ನಂಜನಗೂಡು-ಗುಂಡ್ಲುಪೇಟೆ: ಮುಂದಿನ ಬಾರಿ ನಮ್ಮದೇ ಗೆಲುವು; ಶೋಭಾ
.jpg)
ಪಡುಬಿದ್ರೆ, ಎ.16: ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲಿ ನಾವು ಹೆಚ್ಚಿನ ಮತ ಗಳಿಸಿದ್ದು, ಅತೀವ ಸಂತಸ ತಂದಿದೆ. ಮುಂದಿನ 2018ರ ಚುನಾವಣೆಯಲ್ಲಿ ಆ ಎರಡೂ ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ಎರ್ಮಾಳಿನಲ್ಲಿ ನಡೆದ ಕಾರ್ಯಕ್ರಮವೊಂದರ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ನಾವು ದಿನಕ್ಕೆ ಮೂರ್ನಾಲ್ಕು ಕೇಸುಗಳನ್ನು ನೀಡಿದರೂ, ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ಸ್ಪಂದಿಸಿಲ್ಲ. ಆದ್ದರಿಂದ ನಮ್ಮ ಪಕ್ಷಕ್ಕೆ ಸೋಲಾಗಿದೆ. ಆ ಸೋಲನ್ನೇ ನಾವು ಸವಾಲಾಗಿ ಸ್ವೀಕರಿಸಿ ಮುಂದೆ ಗೆದ್ದೇ ಗೆಲ್ಲುತ್ತೇವೆ ಎಂದರು.
ಈ ಎರಡೂ ಕ್ಷೇತ್ರಗಳ ಸೋಲಿನ ಪರಿಣಾಮ ಯಡಿಯೂರಪ್ಪನವರ ಮೇಲೆ ಬಿದ್ದಿದೆಯಾ ಎಂಬ ಪ್ರಶ್ನೆಗೆ, ರಾಜ್ಯದಲ್ಲಿ ಯಡಿಯೂರಪ್ಪ ಪರವಾದ ವಾತಾವರಣ ಇದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಬದಲಿಸಲಾಗುತ್ತದೆ ಎನ್ನುವುದು ವದಂತಿ. ರಾಜ್ಯಾಧ್ಯಕ್ಷರ ಜೊತೆಗೆ ನಮ್ಮ ಮುಂದಿನ ಮುಖ್ಯ ಮಂತ್ರಿ ಎಂದು ಪಕ್ಷ ಹೇಳಿದೆ. ಬದಲಾವಣೆ ವಿಷಯವನ್ನು ಕಾಂಗ್ರೆಸ್ಸಿಗರು ಮಾತ್ರ ಮಾತನಾಡಬಲ್ಲರು ಎಂದರು.
ನೋ ಕಾಮೆಂಟ್: ಕಾಪು ತಾಲೂಕು ಹೋರಾಟದ ಸಮಯದಲ್ಲಿ ಶಾಸಕ ವಿನಯಕುಮಾರ್ ಸೊರಕೆ ಬಗ್ಗೆ ಟೀಕೆ ಮಾಡಿದ್ದ ಶೋಭಾ ಕರಂದ್ಲಾಜೆಯವರಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ "ನೋ ಕಾಮೆಂಟ್" ಎಂದು ಹೇಳಿದರು.







