ತ್ರಿವಳಿ ತಲಾಖ್ ಉಚ್ಚರಿಸುವುದು ವಿಚ್ಛೇದನಕ್ಕೆ ಸಮವಲ್ಲ: ಸಲ್ಮಾ ಅನ್ಸಾರಿ

ಅಲಿಗಡ,ಎ.9: ಮೂರು ಬಾರಿ ತಲಾಖ್ನ್ನು ಉಚ್ಚರಿಸುವುದು ವಿಚ್ಛೇದನವಾಗುವುದಿಲ್ಲ ಎಂದು ಹೇಳಿರುವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಪತ್ನಿ ಸಲ್ಮಾ ಅನ್ಸಾರಿ ಅವರು, ಮೌಲ್ವಿಗಳ ಹೇಳಿಕೆಗಳನ್ನು ನಂಬುವ ಬದಲು ಕುರ್ಆನ್ ಅನ್ನು ಸಮಗ್ರವಾಗಿ ಓದುವಂತೆ ಮುಸ್ಲಿಂ ಮಹಿಳೆಯರಿಗೆ ಸೂಚಿಸಿದ್ದಾರೆ.
ಶನಿವಾರ ಇಲ್ಲಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಖ್ ಒಂದು ವಿಷಯವೇ ಅಲ್ಲ. ಯಾರೋ ಒಬ್ಬರು ಮೂರು ಬಾರಿ ತಲಾಖ್ ಎಂದು ಹೇಳಿದ ಮಾತ್ರಕ್ಕೆ ವಿಚ್ಛೇದನವಾಗುವುದಿಲ್ಲ ಎಂದು ಹೇಳಿದರು. ಮಹಿಳೆಯರು ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಕುರ್ಆನ್ನಲ್ಲಿಯೇ ಪಡೆಯಬಹುದಾಗಿದೆ ಎಂದರು.
ಕುರ್ಆನ್ನಲ್ಲಿ ಇಂತಹ ಯಾವುದೇ ನಿಯಮವಿಲ್ಲ. ಅವರು ಸುಮ್ಮನೆ ಹೇಳುತ್ತಿದ್ದಾರಷ್ಟೇ. ನೀವು ಅರಬಿಕ್ ಭಾಷೆಯಲ್ಲಿರುವ ಕುರ್ಆನ್ನ್ನು ಓದಬೇಕೇ ಹೊರತು ಅನುವಾದವನ್ನಲ್ಲ. ವೌಲಾನಾಗಳು ಅಥವಾ ಮುಲ್ಲಾಗಳು ಹೇಳಿದ್ದೆಲ್ಲವನ್ನು ಒಪ್ಪಿಕೊಳ್ಳಬೇಕಿಲ್ಲ. ನೀವು ಕುರ್ಆನ್ನ್ನು ಓದಲೇಬೇಕು,ಹದೀಸ್ನ್ನು ಓದಬೇಕು. ಪ್ರವಾದಿಯವರು ಏನು ಹೇಳಿದ್ದಾರೆ ಎನ್ನುವುದನ್ನು ನೋಡಿ ಎಂದು ಅವರು ಹೇಳಿದರು.





