ಗದ್ದೆಹಳ್ಳ: ಅಪಾಯ ಆಹ್ವಾನಿಸುತ್ತಿದೆ ಬಾವಿ ಕಟ್ಟೆ

ಸುಂಟಿಕೊಪ್ಪ, ಎ.16: ಇಲ್ಲಿನ ಗದ್ದೆಹಳ್ಳದ ಬಾಲಕರ ವಸತಿ ನಿಲಯದ ಕಡೆ ಹೋಗುವ ರಸ್ತೆಯಲ್ಲಿದ್ದ ಬಾವಿಯ ಕಟ್ಟೆ ಒಡೆದುಹೋಗಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.
ಇಲ್ಲಿನ ಗ್ರಾಪಂಗೆ ಸೇರಿದ ಅಂದಾಜು ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿದ 50 ಅಡಿ ಆಳದ ಬಾವಿಯಿದ್ದು, ಕಟ್ಟೆಯಿಂದ ಕಟ್ಟಿ ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಆದರೆ ಇಲ್ಲಿನ ಗ್ರಾಪಂ ಉಪಯೋಗವಿಲ್ಲದ ಬಾವಿಯನ್ನು ಮುಚ್ಚಿಸುವ ಕಾರ್ಯಕ್ಕೆ ಕೈ ಹಾಕಿ ಬಾವಿಯ ಕಟ್ಟೆಯನ್ನು ಒಡೆದು ಹಾಕಿ ಅದಕ್ಕೆ ಮಣ್ಣು ತುಂಬಿಸಿ ಮುಚ್ಚುವ ಪ್ರಯತ್ನ ನಡೆಸಿದೆ. ಆದರೆ ಆ ಬಾವಿಯು ಬಹಳ ಆಳವಿರುವುದರಿಂದ ಆ ಬಾವಿಗೆ ಮಣ್ಣನ್ನು ಹಾಕುವ ಸಾಹಸವನ್ನು ಕೈ ಬಿಟ್ಟು ತಂತಿ ಬೇಲಿಯನ್ನು ಸುತ್ತಲೂ ಹಾಕುವ ಕಾರ್ಯಕ್ಕೆ ಮುಂದಾಗಿದೆ.
ಈ ಬಾವಿಯ ಸಮೀಪದಲ್ಲೇ ಬಾಲಕರ ವಸತಿ ನಿಲಯ ಮತ್ತು ಅನೇಕ ಮನೆಗಳಿದ್ದು, ಈ ಬಾವಿಯ ಕಟ್ಟೆಯನ್ನು ಒಡೆದು ಹಾಕಿ ಬೇಲಿ ಹಾಕುತ್ತಿರುವುದಿಂದ ಸಣ್ಣ ಮಕ್ಕಳಿಗೆ ಅಪಾಯ ಕಾದಿದೆ. ಅಲ್ಲದೇ ವಸತಿ ನಿಲಯದ ಕಡೆಯಿಂದ ವಾಹನಗಳು ನಿಯಂತ್ರಣ ತಪ್ಪಿದರೇ ಬಾವಿಗೆ ಬೀಳುವ ಅಪಾಯವಿರುವುದರಿಂದ ಕೂಡಲೇ ಗ್ರಾಪಂ ಬೇಲಿಯನ್ನು ತೇಗೆದುಹಾಕಿ ಕಲ್ಲಿನ ಕಟ್ಟೆಯನ್ನು ಕಟ್ಟಿ ಸುರಕ್ಷತೆ ಕಾಪಾಡಬೇಕೆಂದು ಈ ಭಾಗದ ಜನತೆ ಆಗ್ರಹಿಸಿದ್ದಾರೆ.





