ಅಲ್ವಾರ್ ಹತ್ಯೆ ಪ್ರಕರಣದಲ್ಲಿ ವಿದ್ಯಾರ್ಥಿ, ಶಿಕ್ಷಕ, ನರ್ಸ್ ಆರೋಪಿಗಳು!
ಪ್ರಮುಖ ಸೂತ್ರಧಾರರು ಇನ್ನೂ ನಾಪತ್ತೆ

ಅಲ್ವಾರ್, ಎ.9: ಗೋರಕ್ಷಕರಿಂದ ಹಲ್ಲೆಗೊಳಗಾಗಿ ಮೃತಪಟ್ಟ ಪೆಹ್ಲೂ ಖಾನ್ ಹತ್ಯೆ ಪ್ರಕರಣದಲ್ಲಿ ಹೆಸರಿಸಿರುವ ಹಾಗೂ ಬಂಧಿಸಿರುವವರಲ್ಲಿ ವಿದ್ಯಾರ್ಥಿ, ಶಿಕ್ಷಕ ಹಾಗೂ ನರ್ಸ್ ಸೇರಿದ್ದು, ಪ್ರಮುಖ ಸೂತ್ರಧಾರ ಇನ್ನೂ ತಲೆ ಮರೆಸಿಕೊಂಡಿದ್ದಾನೆ.
ಹುಕುಂ ಚಂದ್, ನವೀನ್ ಶರ್ಮಾ, ಜಗ್ಮಲ್ ಯಾದವ್, ಓಂಪ್ರಕಾಶ್, ಸುಧೀರ್ ಹಾಗೂ ರಾಹುಲ್ ಸಹಾನಿ ಹಾಗೂ ಇತರರು ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಖಾನ್ ಹೇಳಿಕೆ ನೀಡಿದ್ದರು. ಈ ಎಲ್ಲಾ ಆರೋಪಿಗಳು ಇನ್ನೂ ತಲೆ ಮರೆಸಿಕೊಂಡಿದ್ದು, ಈಗ ವಿವಿನ್ ಯಾದವ್, ರವೀಂದ್ರ ಯಾದವ್, ಕಾಳುರಾಮ್ ಯಾದವ್, ದಯಾನಂದ್ ಹಾಗೂ ನೀರಜ್ ಎಂಬವರನ್ನು ಬಂಧಿಸಲಾಗಿದೆ.
ಖಾನ್ ಹಾಗೂ ಇತರ ನಾಲ್ವರ ಮೇಲೆ ಹಲ್ಲೆ ನಡೆಸಿದ ತಂಡದಲ್ಲಿ ಇವರು ಸೇರಿದ್ದಾರೆ. ಎಲ್ಲ ಬಂಧಿತರೂ ಹಲ್ಲೆ ತಂಡದಲ್ಲಿರುವುದು ವೀಡಿಯೊ ಕ್ಲಿಪ್ಪಿಂಗ್ನಿಂದ ಸ್ಪಷ್ಟವಾಗಿ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ಪ್ರಕಾಶ್ ಹೇಳಿದ್ದಾರೆ.
ಈ ಪೈಕಿ ಹುಕುಮ್ಚಂದ್ ಹಾಗೂ ನವೀನ್ ಶರ್ಮಾ ಬೆಹ್ರೋರ್ನ ಖಾಸಗಿ ರಾಜೇಶ್ವರ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರೆ, ಮತ್ತೊಬ್ಬರು ಜನಪ್ರಿಯ ಅಕೌಂಟ್ಸ್ ಶಿಕ್ಷಕ. ಜಗ್ಮಲ್ ಯಾದವ್, ಹರ್ಯಾಣ ಸರ್ಕಾರಿ ಕಾಲೇಜಿನಲ್ಲಿ ನಿವೃತ್ತರಾದ ಬಳಿಕ ಬೆಹ್ರೋರ್ನಲ್ಲಿ ಗೋಶಾಲೆ ನಡೆಸುತ್ತಿದ್ದಾರೆ. ಮತ್ತೊಬ್ಬ ಆರೋಪಿ ಓಂಪ್ರಕಾಶ್ ಯಾದವ್ ಸ್ಥಳೀಯವಾಗಿ ಪ್ರಭಾವಿ ವ್ಯಕ್ತಿ. ರಾಹುಲ್ ಎಂಕಾಂ ಪದವಿ ಮುಗಿಸಿದ ನಿರುದ್ಯೋಗಿ. ಸುಧೀರ್ ಎಂಬ ಆರೋಪಿ ಗೋ ಸಹಾಯವಾಣಿ ನಿರ್ವಹಿಸುತ್ತಿದ್ದಾನೆ. ವಿಪಿನ್ ವಿದ್ಯಾರ್ಥಿ ಮುಖಂಡ ಹಾಗೂ ಪದವಿ ವಿದ್ಯಾರ್ಥಿಯಾಗಿದ್ದರೆ, ಕಾಳುರಾಂ ಸಾರಿಗೆ ಏಜೆಂಟ್. ರವೀಂದ್ರ ಎಂಬ ಆರೋಪಿ, ಗಾಯಾಳುಗಳು ಚಿಕಿತ್ಸೆಗೆ ದಾಖಲಾಗಿದ್ದ ಕೈಲಾಶ್ ಆಸ್ಪತ್ರೆಯ ಸ್ಟಾಫ್ ನರ್ಸ್ ಎಂದು ಆಸ್ಪತ್ರೆಯ ನಿರ್ದೇಶಕ ಶ್ಯಾಮ್ಸುಂದರ್ ಶರ್ಮಾ ಒಪ್ಪಿಕೊಂಡಿದ್ದಾರೆ.
ಬಹುತೇಕ ಎಲ್ಲರೂ ಹಿಂದೆ ಯಾವುದೇ ಪ್ರಕರಣದಲ್ಲಿ ಭಾಗಿಯಾದ ದಾಖಲೆ ಹೊಂದಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ. ಪ್ರಮುಖ ಆರೋಪಿಗಳ ಪತ್ತೆಗೆ ಜಾಲ ರೂಪಿಸಲಾಗಿದೆ ಎಂದು ಮೂಲಗಳು ಹೇಳಿವೆ.