ಬ ಭಿಕ್ಷುಕ. ಜನರಲ್ಲಿ ಭಿಕ್ಷೆ ಬೇಡಿ ಬದುಕಬೇಕಾದೀತೆಂದು ನನ್ನ ದುಃಸ್ವಪ್ನದಲ್ಲಿಯೂ ಹತ್ತು ವರ್ಷಗಳ ಹಿಂದೆ ನಾನು ಎಣಿಸಿರಲಿಲ್ಲ. ರಾತ್ರಿ ಸಂಚರಿಸುತ್ತಿದ್ದ ಕೋಚ್ ಒಂದು ಸೇತುವೆಯ ಮೇಲಿಂದ ಬಿದ್ದಿತ್ತು ಹಾಗೂ ನಂಬಲಸಾಧ್ಯವಾದ ರೀತಿಯಲ್ಲಿ ನಾನು ಬದುಕುಳಿದಿದ್ದೆ. ಆದರೆ ಅಂಗವಿಕಲನಾಗಿ ಬದುಕುಳಿದಿದ್ದೆ. ನನ್ನ ಇನ್ನೊಂದು ಕೈಯ್ಯನ್ನು ಎಲ್ಲಿ ಬಿಟ್ಟು ಬಂದಿದ್ದೇನೆಂದು ನನ್ನ ಕಿರಿಯ ಪುತ್ರ ನನ್ನನ್ನು ಆಗಾಗ ಕೇಳುತ್ತಿರುತ್ತಾನೆ. ನನ್ನ ಪುತ್ರಿ ಸುಮಯ್ಯ ಪ್ರತಿ ದಿನ ನನಗೆ ಆಹಾರ ತಿನ್ನಿಸುತ್ತಾ ಒಂದು ಕೈಯ್ಯಿಂದ ಕೆಲಸ ಮಾಡುವುದು ಎಷ್ಟು ಕಷ್ಟವೆಂದು ತನಗೆ ಗೊತ್ತಿದೆಯೆಂದು ಹೇಳುತ್ತಿದ್ದಳು.
ಎರಡು ವರ್ಷಗಳ ನಂತರ ನನ್ನ ಪುತ್ರಿ ಹೊಸ ಬಟ್ಟೆಯನ್ನು ಧರಿಸಿದ್ದಾಳೆ, ಅದಕ್ಕಾಗಿಯೆಂದೇ ನನ್ನ ಜತೆ ಸ್ವಲ್ಪ ಸಮಯ ಆಡಿಕೊಳ್ಳಲೆಂದು ಆಕೆಯನ್ನು ಇಂದು ನನ್ನ ಜತೆ ಕರೆದುಕೊಂಡು ಬಂದಿದ್ದೇನೆ. ಪ್ರಾಯಶಃ ಇಂದು ನನಗೆ ಏನೂ ಗಳಿಕೆ ಮಾಡಲು ಸಾಧ್ಯವಿಲ್ಲ, ಆದರೆ ಇಂದು ನನ್ನ ಪುಟ್ಟ ಹುಡುಗಿಯೊಂದಿಗೆ ನನಗೆ ಸುತ್ತಾಡಬೇಕಿದೆ. ನನ್ನ ಪತ್ನಿಗೆ ತಿಳಿಸದೆ ರಹಸ್ಯವಾಗಿ ಈ ಮೊಬೈಲ್ ಫೋನನ್ನು ನೆರೆಮನೆಯವರಿಂದ ಎರವಲು ಪಡೆದಿದ್ದೇನೆ. ನನ್ನ ಪುತ್ರಿಯ ಫೋಟೋ ಇಲ್ಲ ಹಾಗೂ ಈ ದಿನ ಆಕೆಯ ಪಾಲಿಗೆ ಸ್ಮರಣೀಯವನ್ನಾಗಿಸಬೇಕೆಂಬುದು ನನ್ನಾಸೆ.
ಒಂದು ದಿನ ನನ್ನ ಬಳಿಯೂ ಒಂದು ಫೋನ್ ಇರುವಾಗ ನನ್ನ ಮಕ್ಕಳ ಬಹಳಷ್ಟು ಫೋಟೋಗಳನ್ನು ತೆಗೆಯುತ್ತೇನೆ. ಒಳ್ಳೆಯ ನೆನಪುಗಳನ್ನು ನನ್ನ ಜತೆ ಇರಿಸಬಯಸುತ್ತೇನೆ. ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಷ್ಟಕರವಾಗಿದ್ದರೂ ಅವರೆಲ್ಲರಿಗೂ ಶಿಕ್ಷಣವನ್ನು ನೀಡುತ್ತಿದ್ದೇನೆ. ಪರೀಕ್ಷೆಯ ಶುಲ್ಕವನ್ನು ಪಾವತಿಸುವುದು ನನಗೆ ಸಾಧ್ಯವಾಗದೇ ಇದ್ದಾಗ ಕೆಲವೊಮ್ಮೆ ಅವರಿಗೆ ಪರೀಕ್ಷೆಗೆ ಹಾಜರಾಗುವುದು ಕಷ್ಟವಾಗುತ್ತದೆ. ಆ ದಿನಗಳಲ್ಲಿ ಅವರು ಬಹಳಷ್ಟು ಬೇಸರದಿಂದಿರುತ್ತಾರೆ. ನಾವು ಪರೀಕ್ಷೆ ಮಿಸ್ ಮಾಡಿಕೊಂಡರೂ ಪ್ರತಿ ದಿನ ಜೀವನದ ಪರೀಕ್ಷೆಯನು ಎದುರಿಸುತ್ತಿರುತ್ತೇವೆ ಎಂದು ನಾನು ಅವರಿಗೆ ಹೇಳುತ್ತೇನೆ.
ಈಗ ನಾನು ಭಿಕ್ಷೆ ಬೇಡಲು ಹೋಗುತ್ತೇನೆ. ನನ್ನ ಮಗಳನ್ನು ಸಿಗ್ನಲ್ ಸಮೀಪ ಕೂರಿಸುತ್ತೇನೆ. ಅಲ್ಲಿ ಅವಳು ನಾನು ಬರುವವರೆಗೆ ಕಾಯುತ್ತಾಳೆ. ನಾನು ಭಿಕ್ಷೆ ಬೇಡುವಾಗ ದೂರದಿಂದ ಅವಳನ್ನು ನೋಡುತ್ತಿರುತ್ತೇನೆ. ನಾನು ಇನ್ನೊಬ್ಬರೆದುರು ಕೈಚಾಚಿದಾಗ ಆಕೆ ನನ್ನನ್ನು ನೋಡಿದಾಗ ನನಗೆ ನಾಚಿಕೆಯಾಗುತ್ತದೆ. ಆದರೆ ಆಕೆ ನನ್ನನ್ನು ಒಂಟಿಯಾಗಿ ಬಿಡುವುದೇ ಇಲ್ಲ. ದೊಡ್ಡ ಕಾರುಗಳಿರುವುದರಿಂದ ಅಪಘಾತಗಳು ಮತ್ತೆ ನಡೆಯಬಹುದು ಹಾಗೂ ಈ ಕಾರುಗಳು ನನ್ನ ಮೇಲೆ ಹರಿದು ನಾನು ಸಾಯಬಹುದೆಂಬ ಭಯ ಅವಳಿಗೆ.
ನನಗೆ ಸ್ವಲ್ಪ ಹಣ ಸಿಕ್ಕಾಗಲೆಲ್ಲಾ ನನ್ನ ಮಗಳ ಕೈಹಿಡಿದುಕೊಂಡು ನಾನು ಮನೆಗೆ ಹಿಂದಿರುಗುತ್ತೇನೆ. ಹಾದಿಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುತ್ತೇವೆ ಹಾಗೂ ನನ್ನ ಪುತ್ರಿ ಆ ಚೀಲವನ್ನು ಯಾವತ್ತೂ ತಾನೇ ಹಿಡಿದುಕೊಳ್ಳುತ್ತಾಳೆ. ಮಳೆಯ ಸಂದರ್ಭ ನಾವು ಒದ್ದೆಯಾಗುವುದು ಇಷ್ಟ ಪಡುತ್ತೇವೆ ಹಾಗೂ ನಮ್ಮ ಕನಸುಗಳ ಬಗ್ಗೆ ಮಾತನಾಡುತ್ತೇವೆ. ಆ ದಿನಗಳಲ್ಲಿ ನನಗೆ ಸಾಯಬೇಕೆಂದಿನಿಸುತ್ತದೆ.
ಆದರೆ ರಾತ್ರಿ ಹೊತ್ತು ಮಕ್ಕಳು ನನ್ನನ್ನು ಹಿಡಿದುಕೊಂಡು ನಿದ್ದೆಗೆ ಜಾರಿದಾಗ ಜೀವದಿಂದಿರುವುದು ಅಷ್ಟೊಂದು ಕೆಟ್ಟದ್ದಲ್ಲ ಎಂದಂದುಕೊಳ್ಳುತ್ತೇನೆ. ಆದರೆ ಸಿಗ್ನಲ್ ನಲ್ಲಿ ನನ್ನ ಮಗಳು ತಲೆ ಕೆಳಗೆ ಹಾಕಿಕೊಂಡು ನನಗಾಗಿ ಕಾಯುವುದು ನೋಡಿದಾಗ ಮಾತ್ರ ಅಯ್ಯೋ ಎನಿಸುತ್ತದೆ. ನಾನು ಭಿಕ್ಷೆ ಬೇಡುವಾಗ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುವುದಿಲ್ಲ. ಆದರೆ ಇಂದು ಹಾಗಲ್ಲ. ಇಂದು ನನ್ನ ಮಗಳು ಸಂತೋಷದಿಂದಿದ್ದಾಳೆ. ಇಂದು ಈ ತಂದೆ ಒಬ್ಬ ಭಿಕ್ಷುಕನಲ್ಲ. ಇಂದು ಈ ತಂದೆ ಒಬ್ಬ ರಾಜ ಹಾಗೂ ಇಲ್ಲಿದ್ದಾಳೆ ಆತನ ರಾಜಕುಮಾರಿ.
- ಮೊಹಮ್ಮದ್ ಕೌಸರ್ ಹುಸೇನ್