ಹಿಮಪಾತಕ್ಕೆ ಸಿಲುಕಿದ ಲಡಾಖ್ನ ಸೇನಾಠಾಣೆ
ಇಬ್ಬರು ಯೋಧರ ರಕ್ಷಣೆ,ಮೂವರು ನಾಪತ್ತೆ

ಶ್ರೀನಗರ,ಎ.6: ಎಪ್ರಿಲ್ ತಿಂಗಳಲ್ಲಿ ಈವರೆಗೆ ಕಂಡರಿಯದ ಹಲವಾರು ಹಿಮಪಾತಗಳು ಗುರುವಾರ ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ್ದು, ಲಡಾಕ್ನ ಬಟಾಲಿಕ್ ವಿಭಾಗದಲ್ಲಿ ಸೇನೆಯ ಠಾಣೆಯೊಂದು ಹಿಮಪಾತಕ್ಕೆ ಸಿಲುಕಿದೆ. ಐವರು ಯೋಧರು ಹಿಮದಡಿ ಹೂತುಹೋಗಿದ್ದು, ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ. ಉಳಿದ ಮೂವರಿಗಾಗಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಸೇನೆಯ ಉತ್ತರ ಕಮಾಂಡ್ ಟ್ವೀಟಿಸಿದೆ.
ವಿಶೇಷ ತರಬೇತಿ ಪಡೆದಿರುವ ಮತ್ತು ಸುಸಜ್ಜಿತ ಹಿಮಪಾತ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅದು ತಿಳಿಸಿದೆ.
ಚಂಡಿಗಡದಲ್ಲಿರುವ ಹಿಮಪಾತ ಅಧ್ಯಯನ ಸಂಸ್ಥೆಯು ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಕೆಲವೆಡೆಗಳಲ್ಲಿ ಹಿಮಪಾತ ಸಂಭವಿಸಬಹುದೆಂಬ ಮುನ್ನೆಚ್ಚರಿಕೆಯನ್ನು ಇಂದು ಬೆಳಿಗ್ಗೆ ನೀಡಿತ್ತು. ಕಾರ್ಗಿಲ್ನಲ್ಲಿ ಅತ್ಯಂತ ಅಪಾಯಕಾರಿ ಹಿಮಪಾತ ಎಚ್ಚರಿಕೆ ಜಾರಿಯಲ್ಲಿದೆ ಎಂದು ಡಿಆರ್ಡಿಒ ತಿಳಿಸಿದೆ.
Next Story