ಚುನಾವಣಾ ಭರವಸೆ ಈಡೇರಿಸಲು ವಿಫಲವಾದರೆ ಪಕ್ಷಗಳನ್ನು ಹೊಣೆಗಾರರನ್ನಾಗಿಸಬೇಕು: ನ್ಯಾ. ಖೇಹರ್

ಹೊಸದಿಲ್ಲಿ, ಎ.8: ಚುನಾಣೆಯ ಸಂದರ್ಭ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡುವ ಬಹುತೇಕ ಭರವಸೆಗಳು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದ್ದು ಅನುಷ್ಠಾನಗೊಳ್ಳುತ್ತಿಲ್ಲ. ರಾಜಕೀಯ ಪಕ್ಷಗಳಲ್ಲಿರುವ ಹೊಣೆಗಾರಿಕೆಯ ಕೊರತೆ ಇದಕ್ಕೆ ಕಾರಣ ಎಂದು ಭಾರತದ ಪ್ರಧಾನ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹೇಳಿದ್ದಾರೆ.
ಆರ್ಥಿಕ ಸುಧಾರಣೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ಸಾಂವಿಧಾನಿಕ ಧ್ಯೇಯಕ್ಕೂ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗೂ ಯಾವುದೇ ಸಂಬಂಧ ಇರುವುದಿಲ್ಲ. ಪಕ್ಷದ ಸದಸ್ಯರ ನಡುವಿನ ಹೊಂದಾಣಿಕೆಯ ಕೊರತೆ ಚುನಾವಣೆಯ ಸಂದರ್ಭ ತಾವು ನೀಡಿದ್ದ ಭರವಸೆ ಈಡೇರದೆ ಇರಲು ಕಾರಣವಾಗಿದೆ ಎಂಬ ಲಜ್ಜೆಗೆಟ್ಟ ಹೇಳಿಕೆ ನೀಡುವ ಮೂಲಕ ರಾಜಕೀಯ ಪಕ್ಷಗಳು ತಮ್ಮ ವೈಫಲ್ಯವನ್ನು ಸಮರ್ಥಿಸಿಕೊಳ್ಳುತ್ತವೆ ಎಂದು ನ್ಯಾಯಮೂರ್ತಿ ಖೇಹರ್ ನುಡಿದರು. ಚುನಾವಣೆ ಭರವಸೆ ಈಡೇರಿಸಲು ವಿಫಲವಾಗುವ ಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದವರು ಅಭಿಪ್ರಾಯಪಟ್ಟರು.
ಈ ವರ್ಷದ ಜನವರಿ 4ರಂದು ಭಾರತದ ಪ್ರಧಾನ ನ್ಯಾಯಾಧೀಶರಾಗಿ ನಿಯುಕ್ತಿಗೊಂಡಿದ್ದ ನ್ಯಾಯಮೂರ್ತಿ ಜೆ.ಎಸ್.ಖೇಹರ್, ಈ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಏರಿದ ಪ್ರಪ್ರಥಮ ಸಿಖ್ ಆಗಿದ್ದಾರೆ.





