ಮೊಬೈಲ್ ಟವರ್ನಿಂದ ಕ್ಯಾನ್ಸರ್: ದೂರು
ಟವರನ್ನು ಒಂದು ವಾರದೊಳಗೆ ಮುಚ್ಚಲು ಸುಪ್ರೀಂ ಆದೇಶ
ಹೊಸದಿಲ್ಲಿ, ಎ.12: ಗ್ವಾಲಿಯರ್ ನಗರದ ದಾಲ್ ಬಝಾರ್ ಪ್ರದೇಶದ ನಿವಾಸಿ ಪ್ರಕಾಶ್ ಶರ್ಮ ಅವರ ಮನೆ ಕೆಲಸದಾಳು ಆಗಿರುವ 42 ವರ್ಷದ ಹರೀಶ್ ಚಂದ್ ತಿವಾರಿ ಎಂಬವರ ಪ್ರಯತ್ನದ ಫಲವಾಗಿ ಸುಪ್ರೀಂ ಕೋರ್ಟ್ ಬಿಎಸ್ಸೆನ್ನೆಲ್ ಮೊಬೈಲ್ ಟವರ್ ಒಂದನ್ನು ಮುಚ್ಚಲು ಆದೇಶ ನೀಡಿದೆ. ಹದಿನಾಲ್ಕು ವರ್ಷಗಳಿಂದ ಈ ಮೊಬೈಲ್ ಟವರ್ನಿಂದ ಹೊರಸೂಸುವ ಅಪಾಯಕಾರಿ ವಿಕಿರಣಗಳಿಂದಾಗಿಯೇ ತನಗೆ ಕ್ಯಾನ್ಸರ್ ಬಂದಿದೆ ಎಂದು ಶರ್ಮ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅಪೀಲಿನಲ್ಲಿ ದೂರಿದ್ದರಲ್ಲದೆ ನೆರೆಮನೆಯವರು ತಮ್ಮ ಮನೆಯ ತಾರಸಿಯಲ್ಲಿ 2002ರಲ್ಲಿ ಅಕ್ರಮವಾಗಿ ಸ್ಥಾಪಿಸಿದ್ದ ಮೊಬೈಲ್ ಟವರ್ನಿಂದಾಗಿಯೇ ತಾನು ದಿನದ 24 ಗಂಟೆಯೂ ವಿಕಿರಣಗಳಿಂದ ಬಾಧಿತನಾಗಿದ್ದೇನೆ ಎಂದು ದೂರಿದ್ದರು.
ಅವರಿರುವ ಮನೆಯಿಂದ 50 ಮೀಟರಿಗಿಂತಲೂ ಕಡಿಮೆ ದೂರದಲ್ಲಿದ್ದ ಟವರ್ನಿಂದಾಗಿ ತಮಗೆ ಹಾಡ್ಕಿನ್ಸ್ ಲಿಂಫೊಮಾ ಉಂಟಾಗಿದೆಯೆಮದು ತಿವಾರಿ ಆಪಾದಿಸಿದ್ದರು.
ಅವರ ಪ್ರಕರಣದ ವಿಚಾರಣೆ ನಡೆಸಿದ ಜಸ್ಟಿಸ್ ರಂಜನ್ ಗೊಗೊಯಿ ಹಾಗೂ ನವೀನ್ ಸಿನ್ಹಾ ಅವರನ್ನೊಳಗೊಂಡ ಪೀಠ ಈ ಮೊಬೈಲ್ ಟವರ್ ಕಾರ್ಯನಿರ್ವಹಣೆಯನ್ನು ಏಳು ದಿನಗಳೊಳಗೆ ಸ್ಥಗಿತಗೊಳಿಸುವಂತೆ ಬಿಎಸ್ಸೆನ್ನೆಲ್ಗೆ ಆದೇಶಿಸಿ ದ್ದಾರೆ. ವಿಕಿರಣಗಳಿಂದ ಅಪಾಯವಾಗಿದೆ ಎಂದು ದೂರಿದ ವ್ಯಕ್ತಿಯೊಬ್ಬರ ಅಪೀಲಿನ ಆಧಾರದಲ್ಲಿ ಮೊಬೈಲ್ ಟವರೊಂದನ್ನು ಸುಪ್ರೀಂ ಕೋರ್ಟ್ ಮುಚ್ಚಿಸಿದ ಪ್ರಥಮ ಪ್ರಕರಣ ಇದಾಗಿದೆ.







