ಮಲ್ಪೆ: ಜೈಭೀಮ್ ರ್ಯಾಲಿಗೆ ಸಿದ್ದತೆ

ಮಲ್ಪೆ, ಎ.12: ಸಂವಿಧಾನ ಶಿಲ್ಪಿಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 126ನೆ ಜನ್ಮದಿನಾಚರಣೆಯ ಪ್ರಯುಕ್ತ, ಯುವಜನತೆಯಲ್ಲಿ ದಲಿತ ಚಳವಳಿ ಮತ್ತು ಅಂಬೇಡ್ಕರ್ ಪ್ರಜ್ಞೆಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಜೈಭೀಮ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಇಲ್ಲಿನ ಸರಸ್ವತಿ ಯುವಕ ಮಂಡಳದ ಸಭಾಂಗಣದಲ್ಲಿ ನಡೆದ ಸಿದ್ದತಾ ಪೂರ್ವಸಭೆಯಲ್ಲಿ ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ದೇವರಾಜ್ ಭಾಗವಹಿಸಿದ್ದು, ನಿಗಮದಿಂದ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಜೈಬೀಮ್ ರ್ಯಾಲಿಯಲ್ಲಿ ಅತೀ ಹೆಚ್ಚು ಮಹಿಳೆಯರು ಪಾಲ್ಗೊಳುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕರಾವಳಿಯ ಹಲವು ದಲಿತ ಕಾಲನಿಯಲ್ಲಿ ರ್ಯಾಲಿ ಹಾದುಹೋಗುವುದರಿಂದ ಆ ಭಾಗಗಳ ದಲಿತ ಸ್ವಸಹಾಯ ಗುಂಪುಗಳನ್ನು ರ್ಯಾಲಿಯಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡುವುದಾಗಿ ಭರವಸೆ ನೀಡಿದರು. ಬೆಳಗ್ಗೆ 10 ಗಂಟೆಗೆ ವಡಬಾಂಡೇಶ್ವರ ಸರ್ಕಲ್ ಬಳಿ ಜೈಭೀಮ್ ರ್ಯಾಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಲಿದ್ದಾರೆ. ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂದ್ಯಾ ತಿಲಕರಾಜ್, ಯುವರಾಜ್ ಪುತ್ತೂರು, ಗಣೇಶ್ ನೆರ್ಗಿ, ಸುಂದರ ಕಪ್ಪೆಟ್ಟು, ವಿಠಲ ತೊಟ್ಟಂ ಹಾಗೂ ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ.
ಕರಾವಳಿಯ ದಲಿತ ಕಾಲನಿಯನ್ನು ಮುಖ್ಯ ಗುರಿಯಾಗಿಸಿಕೊಂಡು ಆಯೋಜಿಸಿರುವ ಈ ಜೈಭೀಮ್ ರ್ಯಾಲಿ ವಡಬಾಂಡೇಶ್ವರದಿಂದ ಹೊರಟು ಮಲ್ಪೆ, ಕೊಳ ಬೀಚ್, ತೊಟ್ಟಂ, ಬಡನಿಡಿಯೂರು, ಕದ್ಕೆ, ಗುಜ್ಜರಬೆಟ್ಟು, ಹೂಡೆ, ಕೆಮ್ಮಣ್ಣು, ನೇಜಾರು, ಕಲ್ಯಾಣಪುರ ಸಂತೆಕಟ್ಟೆ, ಲಕ್ಷ್ಮೀನಗರ, ಪಾಳೆಕಟ್ಟೆ, ಕೊಡವೂರು ಮಾರ್ಗವಾಗಿ ನೆರ್ಗಿಯಲ್ಲಿ ಸಮಾಪನಗೊಳ್ಳಲಿದೆ.







