ಲಾರಿ ಢಿಕ್ಕಿ: ಇಬ್ಬರು ಮೃತ್ಯು
ಬೆಂಗಳೂರು, ಎ.13: ಕಲ್ಲಿನ ಪುಡಿ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿ ಗ್ಯಾರೇಜ್ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ದೇವನಹಳ್ಳಿಯ ಕೋಡಿಮಂಜೇನ ಹಳ್ಳಿಯ ಲಾರಿ ಮಾಲಕ ನಟರಾಜ್(46) ಮತ್ತು ಅವರ ಭಾಮೈದ ವಿನಯ್(36) ಮೃತಪಟ್ಟಿರುವುದಾಗಿ ಪೊಲೀಸರು ಗುರುತಿಸಿದ್ದಾರೆ.
ನಟರಾಜ್ ಅವರು ಬಸವೇಶ್ವರ ನಗರದ ಕಟ್ಟಡವೊಂದರ ನಿರ್ಮಾಣಕ್ಕೆ ಮರಳು ಸರಬರಾಜು ಮಾಡಲು ಗುತ್ತಿಗೆ ಪಡೆದಿದ್ದರು. ದೇವನಹಳ್ಳಿ ಕಡೆಯಿಂದ ಕಲ್ಲಿನ ಪುಡಿ ತುಂಬಿಕೊಂಡು ಬಸವೇಶ್ವರ ನಗರಕ್ಕೆ ಸಾಗಿಸಲು ಬುಧವಾರ ಮಧ್ಯರಾತ್ರಿ 11:20 ಕ್ಕೆ ಭಾಮೈದ ವಿನಯ್ ಚಲಾಯಿಸುತ್ತಿದ್ದ ಟಿಪ್ಪರ್ ಲಾರಿಯಲ್ಲಿ ಕುಳಿತುಕೊಂಡು ಹೊರಟಿದ್ದಾರೆ.
ಲಾರಿಯು ಕಮಲಾ ನಗರದ 8ನೆ ಕ್ರಾಸ್ನ ವೀರಭದ್ರೇಶ್ವರ ಚಿತ್ರಮಂದಿರ ಬಳಿಯ ವಾಣಿಬಾರ್ ಪಕ್ಕದ ಗ್ಯಾರೇಜ್ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟದ್ದಾರೆ.ಗ್ಯಾರೇಜ್ಗೆ ನುಗ್ಗಿ ಸಿಕ್ಕಿ ಹಾಕಿಕೊಂಡಿದ್ದ ಲಾರಿಯನ್ನು ಕ್ರೈನ್ ಮತ್ತು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ರೇಕ್ ವೈಫಲ್ಯದಿಂದಾಗಿ ಈ ದುರ್ಘಟನೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿರುವ ಜಯನಗರ ಸಂಚಾರ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







