ಹಾವಂಜೆಯಲ್ಲಿ ಪುರಾತನ ಶಿಲಾಶಾಸನಗಳು ಪತ್ತೆ: ಅಧ್ಯಯನಕ್ಕೆ ಆಗ್ರಹ

ಉಡುಪಿ, ಎ.16: ಹಾವಂಜೆ ಗ್ರಾಮದಲ್ಲಿ ಪ್ರಾಚೀನ ಕಾಲದ ಹಲವು ಶಿಲಾ ಶಾಸನಗಳು ಇತ್ತೀಚೆಗೆ ಪತ್ತೆಯಾಗಿದ್ದು, ಇದರ ಬಗ್ಗೆ ಸರಿಯಾದ ಅಧ್ಯಯನ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಹಾವಂಜೆ ಕೀಳಿಂಜೆಯ ಮದ್ಮಲ್ ಕೆರೆಯ ಬಳಿ ಒಂದು ಶಿಲಾ ಶಾಸನ, ಎರಡು ಗಡಿಕಲ್ಲು, ಎರಡು ಗುಹಾಸಮಾದಿ(ಬಾವಿ)ಗಳು ಪತ್ತೆಯಾಗಿದ್ದವು. ಇದೀಗ ಹಾವಂಜೆಯ ಮುಗ್ಗೇರಿಯ ಮುಗ್ಗೇರಿ ಎಂಬಲ್ಲಿ ಶಿವಲಿಂಗ, ಬಸವ, ಕಾಲುದೀಪ, ಸೂರ್ಯ ಚಂದ್ರ, ಖಡ್ಗ ಮತ್ತು ಲಿಪಿ ಇರುವ ಒಂದು ಶಿಲಾಶಾಸನ ದೊರೆತಿದೆ. ಬೆಳ್ಳಂಪಳ್ಳಿ ಗ್ರಾಮದ ಕಕ್ಕೆಹಳ್ಳಿಯ ರಾಜು ಮಡಿವಾಳ ಬೇಸಾಯ ಮಾಡುವ ಗದ್ದೆಯಲ್ಲಿ ಇದೇ ರೀತಿಯ ಲಿಪಿ ಇರುವ ಶಿಲಾಶಾಸನ, ಬೆಳ್ಳಂಪಳ್ಳಿ ಹಳೆಮನೆ ಕಂಬಳಗದ್ದೆಯಲ್ಲಿ ಇನ್ನೆರಡು ಶಾಸನಗಳು ಸಿಕ್ಕಿವೆ. ಇದರಲ್ಲಿ ಒಂದೇ ತರಹದ ಚಿತ್ರಗಳಿದ್ದು ಹಳೆಗನ್ನಡದಲ್ಲಿ ಬರೆಯಲಾಗಿದೆ.
ಈ ಶಾಸನದ ರಕ್ಷಣೆ ಮತ್ತು ಅದರಲ್ಲಿರುವ ಬರಹದಲ್ಲಿರುವ ಸತ್ಯಾಸತ್ಯತೆ ಯನ್ನು ಹಾಗೂ ಅಂದಿನ ಕಾಲದ ಜೀವನ ಶೈಲಿಯನ್ನು ಅಧ್ಯಯನ ಮಾಡ ಬೇಕಾಗಿದೆ. ಇಂತಹ ಅಮೂಲ್ಯ ಶಿಲಾಶಾಸನವನ್ನು ಪ್ರಾಚ್ಯವಸ್ತು ಇಲಾಖೆ ರಕ್ಷಣೆ ಮಾಡಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಆಗ್ರಹಿಸಿದ್ದಾರೆ.








