ಪತ್ನಿಗೆ ಚುಡಾಯಿಸಿದವನಿಗೆ ಥಳಿಸಿದ ಪೊಲೀಸ್ ಪೇದೆ ಅಮಾನತು
ಅಮಾನತಿಗೆ ಸಚಿವ ಪ್ರಮೋದ್ ಕಾರಣ: ಆರೋಪ

ಉಡುಪಿ, ಎ.9: ಪತ್ನಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನಿಗೆ ಹಲ್ಲೆ ನಡೆಸಿರುವ ಮಲ್ಪೆ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.
ಹಲ್ಲೆಗೊಳಗಾದ ಮಲ್ಪೆ ಫಿಶ್ಮಿಲ್ ಉದ್ಯೋಗಿ ಕುಮಾರ್ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ಹಲ್ಲೆಗೈದ ಪೊಲೀಸ್ ಸಿಬ್ಬಂದಿ ಪ್ರಕಾಶ್ರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ. ಬಾಲಕೃಷ್ಣ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಎ.5ರಂದು ಪ್ರಕಾಶ್ ತನ್ನ ಗರ್ಭಿಣಿ ಪತ್ನಿಯೊಂದಿಗೆ ಬೈಕಿನಲ್ಲಿ ಬರುತ್ತಿದ್ದಾಗ ಕುಮಾರ್ ಹಾಗೂ ಇನ್ನೊಬ್ಬರು ಪ್ರಕಾಶ್ ಪತ್ನಿಗೆ ಚುಡಾಯಿಸಿ ಕಿರುಕುಳ ನೀಡಿದರೆನ್ನಲಾಗಿದೆ. ಇದಕ್ಕೆ ಪ್ರಕಾಶ್ ಅವರಿಗೆ ಥಳಿಸಿದ್ದರೆಂದು ಹೇಳಲಾಗಿದೆ. ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಚುಡಾಯಿಸಿದ ಕುಮಾರ್ ಹಾಗೂ ಇನ್ನೊಬ್ಬ ಕಾರ್ಮಿಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾಲಕತ್ವದ ರಾಜ್ ಫಿಶ್ಮಿಲ್ನ ನೌಕರರಾಗಿದ್ದು, ಈ ಕಾರಣಕ್ಕೆ ಸಚಿವರು ಒತ್ತಡ ತಂದು ಹಿರಿಯ ಅಧಿಕಾರಿಗಳ ಮೂಲಕ ಪ್ರಕಾಶ್ ಅವರನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
‘ಕುಮಾರ್ ನಮ್ಮ ಕಂಪೆನಿಯ ಟ್ರಾಕ್ಟರ್ ಚಾಲಕ. ಇದೀಗ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಮ್ಮ ಕಂಪೆನಿ ಪರವಾಗಿ ಪೊಲೀಸ್ ಪೇದೆಯ ವಿರುದ್ಧ ದೂರು ನೀಡಿದ್ದೇವೆ. ಪೊಲೀಸರು ದಬ್ಬಾಳಿಕೆ ಮಾಡುವುದು ಸರಿಯಲ್ಲ. ಇದರಿಂದ ಕುಮಾರ್ ಬೆನ್ನು ಮೂಳೆ ಮುರಿದಿದೆ. ಚಾಲಕ ಕುಮಾರ್ ತಪ್ಪು ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಪೊಲೀಸ್ ಸಿಬ್ಬಂದಿ ಪ್ರಕಾಶ್ ಅಮಾನತುಗೊಳಿಸಿದ ಬಳಿಕ ಆತನ ಪತ್ನಿ ಕುಮಾರ್ ವಿರುದ್ಧ ದೂರು ನೀಡಿರಬಹುದು’ ಎಂದು ಸಚಿವ ಪ್ರಮೋದ್ ಮಧ್ವರಾಜ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕುಮಾರ್ ಕಿರುಕುಳ ನೀಡಿರುವ ಕುರಿತು ಅಮಾನತುಗೊಂಡಿರುವ ಪೊಲೀಸ್ ಪತ್ನಿ ಜ್ಯೋತಿ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಇಡೀ ಪ್ರಕರಣದ ಕುರಿತು ಪ್ರಕಾಶ್ ಬೆಂಗಳೂರಿನ ಅಧಿಕಾರಿಗಳಿಗೆ ವಿವರಿಸುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೇದೆ ಪತ್ನಿಯಿಂದ ಪ್ರತಿದೂರು: ಪ್ರಕಾಶ್ ಪತ್ನಿ ಜ್ಯೋತಿಯವರು ಕುಮಾರ್ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ಎ.7ರಂದು ರಾತ್ರಿ ದೂರು ನೀಡಿದ್ದು, ಅದರಂತೆ ಅದರ ಪ್ರಕರಣ ದಾಖಲಾಗಿದೆ. ಇದೀಗ ಈ ಎರಡು ಪ್ರಕರಣದ ಬಗ್ಗೆಯೂ ತನಿಖೆ ಮುಂದುವರೆದಿದೆ ಎಂದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಯಾರು ಕೂಡ ನಮ್ಮ ಮೇಲೆ ಒತ್ತಡ ಹೇರಿಲ್ಲ ಮತ್ತು ನಮಗೆ ದೂರವಾಣಿ ಕರೆಯೂ ಮಾಡಿಲ್ಲ. ಸಹಜವಾಗಿ ಪೊಲೀಸ್ ನಿಯಮಾನುಸಾರ ಮೆಡಿಕೊ ಲೀಗಸ್ ಕೇಸಿನ ಪ್ರಕರಣ ದಾಖಲಿಸಿ, ಇಲಾಖಾ ಶಿಸ್ತಿನ ನಡವಳಿಯಂತೆ ಪೊಲೀಸ್ ಸಿಬ್ಬಂದಿಯ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದಾರೆ.
ಸಚಿವ ಪ್ರಮೋದ್ ಸ್ಪಷ್ಟನೆ: ‘ಕುಮಾರ್ ನಮ್ಮ ಕಂಪೆನಿಯಲ್ಲಿ 15 ವರ್ಷಗಳಿಂದ ಟ್ಯಾಕ್ಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಗುಣ ನಡೆತ ವ್ಯಕ್ತಿ. ಎಟಿಎಂಗೆ ಹಣ ತೆಗೆಯಲು ಹೋದ ಕುಮಾರ್ ಅಲ್ಲಿಗೆ ಬಂದಿದ್ದ ಪೊಲೀಸ್ ಪ್ರಕಾಶ್ನ ಪತ್ನಿ ಯನ್ನು ನೋಡಿದ ಎಂದು ಹೇಳಿ ಕುಮಾರ್ಗೆ ಥಳಿಸಿ ಹೊಡೆದು ಮೂಳೆ ಮುರಿದು ಹಾಕಿದ್ದಾರೆ. ಆ ರೀತಿ ಹೊಡೆಯಲು ಪೊಲೀಸ್ ಕಾನ್ಸ್ಟೇಬಲ್ಗೆ ಅಧಿಕಾರ ಇಲ್ಲ. ಕುಮಾರ್ ತಪ್ಪಿತಸ್ಥನಾಗಿದ್ದರೆ ದೂರು ನೀಡಿ ತನಿಖೆ ನಡೆಸಬಹುದಿತ್ತು. ಅದು ಬಿಟ್ಟು ಕಾನ್ಸ್ಟೇಬಲ್ ಕಾನೂನು ಕೈಗೆತ್ತಿಕೊಂಡು ಹೊಡೆ ಯುವುದು ಕಾನೂನು ಬಾಹಿರ ಎಂದು ಸಚಿವರು ತಿಳಿಸಿದರು.
‘ಆಸ್ಪತ್ರೆಯವರು ನೀಡಿದ ಮೆಡಿಕೋ ಲೀಗಸ್ ಕೇಸ್ನಂತೆ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೆ ಕಾನೂನು ಪ್ರಕಾರ ಆತನನ್ನು ಅಮಾನತು ಮಾಡಲಾಗಿದೆ. ಆದರೆ ನಾನು ಪ್ರಕಾಶ್ನನ್ನು ಅಮಾನತು ಮಾಡುವಂತೆ ಎಸ್ಪಿಗೆ ಒತ್ತಡ ಹೇರುವ ಕೆಲಸ ಮಾಡಿಲ್ಲ. ಈ ಘಟನೆಯ ನಂತರ ಪೇದೆಯೇ ನಮ್ಮ ಕಂಪೆನಿಗೆ ಬಂದು ಕಂಪೆನಿಯನ್ನು ನೋಡಿಕೊಳ್ಳುತ್ತಿರುವ ನನ್ನ ಪತ್ನಿ ಜೊತೆ ಕೇಸು ಹಾಕದಂತೆ ಕೇಳಿಕೊಂಡಿದ್ದಾನೆ. ಆದರೆ ನನ್ನ ಪತ್ನಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಕಾನೂನು ಪ್ರಕಾರ ಎಸ್ಪಿಯವರು ಕ್ರಮ ಕೈಗೊಂಡಿದ್ದಾರೆ" ಎಂದರು.
ಪ್ರಕಾಶ್ ಪತ್ನಿ ಕೂಡ ಕುಮಾರ್ ವಿರುದ್ಧ ಪ್ರತಿದೂರು ನೀಡಿದ್ದಾರೆ. ಅದರ ಬಗ್ಗೆಯೂ ತನಿಖೆ ಆಗಲಿ. ತಪ್ಪು ಮಾಡಿದ್ದರೆ ಕುಮಾರ್ ಗೆ ಶಿಕ್ಷೆಯಾಗಲಿ. ಅದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಕುಮಾರ್ ಚುಡಾಯಿಸಿದ್ದಾನೆ ಎಂಬುದು ಕೌಂಟರ್ ಕೇಸ್ ನೀಡಲು ಮಾಡಿರುವ ಸುಳ್ಳು ಆರೋಪ. ಅಮಾನತುಗೊಂಡ ಪೇದೆ ಯನ್ನು ರಕ್ಷಿಸಲು ಕೌಂಟರ್ ಕೇಸ್ ನೀಡಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದರು.







