ಮನೆ ಬಿಟ್ಟು ಹೋಗಿದ್ದ ವಿದ್ಯಾರ್ಥಿನಿ ಕೊನೆಗೂ ರಾಜಧಾನಿಯಲ್ಲಿ ಪತ್ತೆ
ಬೆಂಗಳೂರು, ಎ.6: ಪರೀಕ್ಷೆ ಫಲಿತಾಂಶದ ಬಗ್ಗೆ ಪೋಷಕರೊಂದಿಗೆ ಜಗಳವಾಡಿಕೊಂಡು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಿಂದ ಮನೆ ಬಿಟ್ಟು ಹೋಗಿದ್ದ ವಿದ್ಯಾರ್ಥಿನಿ ದೀಕ್ಷಿತಾ ಕೊನೆಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ.
ಗುರುವಾರ ನಗರದ ಜಾಲಹಳ್ಳಿಯ ಚಿಕ್ಕಸಂದ್ರದ ನಿವಾಸಿ ಅನ್ಸರ್ ಎಂಬುವರ ಮನೆಯಲ್ಲಿ ವಿದ್ಯಾರ್ಥಿನಿ ದೀಕ್ಷಿತಾ(17) ಮತ್ತು ಆಕೆಯ ಕಾರು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನಲೆ:
ಪರೀಕ್ಷೆ ಫಲಿತಾಂಶದ ಬಗ್ಗೆ ಪೋಷಕರೊಂದಿಗೆ ಜಗಳವಾಡಿಕೊಂಡು ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದ ಸುರೇಶ್ ಎಂಬವರ ಮಗಳು ದೀಕ್ಷಿತಾ ನಾಪತ್ತೆಯಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಸುರೇಶ್ ಎಂಬುವರ ಮಗಳು ಮನೆಯಲ್ಲಿದ್ದ ತಂದೆಯ ಎಟಿಎಂ ತೆಗೆದುಕೊಂಡು ಕೆ.ಎ.02 ಝೆಡ್ 3394 ನೋಂದಣಿಯ ಕಾರನ್ನು ಚಲಾಯಿಸಿಕೊಂಡು ನಾಪತ್ತೆಯಾಗಿದ್ದಳು. ನಾಲ್ಕು ದಿನಗಳ ಹುಡುಕಾಟದ ನಂತರ ದೀಕ್ಷಿತಾ ಈಗ ಪತ್ತೆಯಾಗಿದ್ದು ಪೋಷಕರಿಗೆ ನೆಮ್ಮದಿ ತಂದಿದೆ.
ವಿರಾಜಪೇಟೆಯಿಂದ ಗೋಣಿಕೊಪ್ಪದ ಮೂಲಕ ಹುಣಸೂರಿಗೆ ಬಂದು ಅಲ್ಲಿಂದ ಮೈಸೂರಿಗೆ ದೀಕ್ಷಿತಾ ತನ್ನ ಕಾರಿನಲ್ಲಿ ಬಂದಿದ್ದಾಳೆ. ಹುಣಸೂರಿನ ಕಲಗುಣಿಕೆ ಬಳಿ ಬೆಳಗ್ಗೆ 8:39ಕ್ಕೆ ಆಕೆಯ ಕಾರು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈಕೆ ಮೈಸೂರು ಬೈಪಾಸ್ ಮೂಲಕ ಬೆಂಗಳೂರು ಕಡೆ ಹೊರಟಿದ್ದು, ಬೆಳಗ್ಗೆ 10:36ಕ್ಕೆ ಮಂಡ್ಯದಲ್ಲಿ ಆಕೆಯ ಕಾರು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಮವಾರ ಮಧ್ಯರಾತ್ರಿ 1:35ಕ್ಕೆ ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ ಸಾಗುವ ತುಮಕೂರು ಬಳಿಯ ಕರಿಜೀವನಹಳ್ಳಿ ಟೋಲ್ನ ಸಿಸಿಟಿವಿಯಲ್ಲಿ ದೀಕ್ಷಿತಾ ಕಾರಿನಲ್ಲಿ ಹೋಗಿರೋದು ಸೆರೆಯಾಗಿತ್ತು.
ಮಂಗಳವಾರ ಅದೇ ಟೋಲ್ನಿಂದ ಬೆಳಗ್ಗೆ 11:47ಕ್ಕೆ ವಾಪಸ್ ಬೆಂಗಳೂರಿನ ಕಡೆಗೆ ಬಂದಿದ್ದಳು. ತುಮಕೂರಿನ ಕ್ಯಾತ್ಸಂದ್ರ ಬಳಿ ಮಂಗಳವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಎಟಿಎಂನಲ್ಲಿ 500 ರೂ. ಹಣ ತೆಗೆದಿದ್ದಳು. ಬಳಿಕ ಕ್ಯಾತ್ಸಂದ್ರದ ಟೋಲ್ ದಾಟಿರುವುದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಅಲ್ಲಿಂದ ಮುಂದೆ ದೀಕ್ಷಿತಾ ಬೆಂಗಳೂರಿಗೆ ತಲುಪಿದ್ದಾಳೆ. ಮಂಗಳವಾರ ಸಂಜೆ ಜಾಲಹಳ್ಳಿ ಕ್ರಾಸ್ ಬಳಿ ಇರುವ ಎಟಿಎಂನಲ್ಲಿ ಒಂದು ಸಾವಿರ ಹಣ ಡ್ರಾ ಮಾಡಿದ್ದ ದೀಕ್ಷಿತಾ ಎಲ್ಲಿ ಹೋಗಿದ್ದಾಳೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಸಿಸಿಟಿವಿ ಹಾಗೂ ಎಟಿಎಂನಿಂದ ಹಣ ಡ್ರಾ ಮಾಡಿದ ಸುಳಿವು ಆಧರಿಸಿ ಬೆಂಗಳೂರಿನ ಜಾಲಹಳ್ಳಿ, ಪೀಣ್ಯ ಸುತ್ತಮುತ್ತ ಇರಬಹುದು ಎಂದು ಪೊಲೀಸರು ಮತ್ತು ಆಕೆಯ ಪೋಷಕರು ಬುಧವಾರಯಿಂದ ಬೆಂಗಳೂರಿನಲ್ಲಿ ಹುಡುಕಾಟ ನಡೆಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಚಿಕ್ಕಸಂದ್ರದಲ್ಲಿ ಕಾರು ದೊರೆತ ಸಮೀಪದಲ್ಲೇ ಇರುವ ಕಟ್ಟಡದಲ್ಲಿ ದೀಕ್ಷಿತಾಗೆ ಸ್ಥಳೀಯ ನಿವಾಸಿ ಅನ್ಸರ್ ಎಂಬುವರು ಆಶ್ರಯ ನೀಡಿದ್ದರು. ತನಗೆ ಅಪ್ಪ-ಅಮ್ಮ ಯಾರೂ ಇಲ್ಲ ಎಂದು ಹೇಳಿಕೊಂಡಿದ್ದಕ್ಕೆ ಅನ್ಸರ್ ಆಶ್ರಯ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.







