ಎ.15-16: ಕದ್ರಿ ಪಾರ್ಕ್ನಲ್ಲಿ ’ಕುಡ್ಲ ಕಲಾಮೇಳ’
ಮಂಗಳೂರು, ಎ.11: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಎ.15 ಮತ್ತು 16ರಂದು ನಗರದ ಕದ್ರಿ ಪಾರ್ಕ್ನ ರಸ್ತೆಯ ಇಕ್ಕೆಲಗಳಲ್ಲಿ ‘ಕುಡ್ಲ ಕಲಾಮೇಳ-2017’ರ ಚಿತ್ರಕಲೆ ಮತ್ತು ಪ್ರತಿಷ್ಠಾಪನಾ ಕಲೆಗಳ ಅನಾವರಣ ನಡೆಯಲಿದೆ ಎಂದು ಕರಾವಳಿ ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಪ್ರೊ. ಅನಂತ ಪದ್ಮನಾಭ ರಾವ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡ್ಲ ಕಲಾಮೇಳ ‘ವಿಶ್ವಕಲಾ ದಿನ’ವನ್ನು ಎ.15ರಂದು ಬೆಳಗ್ಗೆ 10 ಗಂಟೆಗೆ ಶಾಸಕ ಜೆ.ಆರ್. ಲೋಬೊ ಉದ್ಘಾಟಿಸಲಿದ್ದಾರೆ. ಮಳಿಗೆಗಳ ಉದ್ಘಾಟನೆಯನ್ನು ವಿಧಾನ ಪರಿಷತ್ನ ವಿಪಕ್ಷ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ನೆರವೇರಿಸಲಿದ್ದಾರೆ ಎಂದರು.
ಆಳ್ವರ ‘ವರ್ಣಸಿರಿ’ ಮತ್ತು ‘ಚಿತ್ರಸಿರಿ’ ಕಾರ್ಯಾಗಾರಗಳಲ್ಲಿ ಮೂಡಿಬಂದ ಶ್ರೇಷ್ಠ ಕಲಾಕೃತಿಗಳ ಅನಾವರಣವನ್ನು ಪಡುಬಿದ್ರೆಅದಾನಿ ಯುಪಿಸಿಎಲ್ನ ಕಾರ್ಯಕಾರಿ ನಿರ್ದೇಶಕ ಹಾಗು ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ನಡೆಸಿಕೊಡಲಿದ್ದಾರೆ. ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಮಂಗಳ ಕಿಡ್ನಿ ಪ್ರತಿಷ್ಠಾನದ ನಿರ್ದೇಶಕ ಡಾ.ಗಣಪತಿ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಕರ್ಣಾಟಕ ಬ್ಯಾಂಕ್ನ ಪಿಆರ್ಒ ಶ್ರೀನಿವಾಸ ದೇಶಪಾಂಡೆ, ಧರ್ಮದರ್ಶಿ ಹರಿಕೃಷ್ಣ ಪುನರೂರು, ರೂಪಾ ಡಿ. ಬಂಗೇರಾ, ಡಾ. ಮೋಹನ್ ಆಳ್ವ ಮತ್ತಿತರರು ಆಗಮಿಸಲಿದ್ದಾರೆ. ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಎ.16ರಂದು ಸಂಜೆ 6 ಗಂಟೆಗೆ ಸಮಾರೋಪ ನಡೆಯಲಿದ್ದು, ಡಾ.ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಫ್ರಾನ್ಸ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಬುಡಕಟ್ಟು ಜನಾಂಗದವರ ಕಲೆಯನ್ನು ಪ್ರಚುರಪಡಿಸಿದ ಚಾವಡಿಯ ಕಲಾವಿದ ದಿನೇಶ್ ಹೊಳ್ಳರಿಗೆ ವಿಶೇಷ ಕಲಾ ಪುರಸ್ಕಾರ ಮತ್ತು ಲಲಿತಕಲಾ ಅಕಾಡಮಿಯ ಮಾಜಿ ಸದಸ್ಯ ಬಿ.ಗಣೇಶ್ ಸೋಮಯಾಜಿಗೆ ಕಲಾಚಾವಡಿ ಪುರಸ್ಕಾರ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕುಡ್ಲ ಕಲಾಮೇಳದ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ಸಹ ಕಾರ್ಯದರ್ಶಿ ದಿನೇಶ್ ಹೊಳ್ಳ, ಬಿ.ಗಣೇಶ್ ಸೋಮಯಾಜಿ, ವಿಶ್ವಾಸ್ ಕೃಷ್ಣ ಉಪಸ್ಥಿತರಿದ್ದರು.







