ಬಸ್ ನಿಲ್ದಾಣವನ್ನು ಸುಸ್ಥಿತಿಗೆ ತನ್ನಿ
ಮಾನ್ಯರೆ,
ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿಯ ಸರ್ವಿಸ್ ಬಸ್ ನಿಲ್ದಾಣದ ದುರವಸ್ಥೆಯ ಬಗ್ಗೆ ಹೇಳತೀರದು. ನಿಲ್ದಾಣದುದ್ದಕ್ಕೂ ಹೊಂಡಗುಂಡಿಗಳೇ ತುಂಬಿವೆ. ಬಸ್ ನಿಲ್ದಾಣದ ಮೇಲ್ಛಾವಣಿಯು ಬಿರುಸಿನ ಗಾಳಿಗೆ ಕೆಲವೆಡೆ ಹಾರಿಹೋಗಿದ್ದು, ಒಂದೆರಡು ಕಡೆಗಳಲ್ಲಿ ಮಾತ್ರ ತಗಡು ಹಾಸಲಾಗಿದೆ. ಮಳೆ ಬಂದರಂತೂ ಇಲ್ಲಿ ಬಸ್ ಕಾಯುವ ನಾಗರಿಕರಿಗೆ ಆಸರೆಯೇ ಇಲ್ಲದಂತಾಗಿದೆ. ಈ ಪರಿಸ್ಥಿತಿ ಹೀಗೆಯೇ ಇದ್ದರೆ ಮುಂದಿನ ಮಳೆಗಾಲದಲ್ಲಂತೂ ಬಸ್ ಕಾಯುವ ಪ್ರಯಾಣಿಕರನ್ನು ದೇವರೇ ಕಾಪಾಡಬೇಕು.
ಅಲ್ಲದೆ ಇಲ್ಲಿನ ಶೌಚಾಲಯದ ಪರಿಸ್ಥಿತಿಯಂತೂ ಹೇಳುವುದೇ ಬೇಡ. ಇದು ಸರಿಯಾದ ನಿರ್ವಹಣೆಯಿಲ್ಲದಿರುವುದರಿಂದ ಬಸ್ ಚಾಲಕರು, ನಿರ್ವಾಹಕರು, ಪ್ರಯಾಣಿಕರು ಶೌಚಾಲಯದ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಹಾಗಾಗಿ ಸಭ್ಯ ನಾಗರಿಕರು ಮೂಗು ಮುಚ್ಚಿಕೊಂಡೇ ಅತ್ತಿತ್ತ ಸಂಚರಿಸಬೇಕಾಗುತ್ತದೆ. ಬಸ್ ನಿಲ್ದಾಣದಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ ಸಂಬಂಧಪಟ್ಟವರು ಕಣ್ಣುಮುಚ್ಚಿ ಕುಳಿತಿದ್ದಾರೆ. ಇನ್ನಾದರೂ ಈ ಬಸ್ ನಿಲ್ದಾಣದ ದುರವಸ್ಥೆಯ ಬಗ್ಗೆ ಎಚ್ಚೆತ್ತು ಈ ಬಸ್ ನಿಲ್ದಾಣವನ್ನು ಸುಸ್ಥಿತಿಗೆ ತರುವರೇ?