ಕಾರ್ಮಿಕನ ಮೇಲೆ ಪೊಲೀಸ್ ಗೂಂಡಾಗಿರಿ: ಪ್ರಶಾಂತ್ ಅಮೀನ್
ಉಡುಪಿ, ಎ.11: ಮಲ್ಪೆ ರಾಜ್ಫಿಶ್ ಮಿಲ್ನ ಕಾರ್ಮಿಕ ಕುಮಾರ್ ಮೇಲೆ ಪೊಲೀಸ್ ಪೇದೆ ಪ್ರಕಾಶ್ ಗೂಂಡಾಗಿರಿ ತೋರಿದ್ದಲ್ಲದೆ, ಕುಮಾರ್ ವಿರುದ್ಧ ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಉಡುಪಿ ನಗರಸಭೆ ಸದಸ್ಯ ಪ್ರಶಾಂತ್ ಅಮೀನ್ ಆರೋಪಿಸಿದ್ದಾರೆ.
ಪ್ರಕಾಶ್ನ ಪತ್ನಿಯನ್ನು ನೋಡಿದ್ದ ಎಂಬ ಕಾರಣಕ್ಕೆ ಕುಮಾರ್ನನ್ನು ಠಾಣೆಗೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿರುವ ಪೊಲೀಸ್ ನ ಗೂಂಡಾ ಕಾರ್ಯವೈಖರಿ ಖಂಡನೀಯ. ಪೊಲೀಸ್ ಪತ್ನಿಯ ಮೈಮೇಲೆ ಕೈ ಹಾಕುವ ಯಾವುದೇ ರೀತಿಯ ಘಟನೆ ನಡೆದಿಲ್ಲ. ಇದಕ್ಕೆ ಮಲ್ಪೆ ಎಚ್ಡಿ ಎಫ್ಸಿ ಬ್ಯಾಂಕಿನ ಎಟಿಎಂನಲ್ಲಿರುವ ಸಿ.ಸಿ.ಕ್ಯಾಮರಾವೇ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
"ಪ್ರಕಾಶ್ ತನ್ನ ತಪ್ಪಿನ ಅರಿವಾಗಿ ಮಲ್ಪೆಎಸ್ಸೈಯೊಂದಿಗೆ ರಾಜ್ ಫಿಶ್ಮಿಲ್ ಸಂಸ್ಥೆಗೆ ಬಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಇದಕ್ಕೆ ನಾನು ಕೂಡಾ ಓರ್ವ ಸಾಕ್ಷಿ. ನನ್ನ ಪತ್ನಿಯನ್ನು ನೋಡಿದ್ದಕ್ಕೆ ನಾನು ಅವನಿಗೆ ಹೊಡೆದದ್ದು. ಆತನ ವೈದ್ಯಕೀಯ ಚಿಕಿತ್ಸೆಯನ್ನೆಲ್ಲಾ ನಾನು ಭರಿಸುತ್ತೇನೆ ಎಂದು ಹೇಳಿ ತಪ್ಪನ್ನು ಒಪ್ಪಿ ಕೊಂಡಿದ್ದನು. ತನಿಖೆಯಲ್ಲಿ ಪ್ರಕಾಶ್ ಮೇಲಿನ ಆರೋಪ ಸತ್ಯ ಎಂಬುದಾಗಿ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ಅಮಾನತುಗೊಳಿಸಲಾಗಿದೆ" ಎಂದರು.
ಕೋಪಗೊಂಡ ಪೇದೆ ಎಸ್ಸೈ ಮೇಲೆ ಸೇಡು ತೀರಿಸಿಕೊಳ್ಳಲು, ತನ್ನ ಹೆಂಡತಿಯನ್ನು ಬಳಸಿಕೊಂಡು ನಾಟಕವಾಡುತ್ತಿದ್ದಾನೆ. ಮಾತ್ರವಲ್ಲ ತನ್ನ ತಪ್ಪನ್ನು ಮರೆಮಾಚಲು ಕುಮಾರ್ ವಿರುದ್ಧ ಕೇಸು ನೀಡಿದ್ದಾನೆ. ಕಾನೂನು ಕೈಗೆತ್ತಿಕೊಂಡಿ ರುವ ಪೊಲೀಸ್ ಪ್ರಕಾಶ್ನ ಅಮಾನತು ಆದೇಶವನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯಬಾರದು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ







