ಎ.22, 23: ದಡ್ಡಲಕಾಡು ಸ.ಹಿ.ಪ್ರಾ. ಶಾಲೆಯ ಹೊಸ ಕಟ್ಟಡ ಉದ್ಘಾಟನೆ

ಬಂಟ್ವಾಳ, ಎ. 19: ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ದಶಮಾನೋತ್ಸವದ ಅಂಗವಾಗಿ ಕ್ಲಬ್ನ ಶಾಲಾ ದತ್ತು ಯೋಜನೆಯಡಿ ನಿರ್ಮಾಣಗೊಂಡ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ ಎ.22 ಮತ್ತು ಎಪ್ರಿಲ್ 23ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸುಮಾರು 1.5 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದ್ದು, ಎರಡು ಅಂತಸ್ತಿನ, 14 ಕೊಠಡಿಗಳ ಸುಸಜ್ಜಿತ ಕಟ್ಟಡ ಇದಾಗಿದೆ. ಎ. 22ರಂದು ಸಂಜೆ 3 ಗಂಟೆಗೆ ದೇಶಾದ್ಯಂತ ಏಕರೂಪಶಿಕ್ಷಣ ಜಾರಿಗೆ ಆಗ್ರಹಿಸಿ "ಒಂದೇ ದೇಶ ಒಂದೇ ಶಿಕ್ಷಣ" ಎನ್ನುವ ಘೋಷವಾಕ್ಯದಡಿ ಕೈಕಂಬದ ಪೊಳಲಿ ದ್ವಾರದ ಬಳಿಯಿಂದ ದಡ್ಡಲಕಾಡು ಶಾಲೆಯವರೆಗೆ ವಾಹನ ಜಾಥಾ ನಡೆಯಲಿದೆ ಎಂದು ತಿಳಿಸಿದರು.
ಅಂದು ಸಂಜೆ 5 ಗಂಟೆಗೆ ದಡ್ಡಲಕಾಡು ವಿದ್ಯಾದೇಗುಲದ ಲೋಕಾರ್ಪಣೆಯಾಗಲಿದೆ. 5:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ ಸಚಿವ ಬಿ.ರಮಾನಾಥ ರೈ ವಹಿಸಲಿದ್ದಾರೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪಬ್ಲಿಕ್ ಟಿ.ವಿ.ಯ ಮುಖ್ಯಸ್ಥ ಎಚ್.ಆರ್.ರಂಗನಾಥ್ ಪ್ರಧಾನ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ರಾಜೀವ ಪ್ರತಾಪ್ ರೂಢಿ, ಅನಂತಕುಮಾರ್, ರಮೇಶ ಜಿಗಜಿಣಗಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ.ಗಣೇಶ್ ಕಾರ್ಣಿಕ್, ಪ್ರತಾಪ್ಚಂದ್ರ ಶೆಟ್ಟಿ, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಮೊದಲಾದ ಅನೇಕ ಗಣ್ಯರು ಬಾಗವಹಿಸಲಿದ್ದಾರೆ.
ಆ ದಿನ ಸಂಜೆ 4:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು, ವೀರ ಬಬ್ರುವಾಹನ ಕಿರುನಾಟಕ ನಡೆಯಲಿದೆ. ಪುರಷೋತ್ತಮ ಅಂಚನ್ ರಚನೆ ಮತ್ತು ನಿರ್ದೇಶನದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ನ ಸದಸ್ಯರೇ ಅಭಿನಯಿಸುವ "ಏರ್ದಾದಲ ಪನಡ್ ಉಂದು ಸತ್ಯ" ಎನ್ನುವ ನಾಟಕ ನಡೆಯಲಿದೆ ಎಂದರು.
ಎ.23ರಂದು ಅಲ್ಕಾರ್ಗೋ ಲಾಜಿಸ್ಟಿಕ್ ಲಿ.ನ ಮುಖ್ಯಸ್ಥ ನಕ್ರೆ ಸುರೇಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಜಿ.ವಿ. ಸನ್ಸ್ನ ಸೀತಾರಾಂ ಪೂಜಾರಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಟಿ.ಶಿವಕುಮಾರ್, ರಾಜ್ಯ ಕಬಡ್ಡಿ ಅಸೋಸಿಯೇಷನ್ನ ಉಪಾಧ್ಯಕ್ಷ ಪುರುಷೋತ್ತಮ ಪೂಜಾರಿ ಬಿ., ಉದ್ಯಮಿ ಜಿತೇಂದ್ರ ಕೊಟ್ಟಾರಿ, ಜಿ.ಪಂ.ಮಾಜಿ ಸದಸ್ಯೆ ಸುಲೋಚನಾ ಭಟ್ ಸೇರಿಂದತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 7.30ಕ್ಕೆ ಮಂಗಳೂರಿನ ಸನಾತನ ನಾಟ್ಯಲಯದವರಿಂದ ಸನಾತನ ರಾಷ್ಟ್ರಾಂಜಲಿ ನಡೆಯಲಿದೆ, ರಾತ್ರಿ 9 ಕ್ಕೆ ಬೈಲೂರು ಚೈತನ್ಯ ಕಲಾವಿದರಿಂದ ಸ್ಟಾರ್ ನಾಟಕ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ದಡ್ಡಲಕಾಡು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪೂವಪ್ಪ ಮೆಂಡನ್, ದುರ್ಗಾ ಪ್ರೆಂಡ್ಸ್ ಕ್ಲಬ್ನ ಸದಸ್ಯರಾದ ಆನಂದ ಕೆ.ರಾಮನಗರ, ಪುರಿಷೋತ್ತಮ ಅಂಚನ್ ಬಾಲಕೃಷ್ಣ ಜಿ. ಉಪಸ್ಥಿತರಿದ್ದರು.







