ನೋಟು ರದ್ದತಿ ಎಂಬ ಮಹಾ ವಂಚನೆಯ ಕುರಿತು
ಈ ಹೊತ್ತಿನ ಹೊತ್ತಿಗೆ
![ನೋಟು ರದ್ದತಿ ಎಂಬ ಮಹಾ ವಂಚನೆಯ ಕುರಿತು ನೋಟು ರದ್ದತಿ ಎಂಬ ಮಹಾ ವಂಚನೆಯ ಕುರಿತು](https://www.varthabharati.in/sites/default/files/images/articles/2017/04/13/scan.jpg)
‘‘ನೋಟು ರದ್ದತಿ’ಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವ ಕುರಿತಂತೆ ದೇಶದಲ್ಲಿ ಇನ್ನೂ ಗೊಂದಲಗಳು ಮುಂದುವರಿದೇ ಇವೆ. ಆರಂಭದಲ್ಲಿ ಕಪ್ಪು ಹಣ ನಿವಾರಣೆಗಾಗಿ ಈ ಕ್ರಮ ಎಂದಿರುವ ಸರಕಾರ, ಬಳಿಕ ಭಯೋತ್ಪಾದನೆ ಮಟ್ಟ ಹಾಕಲು ಎಂದಿತು. ಇದಾದ ಬಳಿಕ ಕಾಶ್ಮೀರದ ದಂಗೆಯನ್ನು ದಮನಿಸಲು ಎಂದಿತು. ಕೆಲ ಸಮಯದ ಬಳಿಕ ನೋಟು ರಹಿತ ವ್ಯವಹಾರವನ್ನು ಜಾರಿಗೊಳಲು ಈ ಮಹತ್ತರ ತೀರ್ಮಾನಕ್ಕೆ ಬರಲಾಗಿದೆ ಎಂದಿತು. ಒಟ್ಟಿನಲ್ಲಿ, ಸರಕಾರ ಇಂದಿಗೂ ನೋಟು ನಿಷೇಧವನ್ನು ಯಾಕಾಗಿ ಮಾಡಲಾಯಿತು ಮತ್ತು ಅದರಿಂದ ದೇಶದ ಮೇಲಾದ ಒಳಿತುಗಳು ಏನು ಎನ್ನುವುದನ್ನು ವಿವರಿಸಲು ಸಂಪೂರ್ಣ ವಿಫಲವಾಗಿದೆ. ಇದೇ ಸಂದರ್ಭದಲ್ಲಿ ಈ ವಿಫಲತೆಯನ್ನು ಮಾಧ್ಯಮಗಳ ಮೂಲಕ ಸರಕಾರ ಯಶಸ್ವಿಯಾಗಿ ಮುಚ್ಚಿ ಹಾಕಿದೆ. ‘ನೋಟು ರದ್ದತಿ-ದೇಶದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ವಂಚನೆ’ ಈ ಪುಟ್ಟ ಕೃತಿ ನಿಜಕ್ಕೂ ನೋಟು ರದ್ದತಿಯ ಹಿಂದಿರುವವರು ಯಾರು, ಇದರಿಂದ ಯಾರಿಗೆ ಲಾಭವಾಯಿತು, ಯಾರಿಗೆ ನಷ್ಟವಾಯಿತು ಎನ್ನುವುದನ್ನು ಚರ್ಚಿಸುತ್ತದೆ. ಪ್ರೊ. ಕಮಲ್ ಮಿತ್ರ ಚಿನಾಯ್, ಎಂ. ಸದಾನಂದ, ಪರಂಜಯ್ ಗುಹ, ಎನ್. ಚಿದಂಬರಂ ಈ ನಾಲ್ವರು ತಜ್ಞರು ನೋಟು ರದ್ದತಿಯ ಮೂಲಕ ಸರಕಾರ ಹೇಗೆ ದೇಶದ ಜನರನ್ನು ವಂಚಿಸಿತು ಎನ್ನುವುದನು್ನ ಪರಿಣಾಮಕಾರಿಯಾಗಿ ಮಂಡಿಸುತ್ತಾರೆ.
‘ನೋಟು ರದ್ದತಿ: ನಿರ್ವಾಣಕ್ಕೆ ಅಂತ್ಯವಿಲ್ಲದ ಹಾದಿ’ ಲೇಖನವನ್ನು ಪ್ರೊ. ಕಮಲ್ ಮಿತ್ರ ಬರೆದಿದ್ದಾರೆ. ಯಾವುದೇ ಪೂರ್ವಸಿದ್ಧತೆ ಮತ್ತು ಯೋಜನೆಯಿಲ್ಲದ ಈ ಕ್ರಮದಿಂದಾಗಿ ಆದ ಅನಾಹುತಗಳನ್ನು ಮಂಡಿಸುತ್ತಾರೆ. ಗ್ರಾಮೀಣ ಪ್ರದೇಶಗಳ ಕೃಷಿ ಕಾರ್ಮಿಕರಿಗೆ ಆದ ಹಿನ್ನಡೆಯನ್ನೂ ಅವರು ಪ್ರಸ್ತಾಪಿಸುತ್ತಾರೆ. ಕಪ್ಪು ಹಣವನ್ನು ಮಟ್ಟ ಹಾಕುವ ಹೆಸರಿನಲ್ಲಿ ಮಧ್ಯಮ ವರ್ಗದ ಜನರ ಆರ್ಥಿಕ ಬದುಕಿನ ಮೇಲೆ ಬರೆ ಎಳೆಯಲಾಯಿತು ಎಂದು ಅವರು ಅಭಿಪ್ರಾಯ ಪಡುತ್ತಾರೆ. ನೋಟು ನಿಷೇಧದ ಹಿಂದೆ ಇರುವ ರಾಜಕೀಯ ಕಾರಣ ಮತ್ತು ಕಾರ್ಪೊರೇಟ್ ವಲಯದ ಹಿತಾಸಕ್ತಿಯನ್ನು ಅವರು ಬೆಟ್ಟು ಮಾಡುತ್ತಾರೆ. ಬೇರೆ ಬೇರೆ ತಜ್ಞರು ನೋಟು ನಿಷೇಧದ ಬಗ್ಗೆ ಏನೇನು ಅಭಿಪ್ರಾಯ ತಳೆದಿದ್ದಾರೆ ಎನ್ನುವುದನ್ನು ಅವರು ಇಲ್ಲಿ ವಿವರಿಸುತ್ತಾರೆ. ಪರಂಜಯ್ ಗುಹಾ ಅವರು ಬರೆದಿರುವ ‘ಸಹಾರಾ ಸಮೂಹದಿಂದ ಮೋದಿ ಪಡೆದಿರುವ 55 ಕೋಟಿಯನ್ನು ಹಿನ್ನೆಲೆಯಾಗಿಟ್ಟುಕೊಂಡು’ ಮೋದಿಯ ಅಪ್ರಾಮಾಣಿಕ ರಾಜಕೀಯವನ್ನು ಚರ್ಚಿಸುತ್ತಾರೆ. ಎಂ. ಸದಾನಂದ್ ಅವರು ತಮ್ಮ ಲೇಖನದಲ್ಲಿ, ನೋಟು ನಿಷೇಧ ದೇಶದ ಮೇಲೆ ನಡೆದ ಗದಾ ಪ್ರಹಾರ ಎಂದು ಅಭಿಪ್ರಾಯ ಪಡುತ್ತಾರೆ. ಉತ್ತರವಿಲ್ಲದ ಆರ್ಥಿಕ ಮತ್ತು ರಾಜಕೀಯ ಪ್ರಶ್ನೆಗಳನ್ನು ಅವರು ಮುಂದಿಡುತ್ತಾರೆ. ಎನ್. ಚಿದಂಬರಂ ಅವರು ತಮ್ಮ ಲೇಖನದಲ್ಲಿ ತಪ್ಪಿತಸ್ಥರನ್ನು ಮುಕ್ತಗೊಳಿಸಲು ಮುಗ್ಧರಿಗೆ ನೋಟು ನಿಷೇಧದ ಮೂಲಕ ಶಿಕ್ಷೆ ನೀಡಲಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 50 ರೂಪಾಯಿ.