ಎ.23: ಉಡುಪಿಯಲ್ಲಿ ಸಂವಿಧಾನ ರಕ್ಷಣೆಗಾಗಿ "ಜೈಭೀಮ್ ಜಾಥಾ"
ಉಡುಪಿ, ಎ.18: ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 126 ನೇ ಜನ್ಮದಿನದ ಪ್ರಯುಕ್ತ ಉಡುಪಿ ಜಿಲ್ಲೆಯಾದ್ಯಂತ ಸಂವಿಧಾನ ಮಹತ್ವ ಮತ್ತು ಅದಕ್ಕೆ ಬಂದೊದಗುತ್ತಿರುವ ಆತಂಕಗಳನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಹಾಗೂ ಅಂಬೇಡ್ಕರ್ ಈ ದೇಶಕ್ಕೆ ನೀಡಿದ ಮಹತ್ವದ ಸಂವಿಧಾನವನ್ನು ರಕ್ಷಿಸುವ ಸಲುವಾಗಿ "ಸಂವಿಧಾನ ರಕ್ಷಣೆಗಾಗಿ - ಜೈಭೀಮ್ ರ್ಯಾಲಿ"ಯನ್ನು ಎ.23ರ ರವಿವಾರ ಹಮ್ಮಿಕೊಳ್ಳಲಾಗಿದೆ.
ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಮತ್ತು ದಲಿತ ಸಂಘಟನೆ ಗಳ ಒಕ್ಕೂಟ ಜಂಟಿಯಾಗಿ ಈ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ದಲಿತ ದಮನಿತ ವರ್ಗದ ಪರವಾಗಿರುವ ಜಿಲ್ಲೆಯ ಅನೇಕ ಸಂಘಟನೆಗಳು ಈ ಜಾಥಾದೊಂದಿಗೆ ಕೈಜೋಡಿಸಲು ಮುಂದೆ ಬಂದಿದ್ದು ಯಶಸ್ಸಿಗೆ ಮತ್ತು ಸಂವಿಧಾನದ ರಕ್ಷಣೆಗೆ ಸಹಕರಿಸಲಿವೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.
"ಸಂವಿಧಾನ ಸಂರಕ್ಷಣೆಗಾಗಿ - ಜೈಭೀಮ್ ರ್ಯಾಲಿ" ಎ.23ರಂದು ಉಡುಪಿ ಜಿಲ್ಲೆಯ ಮೂರು ತಾಲೂಕುಗಳಿಂದ ಹೊರಡಲಿವೆ. ಅಂದು ಬೆಳಗ್ಗೆ 8:30ಕ್ಕೆ ಗಂಗೊಳ್ಳಿಯಿಂದ ಬೈಕ್ ರ್ಯಾಲಿ ಪ್ರಾರಂಭಗೊಳ್ಳಲಿದ್ದು, ಅಲ್ಲಿಂದ ಹೊರಡುವ ತಂಡವು ತಲ್ಲೂರು ಸರ್ಕಲ್ಗೆ ಬಂದು ಸರ್ಕಲ್ನಲ್ಲಿ ಜಾಥಾ ಉದ್ಘಾಟನೆ ಗೊಳ್ಳಲಿದೆ. ಅದೇ ರೀತಿ ಬೆಳಗ್ಗೆ 9 ಗಂಟೆಗೆ ಕಾರ್ಕಳ ಬಸ್ ನಿಲ್ದಾಣದ ಬಳಿ ಹಾಗೂ ಹೆಜಮಾಡಿಯಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಲಾಗುವುದು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳಿಯ ತಾಲೂಕು ಹಾಗೂ ಗ್ರಾಮ ಶಾಖೆಗಳ ದಲಿತ ಸಂಘಟನೆಗಳ ನಾಯಕರು, ಆ ಪ್ರದೇಶದ ವಿವಿಧ ಧರ್ಮಗುರುಗಳು ಪಾಲ್ಗೊಳ್ಳಲಿದ್ದಾರೆ. ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ರಾಜ್ಯ ಮುಖಂಡರಾದ ಬಿ.ಆರ್.ಭಾಸ್ಕರ ಪ್ರಸಾದ್, ಹುಲಿಕುಂಟೆ ಮೂರ್ತಿ, ಹರ್ಷಕುಮಾರ್ ಕುಗ್ವೆ, ವಿಕಾಸ್ ಮೌರ್ಯ, ಎಸ್.ಸಿ.ದಿನೇಶ್ ಕುಮಾರ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮೊದಲಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪುರ ತಾಲೂಕಿನಿಂದ ಹೊರಡುವ ಜೈಭೀಮ್ ರ್ಯಾಲಿ ಗಂಗೊಳ್ಳಿ ಯಿಂದ ಹೆಮ್ಮಾಡಿ ತ್ರಾಸಿ ಮೂಲಕ ತಲ್ಲೂರು ಕ್ರಾಸ್ಗೆ ಬಂದು ಅಲ್ಲಿಂದ ಕುಂದಾಪುರ ನಗರ , ಶಾಸ್ತ್ರಿ ಸರ್ಕಲ್ನಲ್ಲಿ ಸಾರ್ವಜನಿಕ ಸಭೆ - ಕೋಟೇಶ್ವರ- ತೆಕ್ಕಟ್ಟೆ- ಕೋಟ-ಸಾಲಿಗ್ರಾಮ- ಸಾಸ್ತಾನ-ಮಾಬುಕಳ-ಬ್ರಹ್ಮಾವರ- ಸಂತೆಕಟ್ಟೆ ಯ ಮೂಲಕ ಉಡುಪಿ ತಲುಪಲಿದೆ.
ಕಾರ್ಕಳ ತಾಲೂಕಿನ ರ್ಯಾಲಿಯು ಬೈಲೂರು- ಅಜೆಕಾರು- ಮುನಿಯಾಲು- ವರಂಗ- ಮುದ್ರಾಡಿ - ಹೆಬ್ರಿ- ಕರ್ಜೆ- ಪೆರ್ಡೂರು- ಹಿರಿಯಡ್ಕ- ಪರ್ಕಳ- ಮಣಿಪಾಲ-ಮಂಚಿಕೇರಿ-ಎಂಜಿಎಂ-ಕಲ್ಸಂಕ ಮೂಲಕ ಉಡುಪಿ ತಲುಪಲಿದೆ. ಹೆಜಮಾಡಿಯಿಂದ ಹೊರಡುವ ಉಡುಪಿ ತಾಲೂಕು ರ್ಯಾಲಿ ಪಡುಬಿದ್ರಿ- ಉಚ್ಚಿಲ- ಕಾಪು- ಇನ್ನಂಜೆ- ಶಿರ್ವ- ಮಂಚಕಲ್- ಬಂಟಕಲ್- ಬೆಳ್ಳೆ- ಮಣಿಪುರ- ಕಟಪಾಡಿ- ಕಪ್ಪೆಟ್ಟು- ಮಲ್ಪೆ- ತೊಟ್ಟಂ- ಗುಜ್ಜರಬೆಟ್ಟು- ಹೂಡೆ- ಕೆಮ್ಮಣ್ಣು- ನೇಜಾರು- ಸಂತೆಕಟ್ಟೆ- ಪುತ್ತೂರು-ನಿಟ್ಟೂರು- ಮೂಡುಬೆಟ್ಟು- ಆದಿ ಉಡುಪಿ- ಮೂಲಕ ಉಡುಪಿ ಪ್ರವೇಶಿಸಲಿದೆ. ಜಾಥಾ ತಲುಪುವ ಪ್ರದೇಶ ಗಳಲ್ಲಿ ಡಾ.ಅಂಬೇಡ್ಕರ್ ಚಿಂತನೆ ಮತ್ತು ಸಂವಿಧಾನದ ಮಹತ್ವಗಳ ಬಗ್ಗೆ ಜನ ಜಾಗೃತಿಯನ್ನು ಮೂಡಿಸಲಾಗುವುದು.
ಸಂಜೆ ಉಡುಪಿಯಲ್ಲಿ ಜಾಥಾಗಳು ಒಂದುಗೂಡಲಿದ್ದು, ನಗರದ ಹೃದಯಭಾಗದಲ್ಲಿರುವ ಜಟ್ಕಾ ಸ್ಟ್ಯಾಂಡ್ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪದ ಅಧ್ಯಕ್ಷತೆಯನ್ನು ಸಂವಿಧಾನ ಸಂರಕ್ಷಣಾ ಜೈಭೀಮ್ ಮಹಾರ್ಯಾಲಿಯ ಗೌರವಾದ್ಯಕ್ಷ ವಂ.ವಿಲಿಯಂ ಮಾರ್ಟೀಸ್ ವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ಚಿಂತಕ, ಅಂಕಣಕಾರ ಶಿವಸುಂದರ್, ಜನಪರ ಹೋರಾಟಗಾರ ನೂರ್ ಶ್ರೀಧರ್ ಮತ್ತು ಕರ್ನಾಟಕ ಜನಶಕ್ತಿ- ಮಹಿಳಾ ಮುನ್ನಡೆ ಸಂಘಟನೆ ಮುಖಂಡರಾದ ಮಲ್ಲಿಗೆ ಭಾಗವಹಿಸಲಿದ್ದಾರೆ. ಕಳೆದ ವರ್ಷ ಉಡುಪಿ ಚಲೋವನ್ನು ಯಶಸ್ವಿಯಾಗಿ ಸಂಘಟಿಸಿದ ರೀತಿಯಲ್ಲೇ ಈ ಸಂವಿಧಾನ ಸಂರಕ್ಷಣಾ - ಜೈಭೀಮ್ ಮಹಾ ರ್ಯಾಲಿಯನ್ನು ಸಂಘಟಿಸಲಾಗುತ್ತಿದೆ. ಇದಕ್ಕಾಗಿ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ ಎಂದು ಸಂಘಟಕರ ಸಂಯುಕ್ತ ಹೇಳಿಕೆ ತಿಳಿಸಿದೆ.







