ಭೂಪತಿ ವರ್ತನೆೆ ನಾಯಕನ ಸ್ಥಾನಕ್ಕೆ ತಕ್ಕುದಲ್ಲ: ಪೇಸ್

ಹೊಸದಿಲ್ಲಿ, ಎ.10: ಮಹೇಶ್ ಭೂಪತಿ ಅವರ ವರ್ತನೆ ಡೇವಿಸ್ ಕಪ್ನ ಆಟವಾಡದ ನಾಯಕನ ಸ್ಥಾನಕ್ಕೆ ತಕ್ಕುದಾಗಿಲ್ಲ ಎಂದು ತಮ್ಮಿಬ್ಬರ ಖಾಸಗಿ ಸಂಭಾಷಣೆಯನ್ನು ಬಹಿರಂಗಪಡಿಸಿದ ಮಹೇಶ್ ಭೂಪತಿ ವಿರುದ್ಧ ಲಿಯಾಂಡರ್ ಪೇಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘‘ಪೇಸ್ರನ್ನು ಉಜ್ಬೇಕಿಸ್ತಾನ ವಿರುದ್ಧದ ಡೇವಿಸ್ಕಪ್ ತಂಡದಿಂದ ಕೈಬಿಟ್ಟಿರುವ ಹಿಂದೆ ಯಾವುದೇ ವೈಯಕ್ತಿಕ ಕಾರ್ಯಸೂಚಿಯಿಲ್ಲ. ಆಡುವ ಬಳಗಕ್ಕೆ ಸೇರಿಸಿಕೊಳ್ಳುವೆ ಎಂದು ಪೇಸ್ಗೆ ಭರವಸೆಯನ್ನು ನೀಡಿರಲಿಲ್ಲ’’ ಎಂದು ಫೇಸ್ಬುಕ್ನಲ್ಲಿ ಭೂಪತಿ ಬಹಿರಂಗಪಡಿಸಿದ್ದರು.
ಮೂರು ಅಂಶಗಳ ಹೇಳಿಕೆಯನ್ನು ನೀಡಿರುವ 43ರಹರೆಯದ ಪೇಸ್, ಆಯ್ಕೆಗೆ ಫಾರ್ಮ್ ಮುಖ್ಯ ಮಾನದಂಡವಾಗಿದೆ ಎಂದು ನಮ್ಮಿಬ್ಬರ ನಡುವಿನ ಮಾತುಕತೆಯಲ್ಲಿ ಮುಖ್ಯವಾಗಿ ಪ್ರಸ್ತಾವವಾಗಿತ್ತು ಆದರೆ, ಅಂತಿಮ ಆಯ್ಕೆಯ ವೇಳೆ ಇದನ್ನು ಪಾಲಿಸಲಾಗಿಲ್ಲ. ನಾನು ಆಡುವುದಿಲ್ಲ ಎಂದು ಖಚಿತವಾಗಿ ಹೇಳಿಲ್ಲ. ನಾನು ಬೆಂಗಳೂರಿಗೆ ಬರುವ ಮೊದಲೇ ನಿರ್ಧಾರ ಕೈಗೊಂಡಿರುವುದು ಸ್ಟಷ್ಟವಾಗಿದೆ ಎಂದು ಹೇಳಿದರು.
ಭೂಪತಿಯ ಆರೋಪಕ್ಕೆ ಅತ್ಯಂತ ಶೀಘ್ರವೇ ವಿವರವಾದ ಪ್ರತಿಕ್ರಿಯೆ ನಿಡುವ ಎಂದಿರುವ 18 ಬಾರಿ ಗ್ರಾನ್ಸ್ಲಾಮ್ ಪ್ರಶಸ್ತಿ ವಿಜೇತ ಪೇಸ್‘‘ಮಹೇಶ್ ಭೂಪತಿ ಅವರ ಸುದೀರ್ಘ ಫೇಸ್ಬುಕ್ ಬರಹದಲ್ಲಿ ನನ್ನ ಡೇವಿಸ್ಕಪ್ ಸಾಧನೆಯನ್ನು ಕಡೆಗಣಿಸಲಾಗಿದೆ. ದೇಶಕ್ಕಾಗಿ ಯಾರು ಎಷ್ಟು ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆಂದು ಅಭಿಮಾನಿಗಳು ಪರೀಕ್ಷಿಸುತ್ತಾರೆ. ಯಾರು ಏನೇ ಹೇಳಿದರೂ ಇತಿಹಾಸ ಪುಸ್ತಕ ಮಾತ್ರ ಸುಳ್ಳು ಹೇಳುವುದಿಲ್ಲ’’ಎಂದರು.







