ಸ್ವಾಭಿಮಾನಿ ಮಹಿಳೆಯ ದುಡಿಮೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು: ಸಂಕಷ್ಟದಲ್ಲಿ ಕುಟುಂಬ

ಸಕಲೇಶಪುರ, ಎ.16: ಗಂಡನಿಂದ ಬೇರೆಯಾಗಿದ್ದರೂ ಸ್ವಾಭಿಮಾನಿಯಾಗಿ ಬದುಕಬೇಕೆಂದು, ಕಷ್ಟಪಟ್ಟು ತನ್ನ ಮಕ್ಕಳ ಭವಿಷ್ಯಕ್ಕಾಗಿ ಮಹಿಳೆಯೊಬ್ಬರು ಬೆಳೆಸಿದ್ದ ಕಾಳು ಮೆಣಸಿನ ನರ್ಸರಿಗೆ ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿದ್ದು, 60 ಸಾವಿರ ಸಸಿಗಳು ನಾಶಹೊಂದಿರುವ ಘಟನೆ ತಾಲೂಕಿನ ಕುನಿಗನಹಳ್ಳಿ ಗ್ರಾಪಂ ವ್ಯಾಪ್ತಿಯ ಚನ್ನಾಪುರ ಗ್ರಾಮದಲ್ಲಿ ನಡೆದಿದೆ
ಗ್ರಾಮದ ಮಹಿಳೆ ಹೀನಾ ಕೌಸರ್ (ಮೈಮೂನಾ) ಬೆಳೆಸಿದ್ದ ನರ್ಸರಿಗೆ ದುಷ್ಕರ್ಮಿಗಳು ನುಗ್ಗಿ ಕಳೆನಾಶಕ ಸಿಂಪಡಿಸಿದ್ದಾರೆ. ರವಿವಾರ ಬೆಳಗ್ಗೆ ಸಸಿಗಳಿಗೆ ನೀರು ಹಾಕುವುದಕ್ಕೆ ಹೋದಾಗ ಎಲೆಗಳೆಲ್ಲವೂ ಕೆಂಪು ಬಣ್ಣಕ್ಕೆ ತಿರುಗಿ ಗಿಡಗಳು ನಾಶವಾಗಿರುವುದು ಕಂಡು ಬಂದಿದೆ. ವಿಷಯ ತಿಳಿದು ಗ್ರಾಮಸ್ಥರು ಹಾಗೂ ಪ್ರಗತಿಪರ ರೈತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಳೆ ನಾಶಕ (ಕಾಫಿ ತೋಟಗಳಲ್ಲಿ ಉಪಯೋಗಕ್ಕೆ ಬಾರದ ಕಾಡು ಜಾತಿಯ ಸಣ್ಣ ಗಿಡಗಳನ್ನು ನಾಶಮಾಡಲು ಉಪಯೋಗಿಸುವ ವಿಷ) ಸಿಂಪಡಿಸಿರುವುದು ಕಂಡು ಬಂದಿದೆ. ಸುಮಾರು 60 ಸಾವಿರ ಸಸಿಗಳಿಗೆ ಕಳೆನಾಶಕ ಸಿಂಪಡಿಸಲಾಗಿದೆ.
ಈ ಪ್ರಕರಣ ಬೆಳಕಿಗೆ ಬರಬಾರದು ಹಾಗೂ ಯಾರ ಮೇಲೂ ಅನುಮಾನ ಬರಬಾರದು ಎನ್ನುವ ದೃಷ್ಟಿಯಿಂದ ನಿಧಾನವಾಗಿ ಕಳೆ ನಾಶಮಾಡುವ ಔಷಧಿಯನ್ನು ಸಿಂಪಡಿಸಲಾಗಿದೆ.
ಜಿಲ್ಲೆಯ ಅರಕಲುಗೂಡು ತಾಲ್ಲೂಕಿನ ವ್ಯಕ್ತಿಯೊಂದಿಗೆ ಮದುವೆಯಾಗಿದ್ದ ಹಿನಾ ಕೌಸರ್ ಅವರ ಪತಿ ಇನ್ನೊಬ್ಬಳ ಸಂಗಕ್ಕೆ ಬಿದ್ದಾಗ ಸ್ವಾಭಿಮಾನಿಯಾಗಿ ಬದುಕಲು ನಿರ್ಧರಿಸಿ ಹೋಟೆಲ್ ಉದ್ಯಮಮವನ್ನು ಕೆಲಕಾಲ ನಡೆಸಿ ನಂತರ ಕಾಳು ಮೆಳಸಿನ ನರ್ಸರಿ ಪ್ರಾರಂಭಿಸಿದ್ದರು. ಕಳೆದ ವರ್ಷ ಸುಮಾರು 10 ಲಕ್ಷ ರೂ. ಲಾಭ ಗಳಿಸಿರುವ ಕೌಸರ್ ದಿನಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಮನೆ ಹಿಂಭಾಗದ ಬೇರೆಯವರ ಜಮೀನಿನಲ್ಲಿ ಎರಡು ವರ್ಷಗಳಿಂದ ಕಾಳು ಮೆಣಸು ಬಳ್ಳಿಯ ಸಸಿಗಳನ್ನು ಬೆಳೆಸಿ ಮೂರು ಮಕ್ಕಳ ಸಂಸಾರವನ್ನು ನಡೆಸುತ್ತಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚು ಲಾಭ ಗಳಿಸಬೇಕು ಎನ್ನುವ ಉದ್ದೇಶದಿಂದ ಸುಮಾರು 10 ಲಕ್ಷ ರೂ. ಖರ್ಚು ಮಾಡಿ ಶೇಡ್ನೆಟ್ಗಳನ್ನೆಲ್ಲಾ ಹಾಕಿ 1 ಲಕ್ಷ ಸಸಿಗಳ ಗುರಿ ಹೊಂದಿದ್ದು. ಈಗಾಗಲೇ 60 ಸಾವಿರ ಸಸಿಗಳ ಬುಟ್ಟಿ ತಯಾರಾಗಿದ್ದವು. ಚಿಗುರು ಒಡೆದು ಮೂರು ನಾಲ್ಕು ಎಲೆಗಳು ಬೆಳೆದು ಸಸಿಗಳು ಫಲವತ್ತಾಗಿದ್ದವು. ಇದು
"ಯಾರೋ ಉದ್ದೇಶ ಪೂರ್ವಕವಾಗಿಯೇ ಈ ದುಷ್ಕೃತ್ಯ ಎಸಗಿದ್ದಾರೆ. ಇದು ಸಾಮೂಹಿಕ ಕೊಲೆಗಿಂತಲೂ ದೊಡ್ಡ ಅಪರಾಧವಾಗಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಗ್ರಾಮದ ಕಾಫಿ ಬೆಳೆಗಾರ ಶೇಖರ್ರಾಜು ಆಗ್ರಹಿಸಿದ್ದಾರೆ.
ಗಡಿಪಾರು ಮಾಡಬೇಕು: ಲಕ್ಷಗಟ್ಟಲೆ ಸಾಲ ಮಾಡಿ ಕುಟುಂಬದ ನಿರ್ವಹಣೆಗೆ, ಸ್ವಾಭಿಮಾನದ ಬದುಕಿಗಾಗಿ ಕಷ್ಟಪಟ್ಟು ಬೆಳೆಸಿದ್ದ ಸಸಿಗಳನ್ನು ನಾಶ ಮಾಡಿರುವ ದುಷ್ಕರ್ಮಿಗಳನ್ನು ತಾಲೂಕಿನಿಂದಲೇ ಗಡಿಪಾರು ಮಾಡಬೇಕು ಎಂದು ಕುನಿಗನ ಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಸಾವಿತ್ರಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







