ವಿದ್ಯಾವಂತರಿಂದಲೇ ಅಸ್ಪಶ್ಯತೆ ಆಚರಣೆ ಹೆಚ್ಚಳ: ಡಾ.ರವೀಂದ್ರನಾಥ ಆತಂಕ
ಬೆಂಗಳೂರು, ಎ.18: ಆಧುನಿಕ ಯುಗದಲ್ಲಿ ವಿದ್ಯಾವಂತರಲ್ಲಿಯೇ ಅಸ್ಪಶ್ಯತೆ ಆಚರಣೆ ಹೆಚ್ಚಿದ್ದು, ಇದರ ವಿರುದ್ಧ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ರವೀಂದ್ರನಾಥ ತಿಳಿಸಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ರವರ 126ನೆ ಜನ್ಮದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಅಜ್ಞಾನದಿಂದ ಅಸ್ಪಶ್ಯತೆ ಆಚರಣೆ ಮಾಡಲಾಗುತ್ತಿತ್ತು. ಆದರೆ, ಇಂದಿನ ಆಧುನಿಕ ಯುಗದಲ್ಲಿ ಉನ್ನತ ವ್ಯಾಸಂಗ ಮಾಡಿರುವ ವಿದ್ಯಾವಂತರು ಅಸ್ಪಶ್ಯತೆ ಆಚರಣೆ ಮಾಡುತ್ತಿದ್ದಾರೆ. ಆ ಮೂಲಕ ಒಂದು ವರ್ಗವನ್ನು ಎಲ್ಲ ರೀತಿಯ ಅವಕಾಶಗಳಿಂದಲೂ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೇವರ ಕಣ್ಣಲ್ಲಿ ಎಲ್ಲ ಮನುಷ್ಯರು ಸಮಾನರು ಎಂದು ಗಾಂಧೀಜಿ ಪ್ರತಿಪಾದಿಸುತ್ತಿದ್ದರು. ಈ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ದೇವರ ಕಣ್ಣಲ್ಲಿ ಸಮಾನರಾಗುವುದಕ್ಕಿಂತ ಮನುಷ್ಯರ ಕಣ್ಣಲ್ಲಿ ಮತ್ತೊಬ್ಬ ಮನುಷ್ಯನಾಗಿ ಕಾಣಬೇಕಾದ ವಾತಾವರಣ ನಿರ್ಮಾಣವಾಗಬೇಕು ಎಂದು ಡಾ.ರವೀಂದ್ರನಾಥ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಾಗಿ ಕೆಲಸ ಮಾಡಿದವರಲ್ಲ, ಎಲ್ಲ ಜಾತಿಯ ಬಡವರಿಗಾಗಿ ಹಾಗೂ ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅವರು ಸದನದಲ್ಲಿ ಮಂಡಿಸಿದ ಹಿಂದೂ ಕೋಡ್ ಬಿಲ್ನಿಂದಾಗಿ ಮಹಿಳಾ ಸಮುದಾಯ ಅನೇಕ ಸೌಲಭ್ಯಗಳನ್ನು ಪಡೆಯುವಂತಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ನ್ಯಾಯಾಧೀಶ ಎಚ್.ಬಿಲ್ಲಪ್ಪ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ರಚಿಸಿದ್ದಾರೆ. ಆದರೆ, ಅದನ್ನು ಅನುಷ್ಠಾನಕ್ಕೆ ತರುವಂತಹ ಅಧಿಕಾರ ಹೊಂದಿರುವವರು ತೀರ ಭ್ರಷ್ಟರಾಗಿರುವುದರಿಂದ ಸಂವಿಧಾನದ ಆಶಯ ಇಲ್ಲಿಯವರೆಗೂ ಈಡೇರಿಲ್ಲ ಎಂದು ವಿಷಾದಿಸಿದರು.
ದೇಶದ ಭವಿಷ್ಯವನ್ನು ಸುಭದ್ರವಾಗಿ ಕಟ್ಟಲು ಹೊಣೆಹೊತ್ತಿರುವ ಯುವಜನತೆ ಡಾ.ಬಿ.ಆರ್.ಅಂಬೇಡ್ಕರ್ರವರ ಬರಹಗಳನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು. ಹಾಗೂ ಅಸ್ಪೃಶ್ಯತಾ ಆಚರಣೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ನೇತ್ರ ತಜ್ಞ ಸುರೇಂದ್ರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.







