ಮೂಲ್ಕಿ ಸಬ್ರಿಜಿಸ್ಟ್ರಾರ್ ಕಚೇರಿ ಅವ್ಯವಸ್ಥೆ: ಗ್ರಾಹಕರ ಆಕ್ರೋಶ
ಮುಲ್ಕಿ, ಎ.17: ಮುಲ್ಕಿ ಸಬ್ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಯನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.
ಮಂಗಳೂರಿನ ವಕೀಲ ದಯಾನಂದ ಕೋಟ್ಯಾನ್ ಸೇರಿದಂತೆ ಹಲವರು ಟೋಕನ್ ಪಡೆದುಕೊಂಡು ಮುಲ್ಕಿ ಸಬ್ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದರು. ಆದರೆ, ಕಚೇರಿಯಲ್ಲಿ ಸಿಬ್ಬಂದಿಯ ಕೊರತೆಯಿಂದ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಮುಲ್ಕಿ ಸಬ್ರಿಜಿಸ್ಟ್ರಾರ್ ಕಚೇರಿಯ ಅವ್ಯವಸ್ಥೆ ಬಗ್ಗೆ ಮಂಗಳೂರು ಉಪ ರಿಜಿಸ್ಟ್ರಾರ್ಗೆ ದೂರವಾಣಿ ಮೂಲಕ ತಿಳಿಸಲಾಯಿತು. ಆದರೂ ಪ್ರಯೋಜನವಾಗಿಲ್ಲ. ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಇಬ್ಬರು ಸಿಬ್ಬಂದಿಯನ್ನು ಮುಲ್ಕಿ ಕಚೇರಿಗೆ ಕಳಿಸಿದ್ದಾರೆ ಎಂದು ದಯಾನಂದ್ ತಿಳಿಸಿದ್ದಾರೆ.
ಮಂಗಳೂರಿನಿಂದ ವರ್ಗಾವಣೆಗೊಂಡಿರುವ ಸಬ್ ರಿಜಿಸ್ಟ್ರಾರ್ ಗೆ ಮುಲ್ಕಿ ಕಚೇರಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣದಿಂದಾಗಿ ಮುಲ್ಕಿ ಕಚೇರಿಯ ಎಲ್ಲ ಕೆಲಸ ಸ್ಥಬ್ಧಗೊಂಡಿದೆ ಎಂದು ಅವರು ದೂರಿದ್ದಾರೆ.
ಮುಲ್ಕಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಶೌಚಾಲಯದ ವ್ಯವಸ್ಥೆ, ಅಂತರ್ಜಾಲ ವ್ಯವಸ್ಥೆ ದುಸ್ಥಿತಿಯಲ್ಲಿದೆ. ಕಳೆದ ದಿನಗಳ ಹಿಂದೆ ರಿಜಿಸ್ಟ್ರಾರ್ ಕಚೇರಿಯ ವಿದ್ಯುತ್ ಬಿಲ್ಲು ಪಾವತಿಸದೆ ವಿದ್ಯುತ್ ಸ್ಥಗಿತಗೊಂಡು ಗ್ರಾಹಕರು ಪರದಾಡವಂತಾಗಿತ್ತು.
ಈ ಕೂಡಲೇ ಮುಲ್ಕಿ ಸಬ್ರಿಜಿಸ್ಟ್ರಾರ್ ಕಚೇರಿಗೆ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕ ಹಾಗೂ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ದಯಾನಂದ್ ಅವರು ಜಿಲ್ಲಾಧಿಕಾರಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದಾರೆ.







