'ಮಹಾವೀರ ಶಾಂತಿ' ಪ್ರಶಸ್ತಿಗೆ ಡಾ.ಶಿವಕುಮಾರಸ್ವಾಮೀಜಿ ಆಯ್ಕೆ
'ಅಕ್ಕಮಹಾದೇವಿ ಪ್ರಶಸ್ತಿ'ಗೆ ಮಲ್ಲಿಕಾ ಘಂಟಿ ಆಯ್ಕೆ

ಬೆಂಗಳೂರು, ಎ. 6: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ 'ಪ್ರತಿಷ್ಠಿತ ಭಗವಾನ್ ಮಹಾವೀರ ಶಾಂತಿ' ಪ್ರಶಸ್ತಿಗೆ ಶತಾಯುಷಿ, ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಕೃತಿ ಸಚಿವೆ ಉಮಾಶ್ರಿ ಪ್ರಕಟಿಸಿದ್ದಾರೆ.
ಶ್ರೀಗಳು, 110 ವರ್ಷಗಳನ್ನು ಪೂರೈಸಿದ್ದು, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಿದ್ದಗಂಗೆ ಪೀಠದ ನೇತೃತ್ವ ವಹಿಸಿಕೊಂಡು ತ್ರಿವಿಧ ದಾಸೋಹದಿಂದ ಜಾತಿ, ಮತ, ಪಂಥಗಳ ಭೇದವಿಲ್ಲದೆ ಅಕ್ಷರ, ವಸತಿ ಮತ್ತು ಅನ್ನದಾಸೋಹದ ಕೇಂದ್ರವಾಗಿ ಸಿದ್ದಗಂಗಾ ಮಠವನ್ನು ಬೆಳೆಸಿದರು.
ಗ್ರಾಮೀಣ ಮಕ್ಕಳಿಗೆ ವಿಶೇಷ ಆದ್ಯತೆ ನೀಡಿ ಅವರ ಬದುಕನ್ನು ರೂಪಿಸುವಲ್ಲಿ ಶ್ರೀಗಳು ಮಾಡಿದ ಕೆಲಸ ಅಸಮಾನ್ಯ. ಅವರ ಸೇವೆಯನ್ನು ಪರಿಗಣಿಸಿ ಮಹಾವೀರ ಶಾಂತಿ ಪ್ರಶಸ್ತಿಗೆ ಡಾ.ಶಿವಕುಮಾರ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಗಿದೆ. ಇತಿಹಾಸ ತಜ್ಞ ಡಾ.ಷ.ಶೆಟ್ಟರ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಶ್ರೀಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿಯನ್ನು ಎ.9ರಂದು ನಡೆಯಲಿರುವ ಭಗವಾನ್ ಮಹಾವೀರ ಜಯಂತಿ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಂಪುಟ ಸಚಿವರು ಸೇರಿದಂತೆ ನಾಡಿನ ಗಣ್ಯರು ಪ್ರದಾನ ಮಾಡಲಿದ್ದಾರೆ ಎಂದು ಸಚಿವೆ ಉಮಾಶ್ರೀ ಅಧಿಕೃತ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಲ್ಲಿಕಾ ಘಂಟಿ ಆಯ್ಕೆ:

ಮಹಿಳಾ ಪರ ಹೋರಾಟಗಳಿಗೆ ಹೆಸರುವಾಸಿ ಆಗಿರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರನ್ನು 2016ನೆ ಸಾಲಿನ ಅಕ್ಕಮಹಾದೇವಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉಮಾಶ್ರೀ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಅಗಸಬಾಳು ಗ್ರಾಮದಲ್ಲಿ ಹುಟ್ಟಿದ ಡಾ.ಮಲ್ಲಿಕಾಘಂಟಿ ಕನ್ನಡದ ಸಾಹಿತ್ಯ ಲೋಕದಲ್ಲಿ ತಮ್ಮ ವಿಶಿಷ್ಟ ಬರಹಗಳ ಮೂಲಕ ಗುರುತಿಸಿಕೊಂಡವರು. ಕತೆ, ವಿಮರ್ಶೆ, ನಾಟಕ, ಜೀವನ ಚರಿತ್ರೆ ಸೇರಿದಂತೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿದವರು ಡಾ. ಮಲ್ಲಿಕಾ ಘಂಟಿ.
ತುಳಿಯದಿರಿ ನನ್ನ, ಈ ಹೆಣ್ಣುಗಳೇ ಹೀಗೆ, ರೊಟ್ಟಿ ಮತ್ತು ಹುಡುಗಿ, ಬೆಲ್ಲದಚ್ಚು ಮತ್ತು ಇರುವೆ ದಂಡು ಎಂಬ ಕವನ ಸಂಕಲನಗಳು ಇವರಿಗೆ ಹೆಸರು ತಂದುಕೊಟ್ಟಿವೆ. ತನುಕರಗದವರಲ್ಲಿ, ಧರಣಿಯ ಮೇಲೊಂದು, ಒಳಗೆ ಸತ್ತು ಹೊರಗೆ ಎಂಬ ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ.
ಒಂದು ಬಾವಿಯ ಸುತ್ತಾ ಎಂಬ ನಾಟಕವನ್ನೂ ಇವರು ರಚಿಸಿದ್ದಾರೆ. ಮಲ್ಲಿಕಾ ಘಂಟಿ ದಲಿತ ಬಂಡಾಯ ಚಳುವಳಿ ಸೇರಿದಂತೆ ಜನಪರ ಹೋರಾಟಗಳಲ್ಲಿ ತಮ್ಮಲ್ಲಿ ಗುರುತಿಸಿಕೊಂಡಿದ್ದಾರೆ. ಕಾವ್ಯಾನಂದ ಪುರಸ್ಕಾರ, ಗೊರೂರು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ. ಪ್ರಸ್ತುತ ಹಂಪಿ ಕನ್ನಡ ವಿವಿ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಮಹಿಳಾ ಸಂವೇದನಾ ಪರ ಚಿಂತನೆ-ಹೋರಾಟಗಳು ಶಿವಶರಣೆಯರ ಆಶಯಗಳಿಗೆ ಅನುಗುಣವಾಗಿದೆ ಎಂದು ಗುರುತಿಸಿರುವ ಡಾ. ಬಿ.ಟಿ.ಲಲಿತಾನಾಯಕ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು 2016ನೆ ಸಾಲಿನ ಅಕ್ಕಮಹಾದೇವಿ ಪ್ರಶಸ್ತಿಗೆ ಮಲ್ಲಿಕಾ ಘಂಟಿ ಅವರನ್ನು ಆಯ್ಕೆ ಮಾಡಿದ್ದು, ಈ ಪ್ರಶಸ್ತಿಯನ್ನು ಎ.11ರಂದು ನಡೆಯಲಿರುವ ಅಕ್ಕಮಹಾದೇವಿ ಜಯಂತಿ ವೇಳೆ ಪ್ರದಾನ ಮಾಡಲಾಗುವುದು.
ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ಮತ್ತು ಅಕ್ಕಮಹಾದೇವಿ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿಗೆ ನೀಡಲಾಗುತ್ತಿದ್ದು, ಎರಡೂ ಪ್ರಶಸ್ತಿಗಳು ತಲಾ 3 ಲಕ್ಷ ರೂ.ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿವೆ.
-ಉಮಾಶ್ರೀ ಕನ್ನಡ ಮತ್ತು ಸಂಸ್ಕೃತಿ ಸಚಿವೆ







