ಕುತ್ತಾರು ಪದವಿನಲ್ಲಿ ತುರವೇ ಮುನ್ನೂರು ಘಟಕದ ನೂತನ ಕಚೇರಿ ಉದ್ಘಾಟನೆ

ಉಳ್ಳಾಲ, ಎ.18: ನಮ್ಮ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡುಗಳಲ್ಲಿ ಪ್ರಾದೇಶಿಕ ಭಾಷೆ, ಕ್ರೀಡೆಗಳಿಗೆ ಮನ್ನಣೆ ಹಾಗೂ ಪ್ರಾದೇಶಿಕ ಜನರು ಉದ್ಯೋಗ ಗಿಟ್ಟಿಸಿರುವುದು ಪ್ರಾದೇಶಿಕ ಸಂಘಟನೆಯ ಹೋರಾಟದ ಫಲವಾಗಿದ್ದು, ಆ ನಿಟ್ಟಿನಲ್ಲಿ ತುಳುನಾಡಲ್ಲೂ ಪ್ರಾದೇಶಿಕ ಸಂಘಟನೆಗಳು ಪ್ರಬಲವಾಗಬೇಕಾಗಿದೆ ಎಂದು ತು.ರ.ವೇ. ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದರು.
ಕುತ್ತಾರು ಪದವಿನಲ್ಲಿ ಆರಂಭಗೊಂಡ ತುಳುನಾಡ ರಕ್ಷಣಾ ವೇದಿಕೆ ಮುನ್ನೂರು ಗ್ರಾಮ ಘಟಕದ ನೂತನ ಕಚೇರಿಯನ್ನು ಮಂಗಳವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.
ತುಳುನಾಡಿನಲ್ಲಿಂದು ಸರಿಸುಮಾರು 2,000 ವರುಷದ ಹಿನ್ನೆಲೆ ಇರುವ ತುಳು ಭಾಷೆಯು ಅನ್ಯ ಭಾಷೆಗಳ ಆಕ್ರಮಣದಿಂದಾಗಿ ಕ್ರಮೇಣ ನಶಿಸಿ ಹೋಗುತ್ತಿದೆ ಎಂದರು.
ಮುನ್ನೂರು ತು.ರ.ವೇ. ಘಟಕದ ನೂತನ ಅಧ್ಯಕ್ಷರಾಗಿ ಲಿಯೋ ಡಿಸೋಜ ಅಧಿಕಾರ ಸ್ವೀಕರಿಸಿದರು. ನೂತನವಾಗಿ ಸಂಘಟನೆಗೆ ಸೇರಿದ ಕಾರ್ಯಕರ್ತರಿಗೆ ಸಂಘಟನೆಯ ಧ್ವಜವನ್ನು ನೀಡಿ ಬರಮಾಡಿಕೊಳ್ಳಲಾಯಿತು.
ಮದನಿ ನಗರ ಜುಮಾ ಮಸೀದಿಯ ಖತೀಬ್ ಉಸ್ಮಾನ್ ಚೌಹರಿ ನೆಲ್ಯಾಡಿ, ತು.ರ.ವೇ. ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಿರಾಜ್ ಅಡ್ಕರೆ, ಕೇಂದ್ರಿಯ ಮಂಡಳಿ ಪ್ರ.ಕಾ. ಪ್ರಶಾಂತ್ ಭಟ್ ಕಡಬ, ಕೋಶಾಧಿಕಾರಿಗಳಾದ ರಶೀದ್ ಜಪ್ಪು, ಉಪಾಧ್ಯಕ್ಷ ಜೆ.ಇಬ್ರಾಹಿಂ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿಕಾ ಜೈನ್, ಜಿಲ್ಲಾ ಪ್ರ.ಕಾ ಆನಂದ್ ಅಮೀನ್ ಅಡ್ಯಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಶಕ್ತಿನಗರ, ಪ್ರ.ಕಾ ರಕ್ಷಿತ್ ಕೆ ಬಂಗೇರ, ಕ್ಷೇತ್ರದ ಉಪಾಧ್ಯಕ್ಷ ರಹೀಂ ಕುತ್ತಾರು, ಪ್ರ.ಕಾ ರಾಜೇಶ್ ಕುತ್ತಾರು, ಕ್ಷೇತ್ರ ಮಹಿಳಾ ಘಟಕಾಧ್ಯಕ್ಷೆ ವಿದ್ಯಾ ಯು.ಜೋಗಿ, ಯುವ ಘಟಕದ ಅಧ್ಯಕ್ಷ ಅರುಣ್ ಡಿಸೋಜ, ಮೊದಲಾದವರು ಉಪಸ್ಥಿತರಿದ್ದರು.







