ಕದ್ರಿ ಪಾರ್ಕ್ನಲ್ಲಿ ರಾಜೀವ್ ಗಾಂಧಿ ಸಂಗೀತ ಕಾರಂಜಿ: ಜೆ.ಆರ್.ಲೋಬೊ

ಮಂಗಳೂರು, ಎ.13: ನಗರದ ಕದ್ರಿ ಜಿಂಕೆ ಉದ್ಯಾನವನದಲ್ಲಿ 5 ಕೋ.ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ರಾಜೀವ್ ಗಾಂಧಿ ಸಂಗೀತ ಕಾರಂಜಿಯು ಶೀಘ್ರ ಉದ್ಘಾಟನೆಗೊಳ್ಳಲಿದೆ ಎಂದು ವಿಧಾನ ಮಂಡಲದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಕದ್ರಿ ಪಾರ್ಕ್ನಲ್ಲಿ ಮುಡಾ, ತೋಟಗಾರಿಕೆ ಇಲಾಖೆ, ನಗರಪಾಲಿಕೆ ಅಧಿಕಾರಿಗಳ ಜೊತೆ ಸ್ಥಳ ವೀಕ್ಷಣೆ ಮಾಡಿ ಅವರು ಮಾತನಾಡುತ್ತಿದ್ದರು.
ಮುಡಾ 30 ಲಕ್ಷ ರೂ. ವೆಚ್ಚ ಮಾಡಿದ್ದು, ಇನ್ನೂ ಇದಕ್ಕೆ ಸುಮಾರು 30 ಲಕ್ಷ ರೂ. ಬೇಕಾಗುತ್ತದೆ. ಈ ಕಾಮಗಾರಿಯನ್ನು ಬಹುತೇಕ ಮಾರ್ಚ್ನಲ್ಲಿ ಮುಗಿಸಿಕೊಡಬೇಕಾಗಿತ್ತು, ಕಾರಣಾಂತರದಿಂದ ಸಾಧ್ಯವಾಗಿಲ್ಲ. ಇದನ್ನು ತ್ವರಿತವಾಗಿ ಮುಗಿಸಿಕೊಡುವಂತೆ ಅಧಿಕಾರಿಗಳಿಗೆ ಜೆ.ಆರ್.ಲೋಬೊ ಸೂಚಿಸಿದರು. ಪಾರ್ಕ್ನಲ್ಲಿ ಕನಿಷ್ಠ 500 ಕಾರುಗಳು ನಿಲ್ಲುವ ವ್ಯವಸ್ಥೆ ಮಾಡಬೇಕಾಗಿದೆ. ಈ ಎಲ್ಲ ಕೆಲಸಗಳೂ ಪೂರ್ಣಗೊಂಡರೆ ಇಲ್ಲಿ ಅತ್ಯಾಧುನಿಕ ಸಂಗೀತ ಕಾರಂಜಿ ನಿರ್ಮಾಣಗೊಳ್ಳಲಿದೆ ಎಂದರು.
ಈ ಸಂದರ್ಭ ಮುಡಾ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಆಯುಕ್ತ ಶ್ರೀಕಾಂತ್, ಕಾರ್ಪೊರೇಟರ್ ಪ್ರವೀಣ್ಚಂದ್ರ ಆಳ್ವ, ತೋಟಗಾರಿಕೆ ಇಲಾಖೆಯ ಜಾನಕಿ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಕೃತಿನ್, ಸಂತೋಷ್, ಅರುಣ್ ಕುವೆಲ್ಲೊ, ಪ್ರಭಾಕರ್ ಯೆಯ್ಯಾಡಿ ಉಪಸ್ಥಿತರಿದ್ದರು.





